Sunday, August 26, 2018

ಮಾತ್ರೆ ದೇವೋ ಭವ


ಮಾತ್ರೆ ದೇವೋ ಭವ
===================
ಆಗ ನಾವು ಪ್ರೈಮರಿ ಶಾಲೆಗೆ  ಹೋಗುತಿದ್ದ ದಿನಗಳು “ಅಮ್ಮೋರೆ ಮಾತ್ರೆ ಕವರ್ ಕೊಡಿ ವಸಿ ಹೆಂಚು ಉಜ್ಜಕ್ಕೆ “
ಇದು ನಮ್ಮ ಮನೆ ಕೆಲಸದಾಕೆ ಲಕ್ಷ್ಮಮ್ಮ  ದಿನಂ ಪ್ರತಿ ಅಮ್ಮನಲ್ಲಿ  ಇಡುತಿದ್ದ  ಬೇಡಿಕೆ . ಅದೆಲ್ಲಿಂದ   ಆಕೆಗೆ ಈ ಮನೆ ಟಿಪ್ಸ್ ಸಿಕ್ಕಿತ್ತೋ ಗೊತ್ತಿಲ್ಲ , ಕೊಂಚ ಕರಕಲಾಗಿದ್ದ  ಚಪಾತಿ ಮಾಡುವ ಹಿಂಡಾಲಿಯುಂ ಹಂಚನ್ನು ಮಾತ್ರೆಗಳ ಖಾಲಿ ಕವರ್ನಲ್ಲಿ ಗೆರೆ ಮೂಡುವಂತೆ 😊 ಉಜ್ಜಿ ಉಜ್ಜಿ ಬೆಳ್ಳಗಾಗಿಸಿಬಿಡುತ್ತಿದ್ದಳು .
 “ಅಯ್ಯೋ ನಿನಗೆ ದಿನಾ  ಮಾತ್ರೆ ಕವರ್ ಎಲ್ಲಿಂದ ತಂದ ಕೊಡಲಿ , ನಮ್ಮನೇಲಿ  ದಿನಾ ಗುಳಿಗೆ / ಮಾತ್ರೆ ನುಂಗೋರು  ಯಾರು ಇಲ್ಲ ಕಣೆ , ಹಂಗೆ ಕ್ಲೀನಾಗಿ ಸಬೀನಾ ಹಾಕಿ ಉಜ್ಜು  “ ಎಂದು ಅಮ್ಮ ಅವಳನ್ನು ಸುಮ್ಮನಾಗಿಸುತ್ತಿದ್ದರೂ , “ ಆರತಿ ಅಕೀಗ್ ಯಾವದರೆ ಖಾಲಿ ಗುಳಗಿ ಕವರ್  ಇದ್ರೆ ಹುಡುಕಿ  ಕೊಡವಾ “ ಎಂದು ನನಗೆ ಇಂತ ಚಿಲ್ಲರೆ ಕೆಲಸವನ್ನೂ  ಆಗಾಗ ಅಂಟಿಸುತಿದ್ದರು .ಸರಿ  ಮನೆಯೆಲ್ಲಾ ಹುಡುಕಾಡಿ ಅಮ್ಮ ಎಂದೋ ತಲೆ ನೋವು ಬಂದಾಗ ತೆಗೆದು ಕೊಂಡ ಅನಾಲ್ಜಿನ್ ಮಾತ್ರೆ  ಅಥವಾ ನಾವು ಮೂವರು  ಹೆಣ್ಣು ಮಕ್ಕಳು ಎಂದಾದರೊಮ್ಮೆ ಹೊಟ್ಟೆ ನೋವೆಂದು ಒದ್ದಾಡಿದಾಗ ನುಂಗಿದ ಬರಲ್ಗಾನ್ ಟ್ಯಾಬ್ಲೆಟ್ ಖಾಲಿ ಕವರ್ ಇಲ್ಲಾ ನಮ್ಮ ತಂದೆಯವರು ತಮ್ಮ ಬೀಪೀ ಮಾತ್ರೆ ನುಂಗಿದ ನಂತರ ಬಿಸಾಡದೆ ನನಗೆ ಉಡುಗೊರೆ ಎಂಬಂತೆ ಕೊಡುತಿದ್ದ ಖಾಲಿ ಕವರಗಳನ್ನು ಲಕ್ಷ್ಮಮ್ಮನಿಗೆ ಬೇಕು ಎಂದೇ ಜೋಪಾನವಾಗಿ ತೆಗೆದಿಟ್ಟ ನನ್ನ ಜಾಣ್ಮೆಗೆ ನಾನೇ ಭೇಷ್ ಎಂದು ನಿಧಿ ಸಿಕ್ಕವಳಂತೆ ಹುಡುಕಿ ಕೊಡುತ್ತಿದ್ದೆ . ಆದರೆ ಇಂದಿನ ಪರಿಸ್ಥತಿ   ಮನೆಯೆ ಮಾತ್ರಾಲಯ ..ಮನಸೇ (ದೇಹವೆ) ರೋಗಾಲಯ” ಎಂದು ಹಾಡಿಕೊಳ್ಳುತ್ತ  ದಿನ ಬೆಳಗಾದರೆ ಮಾತ್ರೆ ನುಂಗಣ್ಣರೆ ಮನೆಯಲ್ಲಿರುವಾಗ ಕೆಜಿಗಟ್ಟಲೆ ಮಾತ್ರೆ ಕವರ್  ಕೊಡಬಹುದಿತ್ತು  !
ಇನ್ನು ಅಮ್ಮ ದಿನವೂ ಮಾಡುತ್ತಿದ್ದ ತೆಳ್ಳನೆಯ ಪದರು  ಪದರಾದ ಚಪಾತಿಗಳನ್ನು  ಬೇಯಿಸಿ ಕೊಡೋದ್ರಲ್ಲಿ  ಕಪ್ಪಾದ  ಹೆಂಚಣ್ಣ ಬೆಳ್ಳಗಾಗಲು  ಅದಕ್ಕೆ ಆಗಲೇ ಮಾತ್ರೆ ಅಲ್ಲಲ್ಲ  ಮಾತ್ರೆ  ಕವರ್ ಭಾಗ್ಯ ಸಿಗುತಿತ್ತು  !

ಆಗೆಲ್ಲ  ಎಂದಾದರೊಮ್ಮೆ ಕಾಡುತಿದ್ದ  ಸಾಮಾನ್ಯ  ಕೆಮ್ಮು ನೆಗಡಿ ಜ್ವರ 
ಗಂಟಲು ನೋವು ಹೀಗೆ ಸಣ್ಣ ಪುಟ್ಟ ಕಾಯಿಲೆಗಳು  ನಮ್ಮ ರಸ್ತೆ ಮೂಲೆಯಲ್ಲಿರುವ ಆರೆಮ್ಪಿ ಭಟ್ ವೈದ್ಯರು  ಬೆಳ್ಳನೆಯ  ಕಾಗದದಲ್ಲಿ ಸುತ್ತಿ ಕೊಡುವ ಕೆಂಪು ಹಳದಿ ಬಣ್ಣದ  ಗುಳಿಗೆಗಳು  ,  ದೊಡ್ಡ ಸೈಜಿನ ಬಿಳಿ ಪ್ಲಾಸ್ಟಿಕ್ ಕ್ಯಾನಿನಲ್ಲಿ ಬೀಟ್ರೂಟ್ ರಸದಂತಿದ್ದ  ಕೆಂಪು ದ್ರವದ ಟಾನಿಕ್ನಿಂದಲೆ ಮೂರ್ನಾಲ್ಕು ದಿನದೊಳಗೆ  (ಸ್ಲೋ ಮೋಷನ್ನಲ್ಲಿ) ಮಾಯವಾಗಿಬಿಡುತಿತ್ತು  !
ಇನ್ನು ಶೀತ ಜ್ವರಗಳಂತ  ಚಿಕ್ಕ ಪುಟ್ಟ ರೌಡಿ ಬಾಧೆಗಳು  ಅವರು ಕೊಡುವ  ಸಾಮಾನ್ಯ ಗೋಲಿ  ಅರ್ಥಾತ್ ಗುಳಿಗೆಗೆ ಹೆದರಿ ಕಾಲ್ ಕಿತ್ತದಿದ್ದರೆ ತಮ್ಮ  ವೈದ್ಯಕೀಯ ಬುದ್ದಿಯನ್ನೆಲ್ಲ  ಖರ್ಚು ಮಾಡಿ ಮುಂದಿನ ಹಂತದ ಪ್ರಯೋಗಗಳನ್ನು ನಡೆಸಿ ಅದೂ ಯಶಸ್ವಿ ಆಗದಿದ್ದರೆ ತರಗುಟ್ಟಿ   ಬೇರೆ ಎಲ್ಲಾದರೂ ದೊಡ್ಡ ಡಾಕ್ಟರ್ ಬಳಿ ತೋರಿಸಿ ಎಂದು ಕೈ ತೊಳೆದುಕೊಂಡು ಬಿಡುತ್ತಿದ್ದರು .
ಒಮ್ಮೆ ನಾನು ಸಣ್ಣವಳಿದ್ದಾಗ ಆಟವಾಡುತ್ತ ಜಾರಿ ಬಿದ್ದು ಗದ್ದ ಹರಿಸಿಕೊಂಡಿದ್ದೆ .ಒಂದೆ ಸಮನೆ  ದಳ ದಳ ರಕ್ತ ಸುರಿಯುತಿದ್ದ ನನ್ನ ಗದ್ದವನ್ನು ಅಮ್ಮ ತಮ್ಮ ಸೆರಗಿನಿಂದ ಒತ್ತಿ ಹಿಡಿದು ಓಡಿದ್ದು ನಮ್ಮ 
 ಏರಿಯಾದಲ್ಲಿ  ಏಕ ಚ(ವ)ಕ್ರಾಧಿಪತ್ಯದಿಂದ ಮೆರೆಯುತ್ತಿದ್ದ  ಇದೆ  ಭಟ್ ವೈದ್ಯರ ಬಳಿ .
ಒಂದು ಲೋಕಲ್ ಅನೆಸ್ತೀಸಿಯಾ  ಚುಚ್ಚುಮದ್ದನ್ನೂ ಕೊಡದೆ  “ವೈದ್ಯರಿಗೆ ಚೆಲ್ಲಾಟ ,ರೋಗಿಗೆ ಪ್ರಾಣ ಸಂಕಟ “ಎಂಬಂತೆ  ನನ್ನ ಚೀರಾಟ ಕೂಗಾಟಗಳ  ನಡುವೆಯೆ ನನ್ನ ಗದ್ದವನ್ನು ದಬ್ಬಣದಂತ ಸೂಜಿಯಿಂದ ಸರ ಸರನೆ ಹೊಲೆದು ಗ್ಗಿನ್ನೆಸ್ಸ್ ಧಾಕಲೆಯೆ ಶೃಷ್ಟಿ ಮಾಡಿರಬೇಕು ಎಂಬುದು ನನ್ನ ಗುಮಾನಿ !. ಈಗಲೂ ವಕ್ರವಾಗಿ  ಹೊಲಿಗೆ ಬಿದ್ದ  ನನ್ನ ಗದ್ದ ಮುಟ್ಟಿ ನೋಡಿದಾಗಲೆಲ್ಲ ಭಟ್ ವೈದ್ಯರ ಸೂಜಿ ಪುರಾಣದ ನೆನಪು ಚುಚ್ಚುತ್ತದೆ   !
ಮತ್ತೊಂದು ಸಂಧರ್ಬದಲ್ಲಿ  ಅಮ್ಮನಿಗೆ ಒಂದು ವಾರದ ವರೆಗೂ ಕಾಡಿದ ಜ್ವರದ ತಾಪಕ್ಕೆ ಟೈಫಾಯಿಡ್ ಮಾತ್ರೆಗಳ ಓವರ್ ಡೋಸ್ ನೀಡಿ ಬಿಟ್ಟಿದ್ದರು .  ಹೀಗೆ ನಿರಂತರವಾಗಿ  ನಮ್ಮಂತ ಗಟ್ಟಿ ಜೀವಗಳ ಮೇಲೆ  ತಮ್ಮ  ಪ್ರಯೋಗಗಳನ್ನು ನಡೆಸುತ್ತಲೆ  ತಮ್ಮ ವೈದ್ಯ ವೃತ್ತಿಯ ಅನುಭವ ಪಾಕವನ್ನು ಗಟ್ಟಿ ಮಾಡಿಕೊಂಡು, .ನಂತರದ ದಿನಗಳಲ್ಲಿ ತಮ್ಮ ಕ್ಲಿನಿಕ್ ನಲ್ಲಿ ತುಂಬಿ ತುಳುಕುತ್ತಿರುವ ರೋಗಿಗಳನ್ನು   ನಿಭಾಯಿಸಲು ಚಂದನೆಯ ರಿಸೆಪ್ಶನಿಸ್ಟ್ ಒಬ್ಬಳನ್ನು ಕೂಡ ನೇಮಿಸಿ ಭಟ್ ಡಾಕ್ಟರ್  ಕೈ ಗುಣ ಬಹಳ ಚೆನ್ನಾಗಿದೆ  ಎಂಬ ಕೀರ್ತಿ ಪಡೆದರು .

ನಾನು ಹತ್ತನೇ ತರಗತಿಯಲ್ಲಿದ್ದಾಗ ನನಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡು ತಲೆ ಶೂಲೆಯಿಂದ ಬಹಳ ಭಾದೆ ಪಡುತಿದ್ದೆ   ..  ನಮ್ಮ ತಂದೆಯವರು ಈಎನ್ ಟೀ ವೈದ್ಯರೊಬ್ಬರನ್ನು ಕಷ್ಟ ಪಟ್ಟು ಹುಡುಕಿ ಅವರ  ಬಳಿಗೆ ಕರೆದೊಯ್ದಾಗ ಆ ಮಾಹನುಭಾವರು ಪಕ್ಕಾ  ಗುಳಿಗೆ ದ್ವೇಷಿಗಳೆ ಇರಬೇಕು ,ಒಂದು ಮಾತ್ರೆಯನ್ನೂ  ಕೊಡದೆ ಸೂಜಿ ಚಿಕತ್ಸೆ ಮಾಡಿಸಿ ಸರಿ ಹೋಗುತ್ತದೆ ಎಂಬ ಸಲಹೆ ನೀಡಿದಾಗ ಆ ಚೈನೀಸ್ ಪ್ರಾಡಕ್ಟ್ ವೈದ್ಯ ಮಹಾಶಯ   ನನ್ನ ತಲೆ ತುಂಬಾ   ಚುಚ್ಚುವ ಸೂಜಿಗಳ  ಕಲ್ಪಿನೆಯೆ ಭಯದ ಜೊತೆಗೆ ಆಗ ಜನಪ್ರಿಯವಾದ  ಮಹಾಭಾರತ ಸೀರಿಯಲ್ಲಿನ ಭೀಷ್ಮರ ಬಾಣಗಳ ಮಂಚವೂ  ನೆನಪಾಗಿ  , ಈ ಸೂಜಿಗಳ ಶಿರಶಯ್ಯೆ ಸುತಾರಾಂ ಒಲ್ಲೆ ಎಂದು   ಹೆದರಿ   ಕಾಲ್ಕಿತ್ತಿದ್ದೆ !

 ಆದರೆ ಈ  ಮೈಗ್ರೈನ್ ಸಮಸ್ಯೆಯಿಂದಾಗಿ  ಹತ್ತನೇ ತರಗತಿಯಲ್ಲಿದ್ದ ನಾನು ಮುಂಜಾನೆ ಬೇಗೆದ್ದು ಓದಲು  ಅರೆ ಉಮೇದಿನಿಂದ ಇಟ್ಟ ಅಲಾರಾಮಿನ  ತಲೆಯೆ ಮೇಲೆ ಬಡಿದು ಕಾಡುವ ತಲೆ ಶೂಲೆಗೆ ಮತ್ತೆ ಕಣ್ಣ ಮುಚ್ಚಿ ಮಲಗಿ ಬಿಡುವಂತಾಗುತಿತ್ತು .
ಇನ್ನು ಆ  ತಲೆ ಸಿಡಿತಕ್ಕೆ ಉಪಾಯವಾಗಿ ಹಣೆಗೆಲ್ಲ ಭಸ್ಮದಂತೆ ಅಮೃತಾಂಜನ ಬಳಿದು ದಿಂಬಿನ ಕೆಳಗಿಟ್ಟ ನನ್ನ ಕೆಂಪು ರಿಬ್ಬನ್ನನ್ನು  ಹಣೆಗೆ  ಬಿಗಿದು ಕಟ್ಟಿ ಫೂಲನ್  ದೇವಿಯಂತೆ ಅಡುಗೆ ಕೊಣೆಯಲ್ಲಿ ಮುಂಜಾನೆ  ಪ್ರತ್ಯಕ್ಷಳಾಗುತಿದ್ದೆ .  ದೊಡ್ಡ ಕಪ್ಪಿನಲ್ಲಿ ಅಮ್ಮನ ಬಿಸಿ ಬಿಸಿ  ಚಹಾ ಹೀರುತ್ತಾ  ರಾತ್ರೀ ಓದಿಕೊಂಡರಾಯಿತು  ಎಂದು ಸಮಾಧಾನ ಮಾಡಿಕೊಳ್ಳುವುದು , ನಸುಕಿನಲ್ಲೇ ಏಳಬೇಕಲ್ಲ ಬಾಲೆ ಎಂದು ಸ್ವಯಂ ಅನುಕಂಪದಿಂದ ರಾತ್ರೀ ಒಂಬತ್ತಕ್ಕೆ ಪವಡಿಸಿ ಮುಂಜಾನೆಯಾಗುತ್ತಲೆ  ತಲೆ ಸಿಡಿತ ಎಂಬ ಕಾರಣಕ್ಕೆ ತಡವಾಗೆದ್ದು ಅಪರಾದಿ ಭಾವದಿಂದ ನಿಧಾನವಾಗಿ ಚಹಾ ಹೀರುವುದು ನನ್ನ ನಿತ್ಯದ ದಿನಚರಿಯಾಗಿತ್ತು .

ಇನ್ನು  ದಿನವೂ ನನ್ನ ಹಣೆಗೆಲ್ಲ ಅಮೃತಾಂಜನ ಬಳಿದುಕೊಳ್ಳುವ ಪರಿಗೆ ಈ ಅಮೃತಾಂಜನದ ಡಬ್ಬಿಗಳನ್ನು ನಮ್ಮ   ದಿನಸಿ ಪಟ್ಟಿಯಲ್ಲಿ ಸೇರಿಸಿ ಡಜನ್ ಗಟ್ಟಲೆ ತರಬೇಕಾಯಿತು. ಪರಿಣಾಮ ತಲೆ ನೋವಿರುವವರು ನನ್ನ ಬಳಿ ಕೂತರೂ ಸಾಕು ಅವರ ತಲೆ ಶೂಲೆ  ಗಾಯಬ್  !
ಆದರೆ ಮುಂದೆ ಒಂದೆರಡು ತಿಂಗಳಲ್ಲಿ ಯಾವ ಜನ್ಮದ ಪುಣ್ಯವೋ ಎಂಬಂತೆ  ನನ್ನ ಮೈಗ್ರೇನ್ ಕಾಯಿಲೆ ನನ್ನ ಬಿಟ್ಟು ಬೇರೆ ದೇಶಕ್ಕೆ ಮೈಗ್ರೇಟ್  ಆಗಿ ಅಂತೂ ನಾನು ಒಳ್ಳೆ ಅಂಕಗಳಿಂದ ಪಾಸಾಗುವಂತೆ  ಮಾಡಿ ಪುಣ್ಯ ಕಟ್ಟಿ ಕೊಂಡಿತು.

ಆಗೇನೋ ಮಾತ್ರೆಗಳ ಮಂತ್ರ ದಂಡ ಬಳಸದೆ ಕಾಯಿಲೆಗಳನ್ನು  ವಾಸಿ ಮಾಡಿಕೊಂಡಿದ್ದಾಯಿತು ..ಆದರೆ ಇಂದಿನ .. ಕಾಲಮಾನದಲ್ಲಿ ನೂರೆಂಟು ಕಾಯಿಲೆಗಳು , ಕಂಪ್ಯೂಟರ್ ವೈರಸ್ ನಂತೆ ಅಪ್ಡೇಟ್ ಆಗಿ ಹೊಸ ಹೊಸ ರೋಗಗಳನ್ನು ಹರಡುತ್ತಿವೆ .ವಿಟಮಿನ್ ಡಿ , ವಿಟಮಿನ್ ಬೀ 12 , ಥೈರಾಯಿಡ್ ,ಅಲರ್ಜಿಗಳಂತ ಹೈ ಟೆಕ್ ಸಮಸ್ಯೆಗಳಲ್ಲದ್ದೆ    ತಲತಲಾಂತರದಿಂದ (ಹಳೆ ತಲೆಗಳಿಂದ  ಹಿಡಿದು ಈಗಿನ  ಮರಿ ತಲೆಯವರೆಗೂ ) ಕಾಡುವ ಬೀಪೀ ಶುಗರ್ ,ಮತ್ತು ಫಿಗರ್ ಗಾಗಿ  ಘಳಿಗೊಮ್ಮೆ ಗುಳಿಗೆ ನುಂಗುವ ಅನಿವಾರ್ಯತೆ ಎಲ್ಲರಲ್ಲೂ ಹೆಚ್ಚುತ್ತಿದೆ  .

ಕೆಲವರು ಪಂಚಾಂಗದಲ್ಲಿ  ರಾಹು ಕಾಲ ಗುಳಿಕ ಕಾಲಗಳನ್ನು ನೋಡಿಕೊಂಡು ಮುಖ್ಯವಾದ  ಕೆಲಸ ಆರಂಭ ಮಾಡಿದರೆ ಮುಂಜಾನೆಯಿಂದ ರಾತ್ರಿಯವರೆಗೂ  ಗುಳಿಗೆ  ಕಾಲ ಮಾತ್ರ ಎಲ್ಲರಿಗೂ  ಪ್ರಶಸ್ತವಾಗಿದೆ  ಎನ್ನಬಹುದು .ಮನೆ ಮನೆಗಳಲ್ಲಿ ಹಿಗ್ಗುತ್ತಿರುವ ಮೆಡಿಕಲ್ ಕಿಟ್ಗಳೆ ಇದಕ್ಕೆ ಸಾಕ್ಷಿ !  .

ಆಗಿನ ಕಾಲದಲ್ಲಿ ಸಣ್ಣ ಪುಟ್ಟ ಕಾಯಿಲೆಗೆ ಮನೆ ಮದ್ದೆ  ನಡೆಯುತ್ತಿತ್ತು .ವಿಪರೀತ ನೆಗಡಿಯಾಗಿ  ನನಗೆ ಸೈನಸ್  ಆದಾಗ ನೋವು ಹೀರಿಕೊಳ್ಳಲು ಅಮ್ಮ ಕೈಯಿಂದ  ಶುಂಟಿ ತೇದು ಹಣೆಗೆಲ್ಲ ಹಚ್ಚಿಸಿಕೊಂಡಿದ್ದೆ  , ಹೊಟ್ಟೆಗಳ ಹುಳಕ್ಕೆ ಬೇಗೆದ್ದು ಖಾಲಿ ಹೊಟ್ಟೆಯಲ್ಲಿ ಹರಳೆಣ್ಣೆ ಕುಡಿದಿದ್ದೆ . ಲೂಸ್ ಮೋಶನ್ ಆದಾಗ ಮೆಂತ್ಯೆ ಕಾಳು ಮುಕ್ಕಿದ್ದೆ , ಆದರೆ ಈಗ ಇಂತ ಮನೆ ಮದ್ದುಗಳಿಗೆ ನಮ್ಮನೆ ಮುದ್ದು ಪಾಪ ಕೂಡ “ಒದ್ದು “ ಎಂದು ಬಿಡುತ್ತದೆ .

ಆ ಫ್ಲಾಶ್ ಬ್ಯಾಕಿನಿಂದ ಹೊರ ಬಂದು ಬಿಡೋಣ ! ಈಗ ಜೆಡ್ಡು ಜಾಪತ್ರೆಯೆಂದು ಕ್ಲಿನಿಕ್ ಕಡೆ ಹೋದಾಗಲೆಲ್ಲ ಅರೋಗ್ಯ ವಿಮೆ/ ಮೆಡಿಕಲ್ ಇನ್ಸೂರೆನ್ಸ್ ನೆಪದಲ್ಲಿ  ರಾಶಿ  ವಿಟಮಿನ್ ಮಾತ್ರೆಗಳು  ,ಮುಲಾಮುಗಳು , ನೋವು ನಿವಾರಕಗಳು  ಎಂದೆಲ್ಲ  ಚೀಲದಲಿ ತರಕಾರಿ ತರುವಂತೆ ಮಾತ್ರೆಗಳನ್ನು  ನಾನು ಹೊತ್ತು ತರುವುದುಂಟು ! ಯಾವುದೇ ಧೀಡೀರ್ ಕೋರ್ಸ್ ಕಲಿಯಬಲ್ಲೆ ಆದರೆ ಈ ವಿಟಮಿನ್ ಕೋರ್ಸ್ಗಳನ್ನು ಮಾತ್ರಾ ಪೂರ್ತಿ (ನುಂಗಿ) ಮುಗಿಸುವುದು ನನಿಂದಾಗದು. ಹೀಗಿದ್ದರೂ ಮತ್ತೆ ಮುಂದಿನ ಬಾರಿ ವೈದ್ಯರ ಬಳಿ ಹೋದಾಗ “ಡಾಕ್ತ್ರೆ  ! ನೋಡಿ ಕೂದಲು ಉದುರಿ ಇಲಿ ಬಾಲದ ತರ ಆಗ್ತಾ ಇದೆ, ಉಗುರು ಯಾಕೋ ಬೆಳೀತಾನೆ ಇಲ್ಲಾ ಎಂದೋ , ಮದ್ಯಾನ್ಹ ಒಂದೆರಡು ಗಂಟೆ ಮಲಗಿ ಎದ್ದ ಮೇಲೆ ಯಾಕೋ ಸುಸ್ತು ಎಂದು ಬಣ್ಣ ಬಣ್ಣದ ವಿಟಮಿನ್ ಮಾತ್ರೆಗಳನ್ನು ಬರೆಸಿಕೊಂಡು ಬರುವುದು ನನ್ನ ಹುಚ್ಚು . 

ಸಣ್ಣವಳಿದ್ದಾಗ  ಅಮ್ಮ ಆಗಾಗ  “ ಅಯ್ಯೋ  ಸೊಂಟ ತುಂಬಾ ನೋವು ಕಣೆ “ ಎಂದು ಗೋಳಾಡುವುದನ್ನು ಕೇಳಿ ಪಾಪ ಅನಿಸಿ  “ ಅಮ್ಮ ಸೊಂಟ ನೋವು  ಹಾಗಂದ್ರೆ ಏನು “ ಎಂಬ  ಮುಗ್ಧ ಪ್ರಶ್ನೆ ಕೇಳಿದ ತಪ್ಪಿಗೆ ಈಗ ಕೆಲ ವರ್ಷಗಳ ಹಿಂದೆ ಅದರ ಅನುಭವ ಸರಿಯಾಗೇ ಆಗಿತ್ತು ,ಅಷ್ಟೇ ಅಲ್ಲದೆ  ಖೋ ಕೊಡುವಂತೆ ಅವುಗಳ ಕುಟುಂಬದಿಂದಲೆ ಮತ್ತೊಂದಿಷ್ಟು ಬೆನ್ನು ಹುರಿಯ ಸಮಸ್ಯೆಗಳು ನಾನು “ ನೊ ಎಂಟ್ರಿ “ ಎಂದು ಯೋಗ ಭಂಗಿಯಲ್ಲಿ ನಿಂತರೂ ಬೇಡದ ಅತಿಥಿಗಳಾಗಿ ಎಂಟ್ರಿ ಕೊಟ್ಟು ಬೀಡು ಬಿಟ್ಟಿದ್ದವು .

ಇನ್ನು ಬಾಲ್ಯದಲ್ಲಿ ನನ್ನ ನಡಿಗೆಯ ಕಲಿಕೆಯಲ್ಲೆ ಏನೋ ಯಡವಟ್ಟು ಎಂಬಂತೆ ಈಗಲೂ ಆಗಾಗ  ಎಡವಿ ಬೀಳುವುದು, ಪಾದ / ಕಾಲು ಉಳುಕಿಸಿಕೊಳ್ಳುವ ನಡೆದೆ ಇರುವುದರಿಂದ   “ಪಾದ ಪಾದ ವಿಪದಂ “ ಎಂಬುದು ನನ್ನ ಪಾದಗಳಿಗೂ ಆಗುತಿದ್ದ ಮರೆಯಲಾರದ ಅನುಭವ  ! ಹಾಗಾಗಿ ನಮ್ಮ ಊರಿನ  ಮೂಲೆ ಮೂಲೆಯಲ್ಲಿರುವ ಮೂಳೆ  ವೈದ್ಯರ ಪರಿಚಯ  ಒಡನಾಟ ನನಗೆ ಚೆನ್ನಾಗಿಯೆ  ಇತ್ತು .

ಹೀಗಿರುವಾಗ ಆಗಾಗ (ಎಜಮಾನರಿಗೆ) ಮೊಣ ಕೈ ತಿವಿಯುತ್ತ ಆರಾಮಾಗಿದ್ದ  ನನಗೆ ಸಿಕ್ಕಾಪಟ್ಟೆ  ಮೊಣಕೈ ನೋವು (ಟೆನಿಸ್ ಎಲ್ಬೋ )ಸಮಸ್ಯೆ  ಶುರುವಾಯಿತು  .ನನ್ನ  ಕೆಲವು  ಸ್ವಯಂ ಚಿಕಿಸ್ತ್ಸೆಗಳಿಗೆ ನನ್ನ ನೋವು  no way ಎಂದು ಗುರುಗುಟ್ಟಿತು! ಮೊದಲು ಪತಿಯಿಂದ ಸಿಂಪತಿಯನ್ನು ಗಿಟ್ಟಿಸಿ , ನಾಚುರೋಪತಿ , ,ಹೋಮಿಯೋಪತಿಗಳನ್ನೆಲ್ಲ ಪ್ರಯತ್ನಿಸಿ ಕೊನೆಗೆ ಸೀತಾ ಪತಿಗೇ ಮೊಣ ಕೈ ನೋವು ಕಡಿಮೆಯಾದರೆ ಅದೇ ಕೈಯಿಂದ ರಾಮ ಕೋಟಿ  ಬರೆಯುವ ಹರಕೆ ಹೊತ್ತು ಕೊಳ್ಳಲೆ  ಎಂಬ ಯೋಚನೆಯಲ್ಲಿದ್ದೆ . “ ಅಮ್ಮ ನೀನು ಒಂದು ಪುಟ ಬರೀ ..ಅದನ್ನೇ ಜೆರಾಕ್ಸ್ ಮಾಡಿಸಿಕೊಡ್ತ್ಹೀನಿ ಎಂದು ನನ್ನ ಮುದ್ದು ತರ್ಲೆ ಮಗರಾಯ ಕೂಡ  ಅದ್ಭುತವಾಗಿ ಸ್ಪಂದಿಸಿದ್ದ ! ಇನ್ನು ಕೆಲವು ಕಿತಾಪತಿಗಳು  (ಸ್ನೇಹಿತರು)” ಬರೀ ಟೀವೀ ಮುಂದೆ ಗೂಟ ಹೊಡೆದು ಟೆನಿಸ್ ನೋಡೋದಲ್ಲ ,ಜೋರಾಗಿ  ರಾಕೆಟ್  ಬೀಸಿ  ಟೆನಿಸ್ ಆಡಿ ,ಎಲ್ಲ ಸರಿಹೋಗುತ್ತೆ  ಎಂದು ತರಲೆ ಮಾಡಿದ್ದರು .

 ಹೀಗಿರಲು ನನ್ನ ಗೆಳತಿಯ ಪರಿಚಯದ ಹ್ಯಾರಿ ಎನ್ನುವ  ಮೂಳೆ ವೈದ್ಯರೊಬ್ಬರ ಬಳಿ ತೋರಿಸಿದ್ದಾಯಿತು .ಅವರು  ನನ್ನ ಮೊಣ ಕೈ ನೋವು (ಟೆನಿಸ್ ಎಲ್ಬೋ ) ಕಡಿಮೆಯಾಗಲು ಒಂದು   ಸ್ಟ್ರಾಂಗ್ ಇಂಜೆಕ್ಷನ್ ಕೊಟ್ಟು,  ಆ ಇಂಜೆಕ್ಷನ್ ಕೊಟ್ಟ ನೋವು ರಾತ್ರಿ ಕಾಡಿದರೆ ನುಂಗಲು ಮಾತ್ರೆ  , ಆ ಸ್ಟ್ರಾಂಗ್ ಮಾತ್ರೆಗೆ ಅಸಿಡಿಟಿಯಾದರೆ ಮತ್ತೊಂದು ಗುಳಿಗೆ ನನ್ನ ಕೈಯಲಿಟ್ಟು ,  ಈ ಮುಲಾಮು ನಿಮ್ಮ ಎಜಮಾನರಿಂದ ಹಚ್ಚಿಸಿಕೊಂಡು  ಒಂದು ವಾರ (ಮೊಣ) ಕೈ ಕೆಲಸ ಮಾಡದೆ  ಚೆನ್ನಾಗಿ ರೆಸ್ಟ್ ತೊಗೊಳ್ಳಿ ಎಂದು ರೋಗಿ ಬಯಸಿದ್ದನ್ನೇ ವೈದ್ಯರ ನುಡಿದಾಗ  ದೇವರಿಗೆ ನಾನು ಆಲ್ಲಿಂದಲೇ “ವೈದ್ಯೋ ನಾರಾಯಣೋ ಹ್ಯಾರಿ   “ ಎಂದು ಮನಸಿನ್ನಲ್ಲೆ ವಂದಿಸಿದ್ದೆ !

  ಮಾತ್ರೆಗೂ ನನಗೂ ಎಲ್ಲಿಲ್ಲದ  ನೆಂಟಸ್ತಿಕೆ ಎನ್ನುವುದನ್ನು ನಾನು ಆಗಾಗ (ಮನೆಯವರಿಗೆ )ಸಾಬೀತು ಪಡಿಸುತ್ತಲೆ  ಇರುತ್ತೇನೆ .ಒಮ್ಮೆ ನಾವು ಕುಟುಂಬ ಸಮೇತ ತಿರುಪತಿಗೆ ಹೊರಟಿದ್ದೆವು .ನಮ್ಮಅತ್ತೆಯವರು  ತಿಮ್ಮಪ್ಪನ  ಹುಂಡಿಗೆ ಹಾಕಲು  ಮುಡುಪಿನ ಗಂಟು  ಸಿದ್ದ ಮಾಡಿಕೊಂಡರೆ ನಾನು ಮಾತ್ರೆಗಳ ಕಿಟ್ ನೊಂದಿಗೆ ತಯಾರಾದೆ . ಬೆಟ್ಟ ಹತ್ತಿ ಕಾಲುಗಳು ಕಿರುಗುಟ್ಟಿದರೆ  ನೋವು ನಿವಾರಕಗಳು  , ಅದರಿಂದ ಹೊಟ್ಟೆ ತೊಳಸಿದರೆ ಅಂಟಾಸಿಡ್ಗಳು , ಹೊರಗಿನ ಊಟ ನೀರಿಗೆ  ಹೊಟ್ಟೆ ಸ್ಟ್ರೈಕ್  ಮಾಡಿ ಲೂಸ್ ಮೋಶನ್ನಿಗೂ ಅದರದಕೂ ಸಲ್ಯುಶನ್ ,ಇನ್ನು ಅಲ್ಲಿನ ಗೌಜು ಗದ್ದಲ (ಅತ್ತೆಯವರ )ಕಿರಿ ಕಿರಿ  ಮಾತಿಗೆ ತಲೆ ನೋವೆದ್ದರೆ ಪರಿಹಾರೋಪಾಗಳು . ಹೀಗೆ ನನ್ನ ಕಿಟ್ ನೋಡಿ ಘಾಬರಿಯಾದ ಅತ್ತೆಯವರು “ ಆರತಿ , ಅಲ್ಲಿ ಎನೂ ತ್ರಾಸ್  ಆಗೂದಿಲ್ಲ , ಕಾಳಜಿ ಮಾಡಬ್ಯಾಡ , ನನ್ನ ರೊಕ್ಕದ ಗಂಟಿನ ಜೊತೆ ನಿನ್ನ ಗುಳಗಿ ಗಂಟನ್ನೂ ತಿಮ್ಮಪ್ಪನ  ಹುಂಡಿಗೆ ಹಾಕಿಬಿಡೋನಂತ  “ ಎಂದು ತಮಾಷೆ ಮಾಡಿದ್ದರು . !

ಏನೇ ಅನ್ನಿ ಈಗಿನ ಮೊಬೈಲ್ ಯುಗದಲ್ಲಿ ಯಾವುದಾದರೊಂದು  ಸಾಮಾಜಿಕ ಜಾಲತಾಣಗಳಲ್ಲಿ  ಮುಳುಗಿ ಮನೆ ಮಂದಿಯೆ ದೂರಾಗುತ್ತಿರುವ ಕಾಲದಲ್ಲಿ ರೋಗಿಗೂ  ಸೆತಾಸ್ಕೊಪಿಗೂ ಇರುವ ಅವಿನಾಭಾವ ಸಂಬಂಧ ಹೆಚ್ಚಾಗುತ್ತಲೇ ಇದೆ .ಏನೆ ಕಾಯಿಲೆ ಬಂದರೂ “ಅನ್ಯಥಾ ಶರಣಂ ನಾಸ್ತಿ “ಎಂದು ಬೇಗ ಗುಣವಾಗಲು  ಆ ಭಗವಂತನ ಎದಿರು ಮಾತ್ರೆಗಳನ್ನು ಇಟ್ಟು ಬೇಡಿಕೊಳ್ಳುವ ಹಾಗಾಗಿದೆ. ಈಗ ಬುದ್ಧನೆಂಬ ತತ್ವ ಜ್ಗ್ಯಾನಿ ಇದ್ದಿದ್ದರೆ ಕಿಸಾ  ಗೌತಮಿಗೆ ಜೀವಮಾನದಲ್ಲಿ ಒಮ್ಮೆಯೂ ಮಾತ್ರೆ ನುಂಗದ ವ್ಯಕ್ತಿಯ ಮನೆಯಿಂದ ಸಾಸಿವೆ  ತಾ ಎಂದು ಹೇಳುತಿದ್ದನೋ ಏನೋ !.ಇನ್ನು ವೈದ್ಯರ ” ಬೆಳಿಗ್ಗೆ ಒಂದು ರಾತ್ರಿ  ಒಂದು “ ಎಂಬ ಘೋಷ ವಾಕ್ಯ, ತೂಕಕ್ಕೆ ಹಾಕಿದರೆ  ಕೆಜಿ ಗಟ್ಟಲೆ ತೂಗುವ  ಆರೋಗ್ಯ ತಪಾಸಣೆಯ ಫೈಲು,ನೂರೆಂಟು  ರಿಪೋರ್ಟ್ ಗಳು, ಪ್ರಿಸ್ಕ್ರಿಪ್ಶನ್ಗಳು ,ಮನೆ ಪೂರ್ತಿ ಪುಟಾಣಿ  ಮಾತ್ರೆಗಳದೆ  ಸದ್ದು ಗದ್ದಲದ ನಡುವೆ ನಾವು ಭಕ್ತಿಯಿಂದ ದಿನ ಬೆಳಗಾದರೆ ಹೇಳಬೇಕಾದ್ದು “ ಮಾತ್ರೆ ದೇವೋ ಭವ “ ಎನ್ನುವುದು ನನ್ನ ಅನಿಸಿಕೆ .ಏನಂತೀರಿ ?

ಆರತಿ ಘಟಿಕಾರ್

4 comments :

  1. ಚೆನ್ನಾಗಿ ಬಂದಿದೆ ಆರತಿ.

    ReplyDelete
    Replies
    1. ಧನ್ಯವಾದಗಳು ನೀತಾ

      Delete
  2. ನಿಜ ಕಣ್ರೀ ಇದು ಗುಳಿಗೆ ಕಾಲ. ಮಾತ್ರೆ ದೇವೋ ಭವ ಅಂತ್ಲೇ ಶರಣು ಬೀಳಬೇಕಾದ ಪರಿಸ್ಥಿತಿ. ಒಂದು ಖಾಯಿಲೆಗೆ ಅಂತ ಗುಳಿಗೆ ತಗೊಂಡ್ರೆ ಸೈಡ್ ಎಫೆಕ್ಟ್ ಅಂದ ಮೂರು ಖಾಯಿಲೆಗಳು ಅಂಟಿಕೊಳ್ಳೋ ಕರ್ಮ ಬೇರೇ! ಪ್ರತಿ ಮನೆ ಹೂರಣವೂ ಈಗ ಮಾತ್ರಾ ಸಮಯ ಎನ್ನುವಂತಹ ಕೆಟ್ಟ ಕಾಲ. 🤔

    ಮಾತ್ರೆ ಕವರ್ ಇಂದ ಪಾತ್ರೆ ಉಜ್ಜೋ ಕಲೆ ಇದ್ಯಲ್ಲ ಇದ್ಮಾತ್ರ ನಮಗೆ ಹೊಸದೇ! 😂

    ReplyDelete
    Replies
    1. hahaha ಅದು ನಿಜ.expiry date ಇರೋ ಮಾತ್ರೆಗಳ ಜೊತೆ ಕೊನೆಯವರೆಗೂ ನಾವು ಜೀವನ ಕಳೀಬೇಕು ನೋಡ್ರೀ .ಧನ್ಯವಾದಗಳು ಸರ್ ಅಪರೂಪಕ್ಕೆ ನಾನು ಹಾಕಿದ ಪೋಸ್ಟನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ .

      Delete