Friday, March 14, 2014

ಕಸ ಆನ್ ಲೈನ್



ಸರಸೂ  ..! ಇಲ್ ಕೇಳೆ ಇನ್ನು ಕಸದ ಸಮಸ್ಯೆ  ಪರಿಹಾರವಾಗುತಂತೆ  ಕಣೆ ..! ಇವರು ಕೈಯಲ್ಲಿ ಎರಡು ಕಸದ  ಬುಟ್ಟಿ  ಹಿಡ್ದು ಮನೆ ಒಳಗಡೆ ಅಡಿ ಇಡುತ್ತ  ಹೇಳಿದರು .   ಕಸದ ವಿಷಯ ಬಂದ ತಕ್ಷಣ  ರಸಂ  ಮಾಡು ತ್ತಿದವಳು ಹೊರಗೋಡಿ ಬಂದೆ .
ನಮ್ಮ ಮನೆಯ ಮುಂದಿನ  ರಾಶಿ ಕಸ ವಾರಗಟ್ಟಲೆ ವಿಲೇವಾರಿ   ಆಗದೆ , ಈ ದುರ್ನಾತಕ್ಕೆ  ನಮ್ಮ ಮೂಗು ಒಗ್ಗಿ ಹೋಗುವ ಪರಿಸ್ಥಿ ತಿ ಬಂದಿತ್ತು . ಇನ್ನು ಫಿನಾಯಿಲ್ , ಉಪ್ಪಿನ ಕಾಯಿ , ಪ್ಲಾಸ್ಟಿಕ್ ಡಬ್ಬ ಮಾರೋ  ಸೇಲ್ಸ್ ಹುಡುಗಿಯರು , ಅನಾಥಾಶ್ರಮ , ಮಣ್ಣು ಮಸಿ ಅಂತ  ಚಂದ ಎತ್ತುವವರು  ನಮ್ಮ ಮನೆಯ ಆಲ್ಸ್ಹೆಶಿಯನ್ ನಾಯಿಗೂ ಹೆದರದೆ ,ಆಗಾಗ  ಬಂದು ಕಾಡು ತ್ತಿದ್ದವರು     ವಾಕರಿಕೆ ಬರಿಸುವ ಕಸದ ದುರ್ನಾತಕ್ಕೆ   ಹೆದರಿ ನಮ್ಮ ಮನೆ ಕಡೆ ಹಾಯ್ದಿರಲಿಲ್ಲ !  ಇನ್ನು ಇದು ಸಾಲದು ಅಂತ  ನಮ್ಮ ಓಣಿಯ ಎದುರಿನ ಚರಂಡಿಯ  ವಾಲ್ವ್ ಒಡೆದು    ಇದರಿಂದಲೂ  ಒಂದು ಗಬ್ಬು ನಾಥ ಬೇರೆ , ಹೀಗಾಗಿ  ಈ ಕಾಕ್ಟೇಲ್  ವಾಸನೆಗೆ , ನಮಗೆ   ಡ್ರಿಂಕ್ಸ್  ಹಾಕದೆ  ತಲೆ ತಿರುಗಿ ಬೀಳುವಂತೆ  ಅಮಲೇ ರಿರುತ್ತಿತ್ತು  . !  ಇನ್ನ್ನು ಪಾಪ ಓಣಿಯ ಜನರು  ಹೊರತಾಗಿ  ಹೊರಗಿನವರು  ಬರಲೇಬೇಕಾದ  ತುರ್ತು ಪರಿಸ್ತಿತಿ  ಇದ್ದರಷ್ಟೇ  ಈ ಕಡೆ ಹಾಯುವ ಧೈರ್ಯ  ಮಾಡಿಯಾರು .
ನನ್ನ  ಯೋಚನೆಗೆ ಕಡಿವಾಣ ಹಾಕುತ್ತ  “ ಏನ್ರಿ ಅದು  ಏನೋ ಕಸ  ವಿಲೇವಾರಿ ಬಗ್ಗೆ ಹೇಳ್ತಾ ಇದ್ದರಲ್ಲ , ಸ್ವಲ್ಪಾ ಸರಿಯಾಗ ಹೇಳ್ರಿ  ಕುತೂಹಲದಿಂದ ಕೇಳುವಷ್ಟರಲ್ಲೆಯೇ .  ನನ್ನ  ಫೋನು ರಿಂಗಣಿಸಿತು . ಆ  ಕಡೆ ಯಿಂದ  ನನ್ನ ಅಕ್ಕನ ಮಗ ಶ್ರೀಕಾಂತು ದ್ವನಿ ಗೆ ನನ್ನ ಮುಖದಲ್ಲಿ  70 mm ಸ್ಮೈಲ್ ನೋಡಿಯೇ ಇವರು ಊಹಿಸರಬೇಕು , ನನ್ನ ಆತ್ಮೀಯ ರದೇ   ಕಾಲು ಅಂತ . ಅವನೇ ಶುರುಹಚ್ಚಿಕೊಂಡ . ಚನ್ನಾಗಿದ್ದೀರಾ ಚಿಕ್ಕಮ್ಮ? , ಮಾವ ಹೇಗಿದ್ದಾರೆ ? ಕುಶಲೋಪರಿಗಳಾದ  ಮೇಲೆ  ಮುಖ್ಯ ಪ್ರಶ್ನೆ ಗೆ ಬಂದ . ಚಿಕ್ಕಮ್ಮ  ನಿಮ್ಮ ಮನೆ ಎದುರ ಗಡೆ  ಕಸ ಎಲ್ಲ ವಿಲೇವಾರಿ  ಆಯ್ತಾ ?
ನಾನು ,ಯಾಕಪ್ಪ ಶ್ರೀಕಾಂತು  ಹಾಗ ಕೇಳ್ತಾ ಇದ್ದೀಯ  ? ಅಂತ  ()ಸಿವಿಸಿ ಯಿಂದಲೇ ಸವಾಲೆಸೆದೆ . ಏನಿಲ್ಲ  ಚಿಕ್ಕಮ್ಮ ನನ್ನ ಮಗನ ಉಪನಯನದ  ಆಮಂತ್ರಣ  ನಿಮಗೆ   ಕೊಟ್ಟು ಹೋಗೋಣ ಅಂತ ಅನ್ನಕೊಂಡ್ಡಿದ್ವಿ . .ಇನ್ನೂ ನಿಮ್ಮ ಮನೆ ಮುಂದಿನ   ಕಸ ಹಾಗೆ ಇದ್ದರೆ ದಯವಿಟ್ಟು ಕ್ಸಮಿಸಿ .ಇಲ್ಲೇ ಫೋನಲ್ಲೇ ಕರೆದು ಬಿಡ್ತೀನಿ , ಯಾಕಂದ್ರೆ  ನಂಗೆ  ಕಸ , ಧೂಳು ಅಂದ್ರೆ ಕೆಮ್ಮು , ಇನ್ನು ನನ್ನ ಹೆಂಡತಿ ವಾಣಿಗೆ , ನಿಮಗೆ ಗೊತಲ್ಲ  ದಮ್ಮು ,ಹಾಗಾಗಿ ಆಕಡೆ ಬಂದ್ರೆ  ಎರಡು ಜಾಸ್ತಿ ಅಗತ್ತೆ ಅದಕ್ಕೆ ..!

 
ನಾನು  ನಿಟ್ಟುಸಿರು ಬಿಡುತ್ತ  ಆಯ್ತಪ್ಪ ಹಾಗೆ ಮಾಡು , ಕಸ ಎಲ್ಲ  ಖಾಲಿ ಆಗಿ ಕ್ಲೀನ ಮಾಡಿದ್ಮೇಲೆ  ನಾನೇ ಫೋನ್ ಮಾಡ್ತಿನಿ , ಸಂಸಾರ  ಸಮೇತ ಬಂದು ಹೋಗು ಅಂತ ಫೋನ್ ಕುಕ್ಕುತ್ತ  “ ಥೂ ! ಏನ್ರಿ ಇದು ...ಈ ಹಾಳು  ಕಸ ನಮ್ಮ ಮಾನ ಮರ್ಯಾದೆ ಎಲ್ಲಾ  ತಗೀತಾ  ಇದ್ಯಲ್ಲ  ...ಇನ್ನು ಎಷ್ಟು ದಿನ ಅಂತ ಇಂಥ  (ನಾಯಿ) ಪಾಡು , .ಈ ಕಸದ ಸಮಸ್ಯೆ ಬಗೆಹರಸ್ಲಿಕ್ಕೆ ಪಾಲಿಕೆ  ಸೂಕ್ತ ಕ್ರಮ ತೊಗೋತೀವಿ ಅಂತ ಹೇಳ್ತಾ ಇದ್ಯಲ್ಲ ,ಅದೇನ್ ಕ್ರಮಾ ನೋ.. ಕರ್ಮಾನೋ ಗೊತ್ತಿಲ್ಲ , ಈ ಸೂಕ್ತ ಕ್ರಮ ಸೂತಕ ಕ್ರಮ ಆಗಬಾರದು ಅಷ್ಟೇ !.ನನ್ನ ಅಸಹನೆ ತೋಡಿ ಕೊಂಡೆ .
ಇವರೂ ನಾ ಹೇಳಿದನ್ನೇ ಅನುಮೋದಿಸುತ್ತಾ “ ಈ ಹಾಳು ಕಸ ನೋಡಿದ್ದಾಗ ಒಮ್ಮೊಮ್ಮೆ ನಮ್ಮ ಏರಿಯಾ ಇವರ ಮ್ಯಾಪಿನಲ್ಲೇ ಇಲ್ಲ ಅನ್ಸತ್ತೆ ಕಣೆ .! ಆದ್ರೆ ಈ ಕಸದ ವಿಷಯದಲ್ಲೇ ನಮ್ಮ ಪಾಲಿಕೆ ಅದೇನೋ ಒಂದು ಹೊಸ ಕ್ರಮ ಕೈಗೊಳ್ತಾ ಇದ್ಯಂತೆ , ಅದರ ಬಗ್ಗೆ ಹೇಳ್ತೀನಿ ಸ್ವಲ್ಪ ಕೇಳಿಸಕೊಳ್ಳೆ ...ಇವರು ಗೋಗರೆದರು .

ಕೋಪದ ಉತ್ತುಂಗದಲ್ಲಿದ್ದ್ದ ನನಗೆ ಇವರು ಗೊಗರೆದಿದ್ದು ನನ್ನ ಮೇಲೆ ಯಾವ ಪ್ರಭಾವವೂ ಬೀಳಲಿಲ್ಲ , ಆದರೆ ನಮ್ಮನೆ ಎದುರಿನ ಕಸದ ರಾಶಿಯಲ್ಲಿ ತನ್ನ ಅಚ್ಚು ಮೆಚ್ಚಿನ ತರಕಾರಿಗಳನ್ನು ಆಯ್ದು ಮೇಯುತ್ತಿದ್ದ ಗೋವಿಗೆ ಇವರು ಗೋ-ಗರೆದಿದ್ದು ಚನ್ನಾಗಿ ಕೇಳಿಸಿರಬೇಕು ಅನ್ಸತ್ತೆ , ಅದೂ “ ಅಂಬಾ “ ಎಂದು ತಾರಕ ಸ್ವರದಲ್ಲಿ ಒಮ್ಮೆ ಕೂಗಿ ನನ್ನ ಪತಿಯ ಮಾತಿಗೆ ಸಮ್ಮತಿ ನೀಡಿತು !

ನಾನು ಯಥಾ ಪ್ರಕಾರ ನನ್ನ ವಾಗ್ದಾಳಿ ಯನ್ನು ಮುಂದುವರೆಸುತ್ತಾ “ ಅಯ್ಯೋ ಅದೇನು ಹೊಸ ಕ್ರಮಗಳು
ಬರೀ ಹೆಸರಿಗೆ ಮಾತ್ರ ಬಿಡ್ರಿ . ಈ ಕಸದ ಸಮಸ್ಯೆ ಒಂದು ಕಡೆ ಆದರೆ , ಈ ರಸ್ತೆ ತುಂಬಾ ಓಡಾಡಲು ಆಗದಂತೆ ತುಂಬ್ಕೊಂಡಿರುವ ಗುಂಡಿಗಳು! , ಇನ್ನು ಅವುಗಳ ಬಗ್ಗೆ ಏನು ಅಂತ ಹೇಳಿಲಿ ? ಗಾಡಿಗಳು , ಜನ ಸಾಮಾನ್ಯರು ಇಬ್ಬರೂ ಇದರಿಂದ ಸಾಕಷ್ಟು ತೊಂದರೆ ಅನುಭವಿಸ್ಥಾ ಇದ್ದಾರೆ ! ಜೋರು ಮಳೆಯಾದಾಗಲಂತೂ ಈ ಎರಡೂ ತುಂಬಿಕೊಂಡು ರೋಡು ಯಾವದು ಗುಂಡಿ ಯಾವದು ಗೊತ್ತೆ ಆಗಲ್ಲ, ! ಈ ಅಪಾಯಕಾರಿ ಗುಂಡಿಗಳನ್ನ ಮುಚ್ಚಿ ಅಂತ ಜನರು ಎಷ್ಟು ಉಗದ್ರು ಈ ಸರ್ಕಾರ ಗುಂಡಿಗಳನ್ನು ಮುಚ್ಚುವ ಬದಲು ಈ ಸಮಸ್ಯೆಗಳಿಗೆಲ್ಲ ತಮ್ಮ ಕಿವಿ ಮುಚ್ಚಿಕೊಂಡು ಕೂತಿದೆ .!
ಮೊನ್ನೆ ನನ್ನ ಗೆಳತಿ ಶಾಪಿಂಗ್ ಮುಗಿಸಿ ಬರುವಾಗ ಮಳೇಲಿ ಸಿಕ್ಕಿ ಹಾಕಿಕೊಂಡಳು . ಸರಿ ರಸ್ತೆ ದಾಟಿ ಆಟೋ ಹತ್ತುವ ಸಲುವಾಗಿ ಹಾಗೆ ನಿಧಾನವಾಗಿ ಮೈಯೆಲ್ಲಾ ಕಣ್ಣಾಗಿ ನಡ್ಕೊಂಡು ಹೋದರೂ ಆದ ಹೇಗೋ ಏನೋ ಗುಂಡಿ ಒಳಗೆ ಸೀದಾ ಜಾರಿ ಸಿಕ್ಕಾಪಟ್ಟೆ ಮಂಡಿ ನೋವು ಮಾಡ್ಕೊಂಡು ಒದ್ದಾಡ್ತಾ ಇದ್ದಾಳೆ ರೀ ! ಆ ನೋವು ಇನ್ನು ವಾಸಿ ಆಗದೆ ಈ ಘನ ಸರ್ಕಾರಕ್ಕೆ ಖಾರವಾಗಿ ದಿನವೂ ಹಿಡಿ ಶಾಪ ಹಾಕ್ತಾ ಇದ್ದಾಳೆ . ಇನ್ನು ಡಾಕ್ಟರು ಬೇರೆ , ಮಂಡಿ ಅಪರೇಷನ್ ಮಾಡಬೇಕಾಗುತ್ತೆ ಅಂತ ಹೆದರಿಸಿದ್ದರಂತೆ ರೀ . ಈ ತರದ ಅವಘಡಗಳು ಎಷ್ಟು ಜನಕ್ಕೆ ಆಗಿದೆಯೋ ಏನು . “ ನನ್ನ ಗೆಳತಿಯ ಮನ ಕರಗಿಸುವ ಕಥೆ ಇವರ ಮುಂದಿಟ್ಟೆ .

ಅಯ್ಯೋ ಪಾಪ ಅಂತ ಇವರು ಲೊಚಗುಟ್ಟಿದ್ದು ಕೇಳಿಸಿತು . ಆದರೆ ಈ ಸರ್ಕಾರಕ್ಕೆ ಇವೆಲ್ಲಾ ಕೇಳಿಸಿದರೆ ತಾನೇ ? ಕರ್ಫ್ಫು ಸಮಯದಲ್ಲಿ “ ಕಂಡಲ್ಲಿ ಗುಂಡು “ ಎಂಬ ಆದೇಶ ವಿದ್ದಂತೆ , ಇಲ್ಲಿ ಕೆಲವು ರಸ್ತೆಗಳ ಮೇಲೆ ನಾವು ದಿನನಿತ್ಯ ನೋಡುವುದು ಕಂಡಲ್ಲಿ ಗುಂಡಿ ಗಳೇ ! ಇನ್ನು ವಾಹನ ಸವಾರರು, ಹಿಂದೆ ಪಿಲ್ಲಿಯನ್ ಮೇಲೆ ಕೂತವರು ಹೈ ಜಂಪು , ಲಾಂಗ್ ಜಂಪು ನಂತೆ ಎಗರಿಕೊಂಡು ಗಾಡಿ ಹೊಡೆಯುತ್ತಾ ತಮ್ಮ ಮೈ ಮೂಳೆಗಳನ್ನು ಅವುಗಳು ಇರುವ ಸ್ಥಾ ನದಲ್ಲೇ ಉಳಿಸಿಕೊಂಡು ಮನೆ ಮುಟ್ಟುವುದೇ ಒಂದು ಸವಾಲು . !

ಇನ್ನು ಮತ್ತೆ ಕಸದ ಸಮಸ್ಯೆಗೆ ಬಂದರೆ ಎಷ್ಟೋ ಏರಿಯಾಗಳಲ್ಲಿ ರಾಶಿ ಗಟ್ಟಲೆ ಕಸದ ಗುಡ್ಡೆ ವಿಲೇವಾರಿ ಆಗದೆ ಗಬ್ಬೆದ್ದು ಹೋಗಿದೆ . ಈ ಕಸ ವಿಲೇವಾರಿ ಆಗಲು ಏನ್ ಕಸರತ್ತು ಮಾಡಬೇಕು ಅಂತ ಕೇಳಲೇಬೇಡಿ ! ಆಗ ಈ ಊರು ಗಾರ್ಡನ್ ಸಿಟಿ ಅಂತಾ ಕರೆಸಿಕೊಳ್ತ್ಹಾ ಇತ್ತು , ಈಗ  ಗಾರ್ಬೇಜ್   ಸಿಟಿ ಅನ್ನೋ ಹಾಗೆ ಆಗಬಿಟ್ಟಿದೆ !

ಅನ್ನುತ್ತಾ ನಾನು ಮತ್ತೆ ಕಸದ ವಿಷಯಕ್ಕೆ ಮತ್ತೆ ಎಂಟ್ರಿ ಕೊಟ್ಟೆ . “ ಅಲ್ಲಾರಿ ಈ ಮೇಯರು   /ಕಾರ್ಪೋರೇಟರ ಗಳು ಏನ್ ನಿದ್ದೆ ಮಾಡ್ತಾ ಇದ್ದಾರಾ ? ತಮ್ಮ  ಏರಿಯಾದ  ಕಾರ್ಪೊರೇಟರ್ ಮನೆ  ಮುಂದೆ ಜನ   ತಮ್ಮ ತಮ್ಮ  ಮನೆಯ ಕಸದ ಬುಟ್ಟಿ (ಕಸದ ಸಮೇತ ) ತಂದು ಇವರ ಮನೆ ಮುಂದೆ  ಸುರಿದು ಪ್ರತಿಭಟನೆ ಮಾಡ್ಬೇಕು  ಕಣ್ರೀ ಆಗ ಗೊತ್ತಾಗತ್ತೆ ! ಅಲ್ಲದೆ ಈ ಹಾಳು ಕಸದ ಮೇಲೆ ಮಳೆ ಸುರಿದು ಸೊಳ್ಳೆಗಳು ತಾಂಡವಾಡ್ತಾ   ಇವೆ  .ಇನ್ನು ನಮಗೂ ಡೆಂಗೂ,  ಮಲೇರಿಯ ಜ್ವರ ಬಂದು ಕಸಕ್ಕೂ ಮುನ್ನ ನಮ್ಮ ವಿಲೇವಾರಿ ಆಗ್ಬಿಟ್ರೆ ಅಂತ ಭಯ ಶುರುವಾಗಿ ಬಿಟ್ಟಿದೆ  ರೀ  .

ನನ್ನ ಕಿರುಚಾಟಕ್ಕೆ ಇವರು ಬ್ರೇಕ್ ಹಾಕಿ  ...” ಅಯ್ಯೋ ಸರಸು  ! ಸ್ವಲ್ಪ ಇಲ್ಲಿ ಸಮಾಧಾನವಾಗಿ ಕೇಳಿಸ್ಕೊಳ್ಳೆ ! ಇದರ ಬಗ್ಗೆನೇ   ನಿನಗೆ ಆಗಲಿಂದಾ ಹೇಳ್ಬೇಕು ಅಂತ ಇದ್ದಿದ್ದು . ಇಲ್ ನೋಡು ಈ ಸಮಸ್ಯೆಗೆ ಇನ್ಮೇಲೆ ಪರಿಹಾರ ಇದೆ ಅನ್ಸತ್ತೆ ಕಣೆ “ ನನ್ನ ಬಾಯಿಗೆ ತಾತ್ಕಾಲಿಕವಾಗಿ ಬೀಗ ಹಾಕಿ ಇವರು ಮುಂದುವರೆಸಿದರು “ ನೋಡು ಇನ್ನು ಮುಂದೆ ಪಾಲಿಕೆ  ಆಧುನಿಕ  ತಂತ್ರಜ್ಞ್ಯಾನ ಬಳಸಿ  ಕಸ  ವಿಲೇವಾರಿನ  ಹೈಟೆಕ್  ಮಾಡ್ತಾರಂತೆ ! .ಪೇಪರನಲ್ಲಿ  ಸುದ್ದಿ ಬಂದಿದೆ ಕಣೆ ! ಬೆಂಗಳೂರಿನ  ಯಾವ ಏರಿಯಾ ದಲ್ಲಿ ಕಸದ ರಾಶಿ ಇದ್ದರೂ ಪಾಲಿಕೆಯ ಅಧಿಕಾರಿಗಳು ಅದನ್ನ ಆನ ಲೈನ್  ಮೂಲಕವೆ  ನೋಡ್ತಾರಂತೆ ! ಅವರು ತಕ್ಷಣ  ಅಲ್ಲಿಗೆ ಗಾಡಿ ಕಳಿಸಿ  ಕಸ ಎಲ್ಲಾ ವಿಲೇವಾರಿ ಮಾಡ್ಸಿಬಿಡ್ತಾರಂತೆ !

ನನಗೆ  ಒಟ್ಟಿನಲ್ಲಿ  ಕಸದ  ದುರ್ನಾತಕ್ಕೋ  ಅಥವಾ ಇವರು ಹೇಳಿದನ್ನು ನಂಬಲಾಗದೆ  ಮೂಗಿನ ಮೇಲೆ ಬೆರಳು ಅಲ್ಲ  ಕರ್ಚೀಪ್  ಇಟ್ಟುಕೊಳ್ಳುವಂತಾಯಿತು .
ನಾನು ಅಯ್ಯೋ  ಬಿಡಿ ಇದೆಲ್ಲ  ಆಗಲ್ಲ  ಬಿಡಲ್ಲ ..ಈ ಅಧಿಕಾರಿಗಳಿಗೆ  ಕಸದ ರಾಶಿ ಯ ಫೋಟೋ ಜೊತೆ ಅದರ ಗಬ್ಬು ನಾತ ಕೂಡ  ಕಂಪ್ಯೂಟರ್ ನಲ್ಲೇ  ಬಂದು ಅವರ ಮೂಗಿಗ್  ಬಡಿಬೇಕು ಕಣ್ರೀ ..ಆಗ ಏನಾದ್ರೂ ಕ್ರಮ ತೊಗೊಳ್ತಾರೆ ಅನ್ಸತ್ತೆ ! ಅಂತ  ಸಿಟ್ಟು ಕಾರಿಕೊಂಡೆ .
ನನ್ನ ಈ ಸೂಪರ್  ಸುಪ್ರೀಂ  ಐಡಿಯಾ ಗೆ ಇವರು ಏನೂ ಹೇಳಲು ತೋಚದೆ  ಬೆಕ್ಕಸ  ಬೆರಗಾಗಿ  ನನ್ನೇ ನೋಡುತ್ತಾ ನಿಂತರು !.  


ಆರತಿ ಘಟಿಕಾರ್ 

ವಿಜಯ ಕರ್ನಾಟಕ ಪತ್ರಿಕೆ ಸಾಪ್ತಾಹಿಕದಲ್ಲಿ   ಬಂದ ಲಘು ಲೇಖನ .

3 comments :

  1. ಕಸ.. ಈ ಪದದಲ್ಲೇ ಸಮಸ್ತ ನೀತಿ ನಿಯಮಗಳು ಅಡಗಿ ಕೂತಿವೆ ಇಲ್ಲವೇ ಎಡವಿ ಬೀಳಿಸುತ್ತಿವೆ.... ವಿಲೇವಾರಿ ಒಂದು ಸಮಸ್ಯೆ ಆದರೆ... ಈ ವಿಲೇವಾರಿ ಮಾಡಲು ಬರುವ ಹುಡುಗರು ಹಾಕಿಕೊಂಡು ಬರುವ ಮೊಬೈಲ್ ಹಾಡುಗಳು ಆಹಾ.. ಕಸದ ವಾಸನೆಯೇ ವಾಸಿ ಅನ್ನಿಸುತ್ತವೆ..

    ಒಂದು ತ್ಯಾಜ್ಯದ ಬಗ್ಗೆ ತಾಜಾ ತಾಜಾ ಉಪಾಯಗಳನ್ನು ಸೇರಿಸಿ.. ನಗೆಯೆಂಬ ಸುಂದರ ಮದ್ದನ್ನು ಕೊಟ್ಟು ಒಳಗಿರುವ ಸಮಸ್ಯೆ ಎನ್ನುವ ತ್ಯಾಜ್ಯವನ್ನು ಮರೆಸುವ ನಿಮ್ಮೀ ಲೇಖನ ಸೂಪರ್ ಮೇಡಂ..

    ನನಗೆ ಇಷ್ಟವಾದ ಸಾಲು "ಅದೇನ್ ಕ್ರಮಾ ನೋ.. ಕರ್ಮಾನೋ ಗೊತ್ತಿಲ್ಲ , ಈ ಸೂಕ್ತ ಕ್ರಮ ಸೂತಕ ಕ್ರಮ ಆಗಬಾರದು ಅಷ್ಟೇ"

    ಹಾಟ್ಸ್ ಆಫ್ ಟು ಯು ಮೇಡಂ

    ReplyDelete
  2. VK - SPಗೆ ಧನ್ಯವಾದಗಳನು ಅರ್ಪಿಸುತ,
    ಕವಿಯ ಬಗ್ಗ ಯಾನೀ ಕಸ ವಿಲೇವಾರಿಯ ಬಗ್ಗೆ ಒಳ್ಳೆಯ ಲೇಖನ.
    ಆನ್ ಲೈನ್ ಅರೆರೆ.

    ReplyDelete
  3. ಕಸಂ ಪೈದಾ ಕರ್ನೇವಾಲೇಕಿ... ಹಹಹ ಚಂದದ ಲೇಖನ

    ReplyDelete