ಕೊರೊನಾ ಸೋಂಕಿನ ಭೀತಿಯಿಂದ ರಾಷ್ಟ್ರಾದ್ಯಂತ ಲಾಕ್ ಡೌನ್ ಜಾರಿಯಾಗಿ ಮೂರು ತಿಂಗಳು ಎಲ್ಲಾ ಗುಡಿ- ಗುಂಡಾರ, ದೇವಾಲಯ,
ಧಾರ್ಮಿಕ ಕ್ಷೇತ್ರಗಳನ್ನು ಮುಚ್ಚಲಾಗಿತ್ತು .
ಹಾಗಾಗಿ ಇಷ್ಟು ದೀರ್ಘ ಕಾಲ ದೇವರ ದರ್ಶನದಿಂದ ದೂರಾಗಿ
ಭಕ್ತ ಕೋಟಿಗೆ ಒಂದು ರೀತಿಯ ಬೇಸರ ನೋವು ಕಾಡುವುದು ಸಹಜ . ಕಾರಣ ಇಂತಹದೊಂದು ಮಹಾಮಾರಿ ಹುಟ್ಟಿಕೊಂಡು
, ಜನ ಸಮುದಾಯಕ್ಕೆ ಸೋಂಕು ಹರಡಿಸುವ ಭಯ ಹುಟ್ಟಿಸಿ, ಅನ್ಯತಾ ಶರಣಂ ನಾಸ್ತಿ ಎಂದು ನಂಬಿದ್ದ ದೇವರ ದರ್ಶನಕ್ಕೂ ಅಡ್ಡಿ ಆಗಿದ್ದು
ಭಾರತದ ಇತಿಹಾಸದಲ್ಲೆ ಮೊದಲು ಎನ್ನಬಹುದು .
ಇನ್ನು ಒಂದು ಸೆಕೆಂಡು ಸಹ ಬ್ರೇಕ್ ಇಲ್ಲದಂತೆ, ಆಶೀರ್ವಾದಿಸಲೆತ್ತಿದ ಕೈಗಳನ್ನು ಕೆಳಗಿಳಿಸಲೂ ಪುರುಸೊತ್ತಾಗದಂತೆ ಅಸಂಖ್ಯಾತ
ಭಕ್ತರು ಕೈಮುಗಿದು ತನ್ಮತೆಯಿಂದ ಕಣ್ಣು ಮುಚ್ಚಿ
ಇಡುತ್ತಿದ್ದ ಬೇಡಿಕೆಗಳು ,ಕೆಲವೊಮ್ಮೆ ಡೀಮ್ಯಾಂಡು, ದೂರುಗಳು ಎಲ್ಲವನ್ನು ಆಲಿಸಿ ಸುಸ್ತಾಗಿದ್ದ
ದೇವಾನುದೇವತೆಗಳಿಗೆ ಈ ಲಾಕ್ದೌನ್ನಿಂದಾಗಿ ಎರಡು ತಿಂಗಳು ಸಂಪೂರ್ಣ ವಿಶ್ರಾಮ ಒದಗಿ ಭಕ್ತರ ಕಾಟವಿಲ್ಲದೆ ಹಾಯಾಗಿದ್ದರು .ಈ ಅಪರೂಪದ ರಜೆ ಪ್ರಾಪ್ತಿಯಾದ ಖುಷಿಯಲ್ಲಿ ಎರಡು ತಿಂಗಳು ಬೇಸಿಗೆ ರಜಾ ಸಿಕ್ಕ ಮಕ್ಕಳಂತೆಯೆ ಭಗವಂತನೂ ಕುಣಿದು ಕುಪ್ಪಳಿಸಿರಬಹುದು!.
ಲಾಕ್ ಡೌನ್ ಸಮಯದಲ್ಲಿ ಜನಸಾಮನ್ಯರ ಓಡಾಟ , ಸುತ್ತಾಟ ಎಲ್ಲದಕ್ಕೂ ಕಡಿವಾಣ
ಬಿದ್ದು , ಒಬ್ಬರನೊಬ್ಬರು ಭೇಟಿಯಾಗಲು
ಅವಕಾಶವಿಲ್ಲದೆ ಬರೀ ಮೊಬೈಲು ವಾಟ್ಸಾಪ್ , ಜೂಮ್
ವೀಡಿಯೋಗಳಲ್ಲಿ ತಮ್ಮ ಕಷ್ಟ ಸುಖ ಹಂಚಿಕೊಂಡು ಕುಟುಂಬ ಸಮೇತರಾಗಿ ಮನೆಯಲ್ಲೇ ಉಳಿದು
ಧಾಕಲೆಯನ್ನೇ ಸೃಷ್ಟಿಸಿದರು . ಬೇಸರ ಕಳೆಯಲು
ತಮ್ಮ ಅಭಿರುಚಿಗೆ ತಕ್ಕಂತೆ ನಾನಾ ಕಾರ್ಯದಲ್ಲಿ ತೊಡಗಿಕೊಂಡರು , ಮಕ್ಕಳು ಹೊಸ ಹೊಸ ಸಾಹಸಗಳನ್ನು ಮಾಡಿದರು .
ಅತ್ತ ದೇವರುಗಳೆಲ್ಲ ಕೆಲ ದಿನ ಕೆಲಸದ ಒತ್ತಡದಿಂದ ವಿಶ್ರಾಂತಿ ಪಡೆದ ನಂತರ ದೇಗುಲದ ತುಂಬೆಲ್ಲಾ ತುಂಬಿಕೊಂಡಿರುತ್ತಿದ್ದ
ತಮ್ಮ ಪ್ರೀತಿಯ ಭಕ್ತರ ದರ್ಶನ, ಪೂಜೆ ಪುನಸ್ಕಾರ ಅಭಿಷೇಕ, ಹೋಮ ಹವನಗಳಿಲ್ಲದೆ ಅವರಿಗೂ ಬೇಸರ ಕಾಡತೊಡಗಿತು . ಅದ್ಧೂರಿಯಾಗಿ ನಡೆಯುತ್ತಿದ್ದ ಧಾರ್ಮಿಕ ಚಟುವಟಿಕೆಗಳು , ರಥೋತ್ಸವಗಳು ಎಲ್ಲದಕ್ಕೂ ಅಡ್ಡಿಯಾಗಿ ಭಕ್ತ ಸಮೂಹವಿಲ್ಲದ ದೇವಾಲಯ ಭಣಗುಟ್ಟುತ್ತ, ಗರ್ಭಗುಡಿಯಲ್ಲಿ ದೇವನೊಬ್ಬನೆ ಒಂಟಿಯಾಗಿರುವ ಪರಿಸ್ಥತಿ
ಎದುರಾಯಿತು .
ಭೂಲೋಕದ ಜನರಂತೆಯೆ
ದೇವತೆಗಳೂ ಸಹ ಜೂಮ್ ವೀಡಿಯೋ ಮೀಟಿಂಗ್
ಮಾಡಿಕೊಂಡು ಲಾಕ್ ಡೌನ್ ಸಮಯದಲ್ಲಿ ತಮ್ಮ ಕಷ್ಟ ಸುಖ ಹಂಚಿಕೊಳ್ಳಲು ನಿರ್ಧರಿಸಿದರು . ವೆಂಕಟೇಶ ,
ಗಣೇಶ , ರಾಮ, ಕೃಷ್ಣ ,ಲಕ್ಷ್ಮಿ ಪಾರ್ವತಿ ಇತ್ಯಾದಿ ದೇವಾನುದೇವತೆಗಳ ಮೀಟಿಂಗನ್ನು ತ್ರಿಲೋಕ ಸಂಚಾರಿಗಳಾದ ನಾರದರೆ ಏರ್ಪಡಿಸಿ ಎಲ್ಲರೂ ಒಟ್ಟು ಸೇರಿ ಮುಕ್ತವಾಗಿ ಚರ್ಚಿಸುವ ಅವಕಾಶವನ್ನು ಕಲ್ಪಿಸಿದರು !.
ಸಂಕಷ್ಟ ಚತುರ್ಥಿ , ಗಣ ಹೋಮ ಎಂದೆಲ್ಲಾ ಆಗಾಗ ಭಕ್ತರು ಅರ್ಪಿಸುತ್ತಿದ್ದ
ಕಡಬು ಮೋದಕಗಳನ್ನು ಸವಿಯದೆ ಗಣೇಶನ ನಾಲಿಗೆ
ಕೆಟ್ಟು ಹೋಗಿತ್ತು . ಹಾಗಾಗಿ ಪ್ರಥಮ ಪೂಜೆಯನ್ನು
ಸ್ವೀಕರಿಸುವ ಗಣೇಶನೆ ಆರಂಭದಲ್ಲಿ ಮಾತನಾಡಿ ಬೆಲ್ಲಾ- ಕಡಬು ಮೋದಕಗಳ ನೈವೇದ್ಯವಿಲ್ಲದ
ಊಟವೆ ರುಚಿಸದೆ ( ಬೋರಾಗಿ ) ಈ ವರ್ಷ ತನ್ನ
(ಗಣೇಶ ) ಹಬ್ಬಕ್ಕಾದರೂ ಈ ಮಾಹಾಮಾರಿಯನ್ನು ತೊಲಗಿಸಬೇಕು ಎಂದು ಡಿಮ್ಯಾಂಡು ಮಾಡಿದ . ಮಾರ್ಚ/ಏಪ್ರಿಲ್
ತಿಂಗಳೆಂದರೆ ಪರೀಕ್ಷಾ ಕಾಲ. ವಿದ್ಯಾರ್ಥಿಗಳು ಗುಂಪು
ಗುಂಪಾಗಿ ಗಣೇಶನ ಗುಡಿಗೆ ಹೋಗುವುದು ವಾಡಿಕೆ , ಉತ್ತಮ ಅಂಕಗಳಿಂದ ಪಾಸ್ ಮಾಡು ದೇವಾ ಎನ್ನುವ
ಬೇಡಿಕೆ! ಆದರೆ ಲಾಕಡೌನಿಂದಾಗಿ ಶಾಲೆ ಕಾಲೇಜುಗಳು ಬಂದಾಗಿ ಬರೀ ಆನ್ ಲೈನುಗಳಲ್ಲೆ ಪಾಠ
ಹೇಳಿಸಿಕೊಂಡು ತನಗೆ ಇಪ್ಪತ್ತೊಂದು ದೀರ್ಘದಂಡ ನಮಸ್ಕಾರ ಸಹ ಹಾಕದೆ ಮಕ್ಕಳು ಪಾಸಾಗುವು ಲಕ್ಷಣಗಳಿದ್ದ
ಈ ಹೊಸ ಶಿಕ್ಷಣ ಪದ್ದತಿ ಗಣೇಶನಿಗೆ ಸಖೇದಾಶ್ಚರ್ಯ ಉಂಟು ಮಾಡಿತ್ತು . ಮುಖ್ಯವಾಗಿ ಪ್ರಿಯ ವಿದ್ಯಾರ್ಥಿಗಳ ದರ್ಶನ
ಭಾಗ್ಯದಿಂದ ಗಣಪನೆ ವಂಚಿತನಾಗಿದ್ದ .
ಆಂಜನೇಯ ಸ್ಕ್ರೀನಿನ ಮೇಲೆ ಕಡಬು ಮೋದಕಗಳ ಚಿತ್ರವನ್ನು ಹಾಕಿ ಕೊಂಚ ಕೀಟಲೆ ಮಾಡಿದಾಗ ಗಣಪ ಕಿರು ನಗೆ ನಕ್ಕು ಪವನ
ಪುತ್ರನೊಡನೆ ಕುಶಲೋಪರಿಗಳ ವಿನಿಮಯ ಮಾಡಿಕೊಂಡು ,
ಗಂಭೀರವಾಗಿ ಕುಳಿತ ಇತರ ದೇವತೆಗಳಿಗೆ ಮಾತನಾಡಲು ಅನುವು ಮಾಡಿಕೊಟ್ಟ . ಸಂಕಟಮೋಚನ ಹನುಮಾನ ಎಲ್ಲರಿಗೂ ನಮಸ್ಕರಿಸಿ
“ ಪಾಪ !ಈ ಮಾನವರು ಕೊರೊನಾ ಸೋಂಕಿಗೆ ಭಯಭೀತರಾಗಿ
ಮನೆಯೆಲ್ಲೆ ಸಿಲುಕಿಕೊಂಡಿದ್ದಾರೆ .
ಅವರಿಗೆ ನನ್ನಂತೆ ಹಾರುವ ಶಕ್ತಿಯಿದ್ದಿದ್ದರೆ ಹಾರಿಕೊಂಡಾದರೂ ಹೊರಗೆಲ್ಲಾ ಸುತ್ತಾಡಿ ಲಾಕ್ದೌನ್ ಬೇಸರ ನೀಗಿಸಿಕೊಳ್ಳಬಹುದಿತ್ತು . ನನ್ನ ಭಕ್ತರ ದರ್ಶನ ಭಾಗ್ಯವಿಲ್ಲದೆ ನನಗೂ ಬೇಸರವಾಗಿದೆ ,ಶನಿವಾರಗಳಂದು
ನನಗೆ ಪ್ರೀತಿಯಿಂದ ಅರ್ಪಿಸುತ್ತಿದ್ದ ವಡೆ ಹಾರ ,ವಿಳೇದೆಲೆ, ತುಳಸಿ ಹಾರಗಳನ್ನು ಹಾಕಿಸಿಕೊಂಡು
ಅವರ ಕಷ್ಟ ಕೋಟಲೆಗಳನ್ನು ಶಮನ ಮಾಡ್ತಾ ಹಾಯಾಗಿದ್ದೆ
. ಇನ್ನು ಮುಂದಿನ ದಿನಗಳಲ್ಲಿ ದೇಗುಲ ತೆರೆದರೂ ದೇವರ ಮೇಲಿನ ಭಕ್ತಿಗಿಂತಲೂ ಕೊರೊನಾ ಮೇಲಿನ ಭಯವೇ ಹೆಚ್ಚಾಗಿ ಭಕ್ತರು ದೇವಾಲಯದ ಕಡೆ ಬರದಿದ್ದರೆ ಏನಪ್ಪಾ ಗತಿ “ ಅಂಜನೇಯನ ದನಿಯಲ್ಲಿ ಸಣ್ಣ ಆತಂಕವಿತ್ತು
“ ಹಾಗಾಗುವುದು ಅಸಂಭವ
! ಸಂಕಟ ಬಂದಾಗ ವೆಂಕಟರಮಣ ! ಎಂದು ಜನ ತಮ್ಮ ಕಷ್ಟ ಕಾಲಕ್ಕೆ ನಮ್ಮನ್ನೇ ಅಲ್ಲವೆ ನೆನೆಯುವುದು!? ಅವರ
ರಾಶಿ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಗಂಟೆ ಗಟ್ಟಲೆ ಕ್ಯೂನಲ್ಲಿ ನಿಂತು ದರ್ಶನ ಪಡೆಯುತ್ತಾರೆ,ಚಿಂತಿಸದಿರು
“ ದಿನಕ್ಕೆ ಲಕ್ಷಗಟ್ಟಲೆ ಜನರಿಂದ ಕಿಕ್ಕಿರಿಯುವ ತಿರುಪತಿಯ ಲಾರ್ಡ್ ಬಾಲಾಜಿ ಆಶ್ವಾಸನೆಯಿತ್ತ .
“ ಖಂಡಿತ ! ಬಡವ ಬಲ್ಲಿದ ಎಂಬ ಬೇಧವಿಲ್ಲದೆ ನೂಕುನುಗ್ಗಲಿದ್ದರೂ ಭಕ್ತಾದಿಗಳು
ನಿನ್ನ ದರ್ಶನಕ್ಕೆ ಬಂದೆ ಬರುತ್ತಾರೆ .ಅಷ್ಟೇ ಏಕೆ
, ಕೆಲ ರಾಜಕಾರಣಿಗಳು , ಬ್ಯುಸಿನೆಸ್ಸ್ಮೆನ್ನುಗಳು ತಾವು ಮಾಡಿದ ಹಗರಣ/ಗೊಲ್ಮಾಲಗಳಿಗೆ
ಪ್ರಾಯಶ್ಚಿತ್ತವಾಗಿ (ಕಪ್ಪು ಹಣದಿಂದಲೆ ಮಾಡಿಸಿದ )
ಕಪ್ಪ- ಕಾಣಿಕೆ, ಕಿರೀಟ ಪ್ರಭಾವಳಿಗಳನ್ನು ಅರ್ಪಿಸಲು ನಿನ್ನಂತ ವೀಐಪಿ ದೇವರೇ ಬೇಕಲ್ಲ
“ ಗಣಪತಿ ತಮಾಷೆ ಮಾಡಿದ.
“ ಆಗ ಗುಂಪಿನಲ್ಲಿ ಗೋವಿಂದಾ ಎಂದು ನಿನ್ನ ನಾಮಸ್ಮರಣೆ ಮಾಡುತ್ತಾ ಬರುತ್ತಿದ್ದ ಭಕ್ತರಿಗೆ ಈಗ ಗ್ರೂಪಿನಲ್ಲಿದ್ದರೆ
(ಹರ ಹರ ) ಗೋವಿಂದಾ ಆಗುವ ಸ್ಥ್ತಿತಿ ಸೃಷ್ಟಿಯಾಗಿದೆಯಲ್ಲಾ
ಲಾರ್ಡ್ ಬಾಲಾಜಿ! ? ಎಂದ ಆಂಜನೇಯ ಹಾಗು ಗಣಪತಿಯರ ಕೀಟಲೆಯ ಬಾಯಿ ಮುಚ್ಚಿಸಲು ತಿರುಪತಿ ಲಾಡು ಬಂದು ಬಿತ್ತು.!
ತನ್ನ ಮುದ್ದು ಪುತ್ರನ
ತಮಾಷೆಗೆ ತಾಯಿ ಪಾರ್ವತಿ ಹಸನ್ಮುಖಿಯಾದಳು
. ಹಬ್ಬ ಹರಿದಿನ ಮಂಗಳವಾರ ಶುಕ್ರವಾರಗಳಂದು ಬನಶಂಕರಿ ದೇವಿ , ಮೂಕಾಂಬಿಕ , ದುರ್ಗಾ ಪರಮೇಶ್ವರಿ ,
ಮುಂತಾದ ಶಕ್ತಿ ದೇವತೆಗಳಿಗೆ ಸೀರೆ ಉಡಿ ತುಂಬಿ
ನಿಂಬೆ ಹಣ್ಣಿನ ದೀಪ ಹಚ್ಚಿ ಭಕ್ತಿಯಿಂದ
ಪೂಜಿಸುತ್ತಿದ್ದ ಮಾಹಿಳೆಯರು ಈ ಕೊರೊನಾ ಕಾಲದಲ್ಲಿ
ನಮ್ಮ ದರ್ಶನಕ್ಕೂ ಬರದಂತಾಗಿದೆ, “ ಎಂದು ದೇವಿಯರ ಪರವಾಗಿ ಮಾತನಾಡುತ್ತಾ . “ ಈ ದುರಿತ ಕಾಲದಲ್ಲಿ ಜನ ಎಷ್ಟು ಭಯಭೀತರಾಗಿದ್ದಾರೆಂದರೆ
ಸಾಮನ್ಯವಾಗಿ ಧನ , ಧಾನ್ಯ, ಸಂಪತ್ತು ಸಮೃದ್ಧಿಗಾಗಿ ಬೇಡುತ್ತಿದ್ದ ಭಕ್ತರ ದಂಡು ಪಾಪ ! ಇತ್ತೀಚಿಗೆ ನನ್ನಲ್ಲೂ ಆರೋಗ್ಯ ಭಾಗ್ಯಕ್ಕಾಗೇ
ಮೊರೆಯಿಡುತ್ತಿದ್ದಾರೆ .” ಲಕ್ಷ್ಮಿ ದೇವಿಯೂ
ದನಿಗೂಡಿಸಿದಳು .
“ ಈ ನಡುವೆ ಎಲ್ಲಾ ಕಡೆಯೂ ಸಾಮಾಜಿಕ ಅಂತರ , ಮಾಸ್ಕ್ , ಸ್ಯಾನಿಟೈಸರ್
, ಕ್ವಾರೆಟೈನ್ನ್ಗಳ ಮಾತೆ ಕೇಳಿ ಕೇಳಿ (ಸುದ್ದಿ ವಾಹಿನಿಗಳ ಬ್ರೇಕಿಂಗ್ ನ್ಯೂಸಗಳಂತೆ ) ತಲೆ ಚಿಟ್
ಹಿಡಿದಿದೆ” . ಇಷ್ಟು ಹೊತ್ತೂ ತಪ್ಪಸ್ಸಿನಲ್ಲಿರುವಂತೆ
ಕುಳಿತ ಸೃಷ್ಟಿಕರ್ತ ಬ್ರಹ್ಮ ಮೌನ ಮುರಿದ “ ಈ ದುರಿತ ಕಾಲ ನರ ಮನುಷ್ಯರು ಭೂಮಿಯ ಮೇಲೆ
ತಾವು ಮಾಡುತ್ತಿರುವ ಅನ್ಯಾಯ ಅನಾಚಾರಗಳ ಬಗ್ಗೆ ಅರಿವು ಮೂಡಿಸಿಕೊಳ್ಳಲು ಸಕಾಲವಾಗಿದೆ “
ಬ್ರಹ್ಮನ ಗಂಭೀರ ನುಡಿಗಳಿಗೆ
ಗಣೇಶ ಬ್ರೇಕ್ ಕೊಡುತ್ತ “ವಿನಾಶ ಕಾಲೇ ವಿಪರೀತ ಬುದ್ದಿ ಎನ್ನುವ ಹಾಗೆ ಗೋಬಿ ಮಂಚೂರಿ ಮಾಡುವಂತೆ ಗೂಬೆ ಮಂಚೂರಿ ಮಾಡಿ ತಿಂದು ತೇಗಿ
ಇಡಿ ವಿಶ್ವಕ್ಕೆ ಈ ಪರಿಯ ಕಂಟಕ ತಂದಿದ್ದಲ್ಲದೆ ಯಾರೋ
ಮಾಡಿದ ತಪ್ಪಿಗೆ ಇನ್ಯಾರೋ ಮುಖ ಮುಚ್ಚಿ (ಮಾಸ್ಸ್ಕ್ ಧಾರಿಗಳಾಗಿ ) ಓಡಾಡುವ ಹಾಗಾಗಿದೆ !.”
“ ಸತ್ಯವಾದ ಮಾತು ವಿನಾಯಕ ! ಮನುಷ್ಯ ಪ್ರಾಣಿಗಳ ಅಂಗಾಂಗಳನ್ನು ರಚನೆ
ಮಾಡುವಾಗ ಕಿವಿಗಳ ಪಾತ್ರ ಎಷ್ಟು ಮುಖ್ಯವಾಗಿತ್ತು (ಮಾಸ್ಕ್ ಹಾಕಿಕೊಳ್ಳಲು) ಅಲ್ಲವೇ ಬೃಹ್ಮ್ಮಾಜಿ !? “ಎನ್ನುತ್ತಾ ಹನುಮಂತನೂ ಹಾಸ್ಯದ ಕಚಗುಳಿಯಿಟ್ಟಾಗ ಬೃಹ್ಮನ ಮುಖಕಮಲದಲ್ಲೂ ಕಿರುನಗೆ ಮಿಂಚಿತು!.
ಅರೆ ನಿಮೀಲಿತ ನೇತ್ರಧಾರಿಯಾಗಿ ಶಾಂತ ಮುದ್ರೆಯಲ್ಲಿದ್ದ ಶಿವ “ ಕಾಲಾಯ ತಸ್ಮೆ ನಮಃ ! ಈ ಮನುಷ್ಯ ಜೀವಿಗಳು ಒಮ್ಮೊಮ್ಮೆ ದೇವತೆಗಳ ಹಾಗೆ ತಾವೂ ಸಹ ಅಮರರು ಎಂಬ ಭ್ರಮೆಯಲ್ಲಿ ತೇಲಾಡಿಕೊಂಡಿರುತ್ತಾರೆ
.ಅವರ ಬೊಗಸೆಯಲ್ಲಿ ಹಿಡಿದಷ್ಟೇ ಆಯಸ್ಸು ಪ್ರಾಪ್ತಿ
ಎನ್ನುವುದು ಮರೆತು ಹೆಣ್ಣು ಹೊನ್ನು ಮಣ್ಣುಗಳ ದುರಾಸೆಯಲ್ಲಿ ಮುಳಿಗೇಳುತ್ತಿದ್ದಾರೆ.
ಪರಿಸರ ವಿನಾಶಕ್ಕೆ ಕಾರಣವಾಗುತ್ತಿದ್ದಾರೆ . ಪಶು
ಪಕ್ಷಿಗಳ ಜೊತೆಗಿನ ಅಮಾನವೀಯ ನಡವಳಿಕೆ ಅಕ್ಷಮ್ಯ ಅಪರಾಧ !, ಪ್ರಕೃತಿ ಮಾತೆಯೊಂದಿಗೆ ಸಾಮರಸ್ಯದಿಂದಿರದೆ
ಅಗೌರವದಿಂದ ನಡೆದುಕೊಂಡರೆ ಆಕೆಯ ಮುನಿಸಿಗೆ ತುತ್ತಾಗಬೇಕಾಗುತ್ತದೆ . ಇದು ಇಡಿ ಜಗತ್ತಿಗೆ ಒಂದು ಪಾಠವಾಗಿ
ಪರಿಣಮಿಸಲಿದೆ “ ಎಚ್ಚರಿಕೆಯ ನುಡಿಗಳನ್ನು ಹೇಳಿದ
.
ಎಲ್ಲರ ಮಾತುಗಳನ್ನು ತನ್ಮತೆಯಿಂದ ಆಲಿಸುತ್ತಿದ್ದ ಕೃಷ್ಣ ಪರಮಾತ್ಮ ಸ್ಕ್ರೀನಿನ
ಮೇಲೆ ಪ್ರತ್ಯಕ್ಷನಾಗಿ “ ಮನುಕುಲ ಅನುಭವಿಸುತ್ತಿರುವ ಈ ವಿಷಮ ಪರಿಸ್ಥಿತಿಗೆ ಅರಿತೋ ಅರಿಯದೆಯೋ ಅವರು ಮಾಡಿದ ಪಾಪ ಕರ್ಮಗಳೆ
ಕಾರಣ . ದುಷ್ಟ ಶಕ್ತಿಯ ಸಂಹಾರಕ್ಕಾಗಿ ನಾನು ಸಂಭವಾಮಿ ಯುಗೇ ಯುಗೇ ಎಂದು ಗೀತೆಯಲ್ಲಿ ನುಡಿದಿದ್ದೇನೆ
. ಚೀನಾ ದೇಶದಲ್ಲಿ ಉಗಮವಾದ ಕೊರೊನಾ ವೈರಿ ಚೀನಾ ವಸ್ತುವಿನಂತೆ ಬಹಳ ಕಾಲ ಇರದೆ ನಾಶವಾಗಲಿದೆ “ ಎಂದು
ಮುಗುಳ್ನಕ್ಕಾಗ ದೇವಾನುದೇವತೆಗಳು ಅವನ
ಅರ್ಥಗರ್ಭಿತ ನುಡಿ ಮುತ್ತುಗಳಿಗೆ ತಲೆ ತೂಗಿದರು . ನಾರದರು ” ನಾರಾಯಣ ನಾರಾಯಣ”
ಎನ್ನುತ್ತಾ ಜೂಮ್ ವೀಡಿಯೋ ಮೀಟಿಂಗನ್ನು ಸಮಾಪ್ತಿಗೊಳಿಸಿದರು .
ಲಾಕ್ಡೌನ್ ಮುಕ್ತ ಭಾರತದಲ್ಲಿ ಭಕ್ತಾದಿಗಳು ಎಂದಿನಂತೆ ದೇವರ ದರ್ಶನ ಪಡೆದು ಪುನೀತರಾಗಲಿ ಎಂದು ಎಲ್ಲಾ ದೇವಾನುದೇವತೆಗಳು ಭಕ್ತ
ಕೋಟಿಯನ್ನು ಆಶೀರ್ವದಿಸಿ ಮಾಸ್ಕ್ ಧಾರಿ ಅರ್ಚಕರಿಂದ ಪೂಜಾರ್ಚನೆ ,ಅಭಿಷೇಕ
, ಥರ್ಮಲ್ ಸ್ಕ್ರೀನಿಂಗ್ , ಸ್ಯಾನಿಟೈಸರ್ ಸೇವೆ ಮಾಡಿಸಿಕೊಂಡು ವೈರಾಣು ಮುಕ್ತರಾಗಿ (ಶುದ್ಧರಾದ ) ಭಕ್ತರ
ದರ್ಶನ ಸ್ವೀಕರಿಸಲು ಸಜ್ಜಾದರು .
ಆರತಿ ಘಟಿಕಾರ್
ದೇವತೆಗಳ ಕಷ್ಟ, ಸುಖಗಳನ್ನು ಅರಿಯುವ ನಿಮ್ಮ ಪರಾಮಾನಸ ಶಕ್ತಿಗೆ ನನ್ನ ಮೆಚ್ಚುಗೆಗೆಳು.
ReplyDeleteಪಾಮರರಿಂದ ಇಂಥ (ಮುಗ್ಧ) ತಪ್ಪುಗಳು ನಡೆದರೂ ದೇವತೆಗಳು ಕ್ಷಮಿಸಿಸುತ್ತಾರೆ ಎನ್ನುವ ನಂಬಿಕೆ ಸರ್ :) ಧನ್ಯವಾದಗಳು ನನ್ನ ಲೇಖನ ಓದಿ ನಿಮ್ಮ ಅನಿಸಿಕೆ ತಿಳಿಸಿದ್ದಕ್ಕಾಗಿ .
ReplyDelete