Sunday, March 29, 2020

ಪುರುಷರ ಕ್ರೈಯಿಂಗ್ ಕ್ಲಬ್


                                           
               

                                        
ಕಣ್ಣೀರು  ಎಂಬುದು ಮಹಿಳೆಯರ ಸ್ವತ್ತು ,ಗಂಡಸರನ್ನು ಹಿಡಿತದಲ್ಲಿಟ್ಟು ಕೊಳ್ಳುವುದಕ್ಕೆ ಅವಳು ಬಳಸುವ ಅಸ್ತ್ರವೆ ಅಳು! ಮಾತೆಯರೆಲ್ಲ ಭಾವಜೀವಿಗಳು . ಹುಟ್ಟುವಾಗಲೇ ಸಾಗರದಷ್ಟು ನೀರು  ತುಂಬಿಕೊಂಡು  ಮಾತು ಮಾತಿಗೂ ಕಣ್ಣೀರು ಹಾಕುತ್ತಾರೆ ಎಂಬೆಲ್ಲ ಅಪವಾದಗಳು  ನಮಗೆ  ಕಟ್ಟಿಟ್ಟ ಬುತ್ತಿ . ಆದರೆ ಮಾತು ಮಾತಿಗೂ  ನಗುವ ಹೆಂಗಸರನ್ನು ,ಅಳುವ ಗಂಡಸರನ್ನು ನಂಬಬಾರದು  ಎನ್ನುವ ಗಾದೆ ಮಾತೂ ಉಂಟು  !  ಅದೆಲ್ಲ ಒತ್ತಟ್ಟಿಗಿರಲ ನಾನು ಈಗ ಹೇಳಬೇಕೆಂದಿರುವುದು   ಪುರುಷರ ಭಾವ ಸಂವೇದನೆಗಳ ಕುರಿತು . ಎಷ್ಟೋ ಸಂದರ್ಭದಲ್ಲಿ ಅವರು ತಮಗಾದ ನೋವು ಸಂಕಷ್ಟಗಳನು  ತಡೆಯಲಾಗದೆ   ಅತ್ತು ಹಗುರಾಗಬೇಕೆನಿಸಿದರೂ  ಎಲ್ಲೆರೆದಿರು ಹೀಗೆಲ್ಲಾ ಕಂಬನಿ ಸುರಿಸಿದರೆ  ತನ್ನನ್ನು ದುರ್ಬಲ ಮನಸ್ಸಿನ , ಹೆಂಗರಳು ಜೀವಿ ಎನ್ನುವ ಹಣೆಪಟ್ಟಿ  ಕಟ್ಟಿ ಬಿಡುತ್ತಾರೆ ಎನ್ನುವ ಮುಜುಗರ ಹಿಂಜರಿಕೆಯಿಂದ  ತಮ್ಮ ಕಣ್ಣೀರಿಗೆ  ಆಣೆಕಟ್ಟು ಕಟ್ಟಿ ದುಃಖ ನುಂಗಿಕೊಳ್ಳುವ ಬಡಪಾಯಿ ಪುರುಷರೆ ಹೆಚ್ಚು  .

ಇನ್ನು ಸಾರ್ವಜನಿಕ ಸಭೆಗಳಲ್ಲಿ  ಅದರಲ್ಲೂ ಚುನಾವಣೆಗೆ ಮುನ್ನಿನ ಭಾಷಣವಿದ್ದಾಗ  ಕೆಲವು  ರಾಜಕಾರಣಿಗಳ ಅಂತರಂಗದ ನೋವುಗಳು ಧಿಡೀರನೆ  ಅವತರಿಸಿ  ಆ ಕಣ್ಣೀರು ಕೊಡಿಯಲ್ಲಿ ಜನ ಸಾಮನ್ಯರು ಕೊಚ್ಚಿ ಹೋಗುವಂತೆ ಅಳುವ  ಚೀಪ್ಹ್  ಮಿನಿಸ್ಟರ್ಗಳು ಎಷ್ಟೋ ಬಾರಿ ಕರ್ಚೀಪ್ಹ್ ಮಿನಿಸ್ಟರ್ಗಳಾಗಿದ್ದುಂಟು   ! ಇವರ ಬಗ್ಗೆ ನನಗೆ ಕಿಂಚಿತ್ತು ಅನುಕಂಪ ಇಲ್ಲ ಬಿಡಿ .
ಮನುಷ್ಯ ಸಂಘಜೀವಿಯೆ  ಆಗಿರಬಹುದು ಆದರೆ ಅವನ  ಭಾವನೆಗಳು ಒಮ್ಮೊಮ್ಮೆ ದ್ವೀಪದಂತಾಗಿಬಿಡುತ್ತವೆ. ದೀಪದ ಬೆಳಕಿನ ಕೆಳಗೆ ಸದಾ ಕತ್ತಲೆಯೆ ಎನ್ನುವಂತೆ ತಮ್ಮವರ ಎದಿರೆ ಹೇಳಿಕೊಳ್ಳಲಾಗದಂತ ನೋವು ಎಷ್ಟೋ ಬಾರಿ ಈ ಪುರುಷರಿಗೇ ಏಕೆ ಕಾಡುತ್ತದೆ ಎನ್ನುವ ಜಿಗ್ನ್ಯಾಸೆ ನನ್ನದು    !

ಉದಾಹರಣೆಗೆ ದಿನ ಬೆಳಗಾದರೆ ತಮ್ಮ ಬಾಸ್ ಕಡೆಯಿಂದ ಬೈಗುಳ ತಿನ್ನುವವರು , ಮಾತು ಮಾತಿಗೂ ಮಡದಿಯಿಂದ ತಿವಿಸಿಕೊಳ್ಳುವ ಪಾಪದ  ಗಂಡಂದಿರು , ಗುಪ್ತ ವ್ಯಾಪಾರ / ಕುದುರೆ ರೇಸಿನಲ್ಲಿ  ನಷ್ಟ ಅನುಭವಿಸಿದ್ದವರು ,ಶೇರ್ ಮಾರುಕಟ್ಟೆಯಲ್ಲಿ  ಪೂರ್ವ ಭಾವಿ ತಿಳುವಳಿಕೆಯಿಲ್ಲದೆ  ಹಣ ಹೂಡಿ ಲಾಸ್ ಅನುಭವಿಸಿದವರು,  (ಇವರಂತೂ ಈ ವಿಷಯಗಳನ್ನು ಮಡದಿಯಿಂದ ಮುಚ್ಚಿಡಲು  ಸೀಕ್ರೆಟ್ ಸರ್ವಿಸ್ ಏಜೆಂಟ ಮಟ್ಟಕ್ಕೆ ಏರಿ ಬಿಡುವರು    ) ಇನ್ನು ಮನೆಯವರು ಬೇಡವೆಂದರೂ ಸಿನಿಮಾ ತೆಗೆಯುವ ಹುಚ್ಚಿನಿಂದ ಕೋಟಿಗಟ್ಟಲೆ ಸಾಲ ಮಾಡಿ ತೆಗೆದ ಸಿನಿಮಾ ಒಂದೆ ದಿನಕ್ಕೆ ತೋಪಾಗಿ ಆಘಾತಗೊಂಡ ನಿರ್ಮಾಪಕರು , ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತದೆ ,
ಇನ್ನು ಇದೆಲ್ಲಕ್ಕಿಂತಲೂ  ಮುಖ್ಯವಾಗಿ ಮೋಸದ ಬಲೆಗೆ ಸಿಕ್ಕು ಒದ್ದಾಡುತ್ತಿರುವ ಗಂಡಸರ ಸಂಖ್ಯೆ ಇನ್ನು ಹೆಚ್ಚಿನದು  ಅನ್ನಬಹುದು . ಈ ಪ್ರಪಂಚದಲ್ಲಿ ಸುಳ್ಳಿನಂತೆ  ಮೋಸವೂ  ಸರ್ವವ್ಯಾಪಿಯೆ ! ಅಷ್ಟೇ ಅಲ್ಲ ಛದ್ಮವೇಷಿ ಕೂಡಾ ! ಹಾಗಾಗಿಯೇ ನಂಬಿ ಕೆಟ್ಟವರಿಲ್ಲವೋ ಎನ್ನುವ ಮಾತು ಅನುಗುಣವಾಗುವುದು ಆ ಭಗವಂತನಿಗಷ್ಟೆ ಹೊರತು  ಮನುಷ್ಯರಿಗಲ್ಲ . ಇನ್ನು ತಿಳಿದೋ ತಿಳಿದೆಯೋ ಇಂತಾ ಮೋಸಕ್ಕೆ  ತುತ್ತಾಗಿ ಉಂಡೆ ನಾಮ  ಹಾಕಿಸಿಕೊಳ್ಳುವ ಈ ಗಂಡಸರು ಸಾಮನ್ಯವಾಗಿ    ದಡ್ಡತನ , ಮುಗ್ಧತನ  , ಪೆದ್ದುತನ , ಭಂಡತನ , ಮೊಂಡುತನ ,ಮೂರ್ಖತನ  ಇತ್ಯಾದಿ  ( ರೋಗ) ಲಕ್ಷಣಗಳಿಂದ ಬಳಲುತ್ತಿರುತ್ತಾರೆ.!  ಅಷ್ಟೇ ಅಲ್ಲದೆ ಹಣದ ಜೊತೆ ಇಂತಾ ಮಹಾನ್ ಗುಣಗಳನ್ನು ಬಂಡವಾಳವಾಗಿಟ್ಟು ವ್ಯಾಪಾರ ವ್ಯವಹಾರಗಳು   ತೋಪಾಗಿ ನೆಲಕಚ್ಚುವುದೆ ಹೆಚ್ಚು .!

ಈ ಗಡ್ಡ ಮೀಸೆ ವರ್ಗದವರು  “ಭಂಡ ಧೈರ್ಯಂ ಸರ್ವತ್ರ ಸಾಧನಂ “ ಎನ್ನುವ ನುಡಿಮುತ್ತಿನಿಂದಲೇ ಸ್ಫೂರ್ತಿ ಪಡೆದರೂ  ವ್ಯವಹಾರಗಳು ಕೈ ಕೊಟ್ಟಾಗ  “ ತಮಗೆ ತಿಳಿಯಲ್ಲ , ಮನೆಯವರು ಹೇಳಿದ್ದು ಕೇಳಲ್ಲ “   ಎಂದೆಲ್ಲ ಅನಿಸಿಕೊಳ್ಳುತ್ತಲೆ ಬದುಕು ಸಾಗಿಸುತ್ತಿರುವವರು ಎನ್ನುವುದು ನನ್ನ ಭಾವನೆ .

ನನ್ನ ಮರುಕದ ಫೀಲಿಂಗು  ಇಂತ ಬಡಪಾಯಿ ಪುಲ್ಲಿಂಗಗಳ ಮೇಲೆ ಹರಿದು ಅವರೆದೆಯೊಳಗಿನ  ಸೂಕ್ಷ್ಮsome-ವೇದನೆಗಳ ಕುರಿತು ತೀವ್ರವಾಗಿ ಚಿಂತಿಸಿತು.  ಮನೆಯವರ ಮುಂದೆ ಇಂತ ಕೈ -ಲಾಸ್  ಸಂಗತಿಗಳನ್ನು ಬಿಚ್ಚಿಡಲು ಆಗದೆ ಬಚ್ಚಿಡಲು  ಆಗದೆ ಇವರು ಅನುಭವಿಸುವ ತಾಕಲಾಟದ ಮನಸ್ಥಿತಿ (ಪರಿಸ್ಥತಿ)ಗಳ ಬಗ್ಗೆ ನಾನು ವಿಶಾಲ ಮನೋಭಾವದಿಂದ ಚಿಂತಿಸಿದಾಗ ಜೀವನದ ಸಣ್ಣ ಸಣ್ಣ ಖುಶಿಗಳನ್ನು ಅನುಭವಿಸದೆ ಸದಾ ಒತ್ತಡಲ್ಲಿರುವ ಮಂದಿಯನ್ನು ಬಲವಂತವಾಗಿ ನಗಿಸಲು ಲಾಫಟರ್ ಕ್ಲಬ್ಗಳಂತೆ  , ಯಾವುದೆ ಹಿಂಜರಿಕೆಯಿಲ್ಲದೆ ತಮ್ಮ ನೋವು, ಸಂಕಟ ,ಸೋಲು ಅಪಮಾನಗಳನ್ನೆಲ್ಲಾ   ಮುಕ್ತವಾಗಿ ಹಂಚಿಕೊಳ್ಳುವ ,ಅಳಬೇಕೆನಿಸಿದಲ್ಲಿ ಸಮಾಜದ ಹಂಗಿಲ್ಲದೆ ಮನಸೋ ಇಚ್ಛೆ ಅತ್ತು ಹಗುರಾಗುವಂತ  ಪುರುಷರ ಕ್ರೈಯಿಂಗ್  ಕ್ಲಬ್  ಒಂದನ್ನು   ಏಕೆ ಶುರು ಮಾಡಬಾರದು ಎನಿಸಿತು .

ಇಂತಾ ಒಂದು ಸಮಾಜಮುಖಿ  ಚಿಂತನೆಯ  ಬೀಜ ಒಡೆದಿದ್ದು  ಸಹ ಆಗಾಗ ನಮ್ಮನೆಯಲ್ಲಿ   ನಡೆಯುವ ಪ್ರಸಂಗದಿಂದಲೆ ಅನ್ನಬಹುದು .ನಾವು ದಂಪತಿಗಳು ನಮ್ಮ ನಿವೃತ್ತಿ ಜೀವನವನ್ನು (ಸದಾ) ಮನೆಯಲ್ಲಿದ್ದುಕೊಂಡೆ ಸಾಗಿಸುತ್ತ ಅರಾಮಾಗಿದ್ದೆವು  ಆದರೆ  ಒಮ್ಮೊಮ್ಮೆ ಕೆಲಸವಿಲ್ಲದ ನನ್ನ ಖಾಲಿ  ಸಮಯದಲ್ಲಿ  ನಮ್ಮ ಎಜಮಾನರು ಹಿಂದೆ ಮಾಡಿಕೊಂಡ ಹಲವಾರು ಎಡವಟ್ಟುಗಳು ಬೇಡವೆಂದರೂ ನೆನಪಾಗಿ  ಬಂಡಾಯ ಕಾವ್ಯಗಳಂತೆ ನನ್ನನ್ನು ಕೆರಳಿಸಿ ಬಿಡುತ್ತಿದ್ದವು !
ಉದಾಹರಣೆಗೆ ನೌಕರಿಯಲ್ಲಿ ಒಳ್ಳೆ ಸಂಪಾದನೆಯಿದ್ದಾಗ   ಕಂಡ ಕಂಡ ಈರಭದ್ರರಿಗೆಲ್ಲ ಸಾಲ ನೀಡಿ ಕೋಡಂಗಿಯಾಗಿದ್ದು , ಎಲ್ಲರನ್ನು ಅತಿಯಾಗಿ   ನಂಬಿ ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಪಂಗ  ನಾಮ ಹಾಕಿಸಿ ಕೊಂಡಿದ್ದು , ಹಣ ಡಬಲ್ ಮಾಡಲು ಹೋಗಿ ನನ್ನನ್ನು  ಮೆಂಟಲ್ ಮಾಡಿದ್ದು ಇಂತಾ ಮಹತ್ಕಾರ್ಯಗಳನ್ನು ಉದ್ದುದ್ದ ನಾಮ ಹಾಕಿಸಿಕೊಳ್ಳಲು ಅನುಕೂಲಕರವಾದ  ಸೈಟಿನಷ್ಟೇ ವಿಶಾಲವಾಗಿರುವ  ಅವರ  ಹಣೆಯನ್ನು ಉದ್ದೇಶಿಸಿ ಜಾಗಟೆ ಹೊಡೆಯುತ್ತಾ ನಾನು ನೆನಪಿಸಿದಾಗಲ್ಲೆಲ್ಲಾ  ಎಜಮಾನರು ಒಮ್ಮಿಲೆ  ಮೌನಕ್ಕೆ ಶರಣಾಗಿಯೋ , ಇಲ್ಲಾ  ನೆನಪಿನ ಶಕ್ತಿಯೆ ಉಡುಗಿದಂತೆ ನಟಿಸಿ  ಹಿತ್ತಲಿನ ಸೀಬೆ ಮರದ ಏಕಾಂತಕ್ಕೆ ತೆರಳುವುದು ಸಾಮಾನ್ಯವಾಗಿತ್ತು . ಮರೆಯಲ್ಲಿ ನಿಂತು ನೋಡುವಾಗ ಇವರ ಮುಖಾರವಿಂದದಲ್ಲಿ   ಪಶ್ಚಾತಾಪದ ಎಳೆಗಿಂತಲೂ ( ಭೋರ್ಗರೆಯುವ ಮುನ್ನಿನ ಮೋಡ ಕವಿದ ಆಗಸದಂತೆ ) ನೋವಿನ ಕಳೆಯೆ  ಪ್ರಧಾನವಾಗಿರುತಿತ್ತು .
ಆಗೆಲ್ಲ ನಾನೆ ಪಶ್ಚಾತಾಪದ ಬೇಗೆಯಿಂದ ಬೆಂದು ಅವರನ್ನು ಸಂತೈಸಿದ್ದಿದೆ . ಆದರೆ ನನ್ನ ನೆನಪಿನ ಶಕ್ತಿಯಲ್ಲಿ ಯಾವ ಕೊರತೆಯೂ ಇಲ್ಲದ ಕಾರಣ ಆಗಾಗ ಈ ಪ್ರಸಂಗ ಪುನರಾವರ್ತನೆಯಾದ ಒಂದು  ಸಮಯದಲ್ಲಿ ಆ ಸೀಬೆ  ಮರದಡಿಯಲ್ಲೆ ನನ್ನ ಬುದ್ಧಿಗೂ ಮೀರಿದ ಜ್ಞ್ಯಾನೋದಯವಾಗಿತ್ತು  ! ಇನ್ನು ಈ ವರ್ತನೆಗೆ  ಮಂಗಳ  ಹಾಡಿ ಇಂತಾ ಶೋಷಿತ ಪುರುಷರಿಗಾಗಿ ಅವರ ನೋವುಗಳಿಗೆ ಕಿವಿಯಾಗಿ , ಅವರು ಕಣ್ಣೀರಿಗೆ   ಹೆಗಲಾಗುವ ಸೂಕ್ತ ವೇದಿಕೆಯೊಂದನ್ನು  ಕಲ್ಪಿಸಲೇಬೇಕು ಎನ್ನುವ ಗಟ್ಟಿ ನಿಲುವು  ಜಾಗೃತವಾಯಿತು  . ಧಿಡೀರ್ ಎಂದು ಉದ್ಭವವಾದ  ಈ ಮಹತ್ ನಿರ್ಧಾರವನ್ನು ಎಜಮಾನರ ಮುಂದಿಟ್ಟಾಗ ನನ್ನನ್ನು ಪತ್ನಿಯಂತೆ ನೋಡದೆ  ಸಮಾಜಕ್ಕಾಗಿ ಅಪ್ರತಿಮ ಕೊಡುಗೆ ನೀಡಿದ ಇತಿಹಾಸದ ಪುಣ್ಯ ಜೀವಿಯಂತೆ ಕಂಡು ಕೈ ಮುಗಿದರು !.

ಅಂತೂ ಒಂದು ಶುಭ ಮುಹೂರ್ತದಲ್ಲಿ   ನನ್ನ ಮಹತ್ವಾಕಾಂಕ್ಷೆಯ  ಕನಸು “ ಪುರುಷರ ಕ್ರೈಯಿಂಗ್  ಕ್ಲಬ್  “ನಮ್ಮ ವಿಶಾಲವಾದ  ಔಟ್ ಹೌಸಿನಲ್ಲೇ ಸ್ಥಾಪನೆಯಾಯಿತು . ಅತ್ತೆ ಹಾಗು ಮಡದಿಯ ಜಗಳಗಳ  ಮಧ್ಯೆ ಸಿಕ್ಕಿ ತಂತಿಯ ಮೇಲೆ ಬ್ಯಾಲೆನ್ಸ್ ಮಾಡುತ್ತಾ  ನಡೆಯುವ ಸರ್ಕಸ್  ಕಲಾವಿದನಂತೆ ಬದುಕು ದೂಡುತ್ತಿರುವ  ನಮ್ಮ  ಎದಿರು ಮನೆಯ ರಂಗಣ್ಣನವರನ್ನೆ ಕ್ಲಬ್ಬಿನ  ಅಧ್ಯಕ್ಷರನ್ನಾಗಿ ಆರಿಸಿದೆವು .

ನಮ್ಮ ಕ್ಲಬ್ಬಿನ ನಿಯಮಾವಳಿಗಳ ಬಗ್ಗೆ ಹೇಳುವುದಾದರೆ ಆಧಾರ್ ಕಾರ್ಡಿನ ಬದಲು ನಿಮ್ಮ ಸಂಕಟ-ಬಾಧೆಗಳನ್ನೆ ಆಧಾರವಾಗಿಸಿಕೊಂಡು ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳುವಂತ ಸಾಮರ್ಥ್ಯವಿದ್ದರೆ ಸಾಕು ಯಾವುದೆ ಶುಲ್ಕವಿಲ್ಲದೆ ನಿಮಗೆ  ನಮ್ಮ ಕ್ಲಬ್ಬಿನಲ್ಲಿ ಅಜೀವ ಸದಸ್ಯತ್ವ  ನೀಡಲಾಗುವುದು , ನಮ್ಮದು ವಿಭಿನ್ನ ರೀತಿಯ ಸಮಾಜ ಸೇವೆ . ಇಲ್ಲಿ ಸದಸ್ಯರ ಮಾತುಗಳನ್ನು ಅತ್ಯಂತ  ಗೌಪ್ಯವಾಗಿರಸಲಾಗುವುದು ಎನ್ನುವ ಆಶ್ವಾಸನೆ ನೀಡುತ್ತೇವೆ .(ನನ್ನ ನಂಬಿ ಪ್ಲೀಸ್ )
ಇನ್ನು ಮುಂದೆ  ನೋವಿನ ಕ್ಷಣದಲ್ಲಿ ನೀವು ಏಕಾಂಗಿಯಲ್ಲ .  ಏನೇ  ನೋವು, ದುಃಖ ,ಬಾಧೆಗಳು  ನಿಮ್ಮನ್ನು  ಪೀಡಿಸುತ್ತಿರಲಿ , ಕಂಬನಿ ಒತ್ತರಿಸಿ ಬರುತ್ತಿರಲಿ , ನೀವು  ಅದೇ ಫೀಲಿಂಗಿನಲ್ಲಿ   ನಮ್ಮ ಕ್ಲಬ್ಬಿನ ವೇಳೆಗನುಸಾರವಾಗಿ ಧಾವಿಸಿ  ಬಂದು ನಿಮ್ಮಂತೆಯೇ ನೋವು  ತಪ್ತ ಮನಸುಗಳೊಡನೆ ಹಂಚಿಕೊಂಡು(ಮನಸೋ ಇಚ್ಛೆ ಅತ್ತು ) ಪ್ರಫುಲ್ಲರಾಗಬಹುದು .ಯಾರಿಗೂ ಸಮಜಾಯಿಷಿ  ನೀಡಬೇಕಿಲ್ಲದ ಈ ಮುಕ್ತ ವಾತಾವರಣ ಇನ್ನು ಮುಂದೆ ನಿಮ್ಮದೇ ತಾಣ ! ಇಲ್ಲಿ ಯಾರು ಮುಖ್ಯರಲ್ಲ . ಯಾರು ಅಮುಖ್ಯರಲ್ಲ!  ಎನ್ನುವ ಕವಿವಾಣಿಯೆ ನಮ್ಮ ಕ್ಲಬ್ಬಿನ ಧ್ಯೇಯೋದ್ದೇಶ !.ಕಾರಣ  ಇಲ್ಲಿ ಎಲ್ಲರೂ  ಅಪರಿಚಿತರೆ !  ಅಪಾರ ಚಿಂತಿತರೆ !

ಇನ್ನು ತಿಂಗಳಿಗೊಮ್ಮೆ ಹುಡುಗಿಯರ ಜೊತೆಗೆ   ಬ್ರೇಕಪ್ ಆಗಿ ಬೆಂಗಳೂರಿನಲ್ಲಿ ಇಂದಿರಾನಗರದ ಬಾರುಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಟೆಕ್ಕಿಗಳು ಈ ರೀತಿ ಕುಡಿದು ಆರೋಗ್ಯ ಹಾಗು ಹಣ ಹಾಳು ಮಾಡಿಕೊಳ್ಳುವ ಬದಲು  ನಮ್ಮ ಕ್ರೈಯಿಂಗ್ ಕ್ಲಬ್ಬಿನಲ್ಲಿ ಸಮಾನ ದುಃಖಿಗಳೊಂದಿಗೆ ಬೆರೆತು ಕಾಡುವ (ಹುಡುಗಿಯ )ನೆನಪಿನ   ವೈರಸ್ಸನ್ನು ಡಿಲೀಟ್ ಮಾಡಿ ಮತ್ತೆ ರೀಸ್ಟಾರ್ಟ್ ಮಾಡಬಹುದು . ಮಡದಿ ಮಕ್ಕಳು ಸೊಸೆಯಂದಿರ ಕೈಗೆ ಸಿಕ್ಕಿ ಸುಲಭವಾಗಿ ಟಾರ್ಗೆಟ್ ಆಗುವ ಹಿರಿಯ ನಾಗರೀಕರಿಗೆ ರಿಯಾಯತಿ ಇರುತ್ತದೆ  ಎಂದೆಲ್ಲ ಸದಸ್ಯರನ್ನು  ಸೆಳೆಯಲು ನಮ್ಮ ಪ್ರಚಾರ ಜೋರಾಗೆ ನಡೆಸಿದೆವು .
ಸದಸ್ಯರು ಸಂಖ್ಯೆಯೇನೂ ದೊಡ್ಡದಾಗಿ ಬೆಳೆಯತೊಡಗಿತು .ಆದರೆ ಕೆಲವರು ವಸುದೈವಕಂ ಕುಟುಂಬಂ ಎಂಬ ಆತ್ಮೀಯ ಭಾವ ಬೆಳೆಸಿಕೊಂಡು ತಮ್ಮ ನೋವುಗಳನ್ನು ನಮ್ಮಲ್ಲೂ ಮುಚ್ಚಿಡಲು ಪ್ರಯತ್ನಿಸಿ ನಮ್ಮ ಕ್ಲಬ್ಬಿನ ಉದ್ದೇಶವನ್ನೇ ಬುಡ ಮೇಲು ಮಾಡಿದಾಗ ರೀಟೈರಡ್ ಆದ ಬಳಿಕ ಸೈಕಾಲಜಿ ಪುಸ್ತಕ ಓದಿಕೊಂಡಿರುವ ನಮ್ಮ ಎಜಮಾನರು ಸದಸ್ಯರ   ಮುಖಚರ್ಯೆ ಗಳಿಂದಲೇ ಅವರಲ್ಲಿ ಹುದುಗಿದ ನೋವಿನ ಪ್ರಮಾಣವನ್ನು ಗ್ರಹಿಸಿ  ಅದನ್ನು ಮತ್ತೆ ನೆನಪು ಮಾಡಿ ಸಾಂತ್ವನ ನೀಡುತ್ತಿದ್ದರು .  

ಇನ್ನು ಕೆಲವರು ಹೇಳಿಕೊಂಡ ಭಾರಿ ದೊಡ್ಡ ಪಂಗನಾಮದ ಕಥೆಗಳನ್ನು ಆಲಿಸಿ ನಾನೇ ಅವರಿಗಾಗಿ  ನಾಲ್ಕು ಹನಿ ಹನಿ ಕಣ್ಣೀರು  ಮಿಡಿದಾಗ  “ ಅಯ್ಯೋ ಹೋಗ್ಲಿ ಬಿಡಿ ಮೇಡಂ , ಇಷ್ಟಕೆಲ್ಲ ನೀವ್ಯಾಕೆ ತಲೆ ಕೆಡಿಸ್ಕೊಥೀರಾ “ ಎಂದು ನನಗೇ ಸಮಾಧಾನ  ಮಾಡುತ್ತಿದ್ದ ಅವರ  ಮೇಲೆ ಅಗಾಧವಾದ  ಸಿಟ್ಟು ಉಕ್ಕಿ ಬರುತಿತ್ತು .

ನಮ್ಮ ಕ್ರೈಯಿಂಗ್ ಕ್ಲಬ್ಬಿನಲ್ಲಿ  ಸದಸ್ಯರ ನೋವು -ನಷ್ಟಗಳ ನೆನಪು ಉಕ್ಕಿ  ಹರಿಯಲಿ ಎನ್ನುವ ಸದ್ದುದ್ದೇಶದಲ್ಲಿ   ಸಾಕಷ್ಟು ವ್ಯವಸ್ತೆಗಳನ್ನು ಮಾಡಿದ್ದೆವು  .ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಂತ ಮಂದ್ರ ಬೆಳಕಿನಲ್ಲಿ  , ಮಂದಗತಿಯ ಶೋಕ ಭರಿತ ರಾಗಗಳನ್ನು ಹಿನ್ನೆಲೆಯಲ್ಲಿ ಬಿತ್ತರಿಸುವುದು  . ಸದಸ್ಯರಿಗೆ ಟಿಶ್ಯೂ ಪೇಪರ್ , ಕಾಟನ್ ಕರವಸ್ತ್ರಗಳನ್ನು ಹಾಗು ಅವರವರ ಅವಶ್ಯಕತೆಗನುಸಾರವಾಗಿ ದಪ್ಪ ಟರ್ಕಿಷ್ ಟವಲ್ಲುಗಳನ್ನು ನೀಡುವುದಷ್ಟೆ ಅಲ್ಲದೆ ಅಲ್ಲದೆ ಅತ್ತು ಅತ್ತು   ಉರಿಯುವ ಕಣ್ಣುಗಳಿಗೆ ಸೌತೆಕಾಯಿ ಬಿಲ್ಲೆಗಳನ್ನು ಹಾಗು ಮೂಗು ಸೋರಿದರೆ ವಿಕ್ಸು, ತಲೆ ನೋವೆದ್ದರೆ ಧಾರಾಳವಾಗಿ ಅಮೃತಾಂಜನ  ಡಬ್ಬಿಗಳನ್ನು ಇಡಲಾಗಿತ್ತು . ಇಷ್ಟೆಲ್ಲಾ ಇದ್ದರೂ ಕೆಲವು ಸದಸ್ಯರು ಅತ್ತಂತೆ ನಟಿಸಿ ಎರಡು ಮೂರು ಸುತ್ತು ತೀ ಕಾಫೀ ಕುಡಿದು ತರಕಿಶ್ ಟವಲ್ , ಟಿಶ್ಯೂ ರೋಲುಗಳನ್ನು ಕೊಂಡು ಹೋಗುತಿದ್ದದ್ದು ನಮ್ಮ ಗಮನಕ್ಕೆ ಬಂದಿತ್ತು .

ಆದರೆ ಕೆಲವು ಸೂಕ್ಷ್ಮ ಸಂವೇದನೆಯುಳ್ಳ  ಸದಸ್ಯರು ಸಹ ಬರುತಿದ್ದು  ಒಮ್ಮೊಮ್ಮೆ ಇವರ ಹೆಪ್ಪುಗಟ್ಟಿದ ನೋವುಗಳು  ಉತ್ಕಟವಾಗಿ ಹರಿದು ಅಪರಚಿತ ಅಣ್ಣ -ತಮ್ಮ ತಂದೆ, ಅಜ್ಜನಂತಿರುವವರನ್ನು  ತಬ್ಬಿ ದುಃಖ  ತೋಡಿಕೊಂಡು ಅವರ  ಅಳು ಧ್ವನಿಪೂರ್ಣವಾಗಿ ಕೇಳಿಸಿದಾಗ , ಕ್ಲಬ್ಬಿನ ಪ್ರವೇಶ ದ್ವಾರದಲ್ಲೆ ಕಟ್ಟು ಹಾಕಿದ ನಮ್ಮ ಮನೆಯ ಬ್ರೂಸ್ಲಿ ಹಾಗು ಚಾರ್ಲಿ ಬುಲ್ ಡಾಗುಗಳ ನಿರಂತರ ಬೊಗಳಾಟಕ್ಕೆ ಆ  ಭಾವೋದ್ವೇಗದ ಧ್ವನಿಗಳು ಹೊರ ಜಗತ್ತಿಗೆ (ರಸ್ತೆಗೆ ) ಕಿಂಚಿತ್ತು ಕೇಳಿಸದಂತೆ ನಾವು ಜಾಗ್ರತೆ ವಹಿಸುತ್ತಿದ್ದೆವು .

ಅರೆ ! ಆಗಲೇ ನಮ್ಮ” ಪುರುಷರ  ಕ್ರೈಯಿಂಗ್ ಕ್ಲಬ್ “ಶುರುವಾಗಿ ಒಂದು ವರ್ಷ ಕಳೆದೆ ಹೋಯಿತಲ್ಲ !ನಮ್ಮ ಕ್ಲಬ್ಬಿನ ಮೊದಲ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ  ಆಚರಿಸಲೇಬೇಕು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ವೀಕ್ಷಕರಿಗೆ ಬಕೆಟ್ ಗಟ್ಟಲೆ  ಕಣ್ಣೀರು ಬರಿಸುವ “ ಅಳು ಮುಂಜಿ ಸಿದ್ದ “ ಜನಪ್ರಿಯ ದಾರಾವಾಹಿಯ  ನಿರ್ಮಾಪಕರಾದ ಶೋಕ ರಾಜ್ ಅವರನ್ನೆ ಆಹ್ವಾನಿಸಬೇಕು ಎಂದೆಲ್ಲ ಯೋಚಿಸುತ್ತಿರುವಾಗ ಯಾರೋ ನನ್ನ ಹೆಸರು ಹಿಡಿದ ಜೋರಾಗಿ ಕರೆದಂತಾಗಿ ದಿಗ್ಗನೆ ಕಣ್ಣು ಬಿಟ್ಟೆ !
ಆರಾಮ ಖುರ್ಚಿಯಲ್ಲಿ  ಹಿತವಾದ ಸಂಜೆಯ ತಂಗಾಳಿಗೆ ಮೈಯೊಡ್ಡಿ ಧ್ಯಾನಸ್ತ ಸ್ಥಿತಿಯಲ್ಲಿದ್ದಾಗ ಇಂತ (ಹುಚ್ಚು ) ಕಲ್ಪನೆಗಳು  ಹುಟ್ಟುವ ಸಮಯ ! ಆಗಲೆ ಇದಕ್ಕೆ ರೆಕ್ಕೆ ಪುಕ್ಕ ಬಲಿತು ವರ್ಷವೂ ಆಗಿಬಿಟ್ಟಿದೆ !

ಮತ್ತೆ “ ವಾಣಿ ಬೇಗ ಬಾರೆ ಇಲ್ಲಿ  “ ಎನ್ನುವ  ಎಜಮಾನರು  ಕೂಗಿದ   ದಿಕ್ಕಿಗೆ   ಧಾವಿಸಿದಾಗ  ಹಿತ್ತಲಿನಲ್ಲಿ  ಕಾಯಿ ಕೀಳಲು  ಸೀಬೆ ಮರ ಹತ್ತಿ   ಕಾಲು ಜಾರಿ ಬಿದ್ದಿದ್ದರು  “ ಅಯ್ಯೋ ! ಸುಮ್ನೆ ಇರೋಕಾಗದೆ ಏನೋ ಒಂದು ಎಡವಟ್ಟು ಮಾಡ್ಕೊತ್ತೀರಿ ! ಈ ನೋವಿಗೆಲ್ಲ ನಿಮ್ಮನ್ನು  ನಮ್ಮ ಕ್ಲಬ್ಬಿಗೆ ಸೇರಿಸಿಕೊಳ್ಳೋಕಾಗಲ್ಲ್ಲ ! ಆಸ್ಪತ್ರೆಗೇ ಹೋಗಬೇಕು ನಡೀರಿ “ ಅವರನ್ನು ನಿಧಾನವಾಗಿ ಎಬ್ಬಿಸುವಾಗ , “ ಯಾವುದೆ ಅದು ನಿನ್ನ ಕ್ಲಬ್ಬು” ಎನ್ನುತ್ತಾ  ಆ ನೋವಿನಲ್ಲೂ  ಆಶ್ಚರ್ಯದಿಂದ  ಕಣ್ ಬಿಟ್ಟರು   !

ಆರತಿ ಘಟಿಕಾರ್



5 comments :

  1. ಛೇ!ಛೇ!! ನಾನೂ ನಿಮ್ಮ ಕ್ಲಬ್ಬಿಗೆ ಸದಸ್ಯನಾಗಬೇಕು ಅಂತಿದ್ದೆ. ಆದರೆ ಇದೆಲ್ಲ ಕನಸೆ? ಕನಸೆಲ್ಲ ನನಸಾಗಲಿ, ಮೇಡಮ್! Count me for membership. ಇಷ್ಟು ಚೆನ್ನಾಗಿ ಬರೆದಿದ್ದೀರಿ. ನಿಮ್ಮ ಲೇಖನಗಳಲ್ಲಿ ವಿನೋದ ಹುಟ್ಟಿಸುವ ಅನೇಕ ಅಂಶಗಳಿದ್ದು, ಅವುಗಳಲ್ಲಿ ಒಂದು ಎಂದರೆ rhyming funny words (ಉದಾ: ಚೀಫ್ ಮಿನಿಸ್ಟರ, ಕರ್ಚೀಫ ಮಿನಿಸ್ಟರ). ಇನ್ನೊಂದು ಅಂಶವೆಂದರೆ ವಿನೋದ ಪ್ರಸಂಗ (ಉದಾ: ಸೀಬೆ ಮರದ ಪ್ರಸಂಗಗಳು.); ಕಾಡುವ ಹುಡುಗಿಯ ನೆನಪಿನ ವೈರಸ್ಸನ್ನು ಡಿಲೀಟ್ ಮಾಡುವುದು. ಇತ್ಯಾದಿ. ಹೆಚ್ಚಿಗೆ ಹೇಳ ಬಯಸುವುದಿಲ್ಲ. ಒಟ್ಟಿನಲ್ಲಿ ನಿಮ್ಮ ಲೇಖನವನ್ನು ನೂರಕ್ಕೆ ನೂರು enjoy ಮಾಡುತ್ತಿದ್ದೇನೆ. ಧನ್ಯವಾದಗಳು.

    ReplyDelete
  2. ಹೃದಯಪೂರ್ವಕ ಧನ್ಯವಾದಗಳು ಸರ್.ನಿಮ್ಮ ಮೆಚ್ಚುಗೆಗೆ ನಮ್ಮ‌ಕ್ಲಬ್ಬಿಗೆ ಹಾರ್ದಿಕ ಸ್ವಾಗತ.. It will be our pleasure to gave learned member like u sir 😂😁.

    ReplyDelete
    Replies
    1. `learned member': ಅಂದರೆ ಅನುಭವಸಂಪನ್ನ ವ್ಯಕ್ತಿ! ಇದು ವಿಶೇಷಾರ್ಥ ಅಲಂಕಾರವಲ್ಲವೆ?

      Delete
  3. ಚಿಂತಕರು ಎನ್ನುವ ರೀತಿಯಲ್ಲಿ ಹೇಳಿದ್ದು‌ ಸರ್ .😊

    ReplyDelete
  4. ಚಿಂತಕರು ಎನ್ನುವ ರೀತಿಯಲ್ಲಿ ಹೇಳಿದ್ದು ಸರ್ 😊

    ReplyDelete