Monday, February 17, 2014

ನನ್ನ ದುಬೈ ಆಫೀಸ್ಸಾಯಣ




ಆ ವಾರ ನನ್ನದು ಕೊನೆಗಳಿಗೆಯ ಪ್ಯಾಕಿಂಗ್ ಶುರುವಾಗಿತ್ತು . ನನ್ನ ಪತಿ  ದುಬೈ ನಗರಿಗೆ ಕೆಲಸದ ನಿಮಿತ್ತ ವಲಸೆ ಹೋಗಿ ಆಗಲೇ ಆರು ತಿಂಗಳಾಗಿತ್ತು . ಇನ್ನು ನಾವುಗಳು ಆ ವಾರಾಂತ್ಯವೇ ಅಲ್ಲಿಗ್ಗೆ  ಹೊರಡುವುದು ಬುಕ್ ಆಗಿತ್ತು .
ಸ್ವಲ್ಪ  ಎಕ್ಸಟ್ರಾ ರೊಕ್ಕ ಕೊಟ್ಟರೂ ಪರವಾಗಿಲ್ಲ ನಿನ್ನ ಎಲ್ಲಾ  ಪಾತ್ರೆ /ಪಗಡ , ಕೆಲವು ಆಗತ್ಯ ವಸ್ತುಗಳ ಇಲ್ಲಿ  ಸಿಗಲಾದಂಥವು , ತಂದು ಬಿಡು ಅಂತ ನನ್ನ ಗೆಳತಿ ಪುಕ್ಕಟೆ ಸಲಹೆ ನೀಡಿದ್ದಳು. ಹೀಗಾಗಿ   ನನ್ನ ಲಗ್ಗೇಜ್  ನೋಡಿ  ನನಗೇ  ಘಾಬರಿ !, ಏರಪೋರ್ಟ್ನ  ಕಸ್ಟಮ್ಸ್ ಇಲಾಖೆಗೆ  ನನ್ನಿಂದ  ಬೃಹತ್   ಆದಾಯ ಅಂತ ವಾರದ ಭವಿಷ್ಯ ಕೇಳಿದ ಹಾಗಿತ್ತು  !  ನನ್ನ ದೇವರಗಳನ್ನೂ  ( ಪುಷ್ಪಕ ) ವಿಮಾನದಲ್ಲಿ ಹತ್ತಿಸಲು ದೊಡ್ಡ ಗಂಟೊಂದನ್ನೆ ಮಾಡಿದ್ದೆ ,  (ಸದ್ಯ ದೇವರ ಮನೆ ಇಲ್ಲೇ  ಉಳಿಸಿದ್ದೆ  ! ) ,ಹಾಗೇನೆ ಮತ್ತೇನಾದ್ರು ತರಲೆ ಅಂತ ಇವರಿಗೆ ಫೋನಾಯಿಸಿದಾಗ  ಇವರಿಗೆ ನನ್ನ ಲಗ್ಗೇಜ್ ವಾಸನೆ ಬಡಿದು ಅಲ್ಲೇ ತಲೆ ಸುತ್ತಿ ಬೀಳುವುದೊಂದೇ ಬಾಕಿ  ! ! ನಾನು “ : ರೀ ಮನೇಲಿ   ಗಸ ಗಸೆ ತುಂಬಾ ಮಿಕ್ಕಿದೆ  , ಅಲ್ಲಿಗೇ  ತಂದು ಬಿಡ್ತೀನಿ , ಹೇಗೂ ನಿಮಗೆ ಗಸಗಸೆ ಪಾಯಸ ಅಂದ್ರೆ ಇಷ್ಟ   ಅಲ್ವಾ ಅಂದೆ . ಇವರು ತಕ್ಷಣ ಘಾಬರಿಯಿಂದ ಆಯ್ಯೋ ಮಾರಾಯ್ತಿ ಮೊದಲು ಅದನ್ನ ಹೊರಗೆ ಎತ್ತಿಡು !  ಈ ದೇಶದಲ್ಲಿ ಗಸಗಸೆ ಯನ್ನ ಡ್ರಗ್ಸ್  ಅಂತ ಪರಿಗಣಿಸ್ತಾರೆ ,  (ಗಾಂಜಾ, ಅಫೀಮ್ ಗಳಂತೆ !)  ಹಾಗಾಗಿ ಅದು ಬ್ಯಾನ್ ಪದಾರ್ಥ , ಇಲ್ಲಿ ತರುವ ಹಾಗಿಲ್ಲ .ಅದೇನಾದ್ರೂ ನಿನ್ನ ಬ್ಯಾಗಲ್ಲಿ ಕಂಡರೆ   ನಿನ್ನನೂ ಒಳಗೆ ಹಿಡಿದು ಹಾಕ್ಬಿಡ್ತಾರೆ ಅಷ್ಟೇ  !ಅಂದ್ರು ,   ತಂಪಾದ ಗಸಗಸೆ ತೊಗೊಂಡ ಹೋಗೋ ಮುಂಚೇನೇ ಇವರು  ನನಗೆ ಬಿಸಿಬಿಸಿ ಯಾಗಿ ಶಾಕ್ ಕೊಟ್ಟಿದ್ರು !  
.
ಅಂತೂ ನನ್ನ ಬೃಹತ್ ಲಗ್ಗೇಜ್  ಹಾಗು  ನನ್ನ ಎರಡು ಪುಟ್ಟ ಲಗ್ಗೇಜ್ (ಮಕ್ಕಳು ) ನೊಂದಿಗೆ  ದುಬೈ ನಗರಿ ಮುಟ್ಟಿದೆ ..ಹೊಸ ಊರು ,ಹೊಸ ವಾತಾವರಣ ಇಷ್ಟವಾಯಿತು .   ಇಲ್ಲಿನ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು , , ಆಧುನಿಕ  ಶಾಪಿಂಗ್ ಮಾಲ್ ಗಳು , /ಮನಮೋಹಕ  ಗಗನ ಚುಂಬಿಗಳು ,ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು  ಹೀಗೆ ...ಎಲ್ಲವನ್ನು ಬೆರಗು ಗಂಣಿನಿಂದ  ನೋಡುತ್ತಾ   ಕ್ರಮೇಣ  ಹೊಸ ಪರಿಸರಕ್ಕೆ ಹೊಂದಿಕೊಂಡೆವು ..
ಕೆಲವು ತಿಂಗಳು ಹೊಸ ಊರು ಒಗ್ಗಿದ ನಂತರ ,  ನಾನೂ  ಇಲ್ಲಿ   ಉದ್ಯೋಗಕ್ಕಾಗಿ ಅರಸುತ್ತಾ , ಒಳ್ಳೆಯ ಸೂಕ್ತವಾದ ಕಂಪನಿ ಒಂದನ್ನ   ಹುಡುಕುವುದರಲ್ಲಿ ಯಶಸ್ವೀ ಆದೆ  ,  ಅಂತೂ ಒಳ್ಳೆಯ ಕಡೆ ಕೆಲಸ   ದೊರೆತು  , ಕಚೇರಿಯ  ವೇಳೆಯೂ ಅನುಕೂಲಕರವಾದ್ದರಿಂದ , ಅಲ್ಲಿಗೇ   ಸೇರಲು ನಿರ್ಧರಿಸಿದೆ .
ಆಗ ನಾನು ಕೆಲಸಕ್ಕೆ    ಸೇರಿದ ಹೊಸತು . ಮೂಲತಹ ಇದು ಅರಬ್ ಕಂಪನಿ .  (ಬ್ರ್ಯಾಂಚ್ ಆಫೀಸು )  ಇನ್ನು ನನ್ನ ಕಚೇರಿಯ ಬಗ್ಗೆ ಹೇಳುವುದಾದರೆ , ಅಲ್ಲಿ   ಎಲ್ಲರೂ ಅರಬ ಮೂಲದವರು , ಕೆಲವರು ಬ್ರಿಟಿಶ್ಶ್ ರಿದ್ದರು .  ನಾನು ಹಾಗು ಮತ್ತೆ ಇನ್ನೊಬ್ಬರು  ಮಲಯಾಳಿ , ನಾವಿಬ್ಬರೇ   ಭಾರತೀಯರು . ಕಚೇರಿಯಲ್ಲಿ  ಬಹುಪಾಲು ಸಹದ್ಯೋಗಿಗಳು  ಇಸ್ಲಾಂ ಧರ್ಮದವರು . ಅದರಲ್ಲಿ  ನಾನೊಬ್ಬಳೆ ಹಿಂದೂ . ಸಾಮಾನ್ಯವಾಗಿ   ಅರಬರು ಎಲ್ಲಾ ಭಾರತೀಯ ಮೂಲದವರನ್ನ  “  ಅಲ್  ಹಿಂದ್ ಅಂದು ಕರೆಯುತ್ತಾರೆ  !  ಮೊದಮೊದಲು ನಾನು ಅದನ್ನು ಕನ್ನಡೀಕರಿಸಿ ಕೊಂಚ  ಗಲಿಬಿಲಿ ಗೊಂಡಿದ್ದೂ ಉಂಟು  . ಅಂತೂ  ಹಾಗೂ ಹೀಗೂ ಹೊಸ ಕಚೇರಿ  ಅನಾಯಾಸವಾಗಿ  ಒಗ್ಗಿತು , ಅಲ್ಲಿ ಎಲ್ಲರೂ ಬಹಳ ಸ್ನೇಹಪರರಾಗಿದ್ದ ಕಾರಣ  ಕಚೇರಿಯ ವಾತಾವರಣ  ಕ್ರಮೇಣ  ಇಷ್ಟವಾಗತೊಡಗಿತು.

ನಮ್ಮ  ಪ್ರಾಜೆಕ್ಟ್  ಮ್ಯಾನೇಜರ್  ಮೂಲತಹ  ಲೆಬಿನಾನ್  ದೇಶದವರು  , ಬಹಳ  ಆತ್ಮೀಯವಾಗಿ ನನ್ನ ಜೊತೆ ಮಾತನಾಡುತ್ತಿದ್ದರು  . ಅವರು ಭಾರತಕ್ಕೆ ಬಹಳ ಸಲ ಪ್ರವಾಸಿಗರಂತೆ  ಬಂದು ಜೈಪುರ, ಹೈದರಾಬಾದ್ , ಬೆಂಗಳೂರಿಗೂ ಸಹ ಭೇಟಿ ನೀಡಿದ್ದರಂತೆ  ,    ಅವರ ಅಣ್ಣನ  ಮಗ  ಬೆಂಗಳೂರಿನ  ಒಂದು   ಇಂಜಿನೀರಿಂಗ್  ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿಯೂ  ತಿಳಿಸಿದ್ದರು .   ನಮ್ಮ  ಭಾರತದ  ಸಂಸ್ಕೃತಿ , ಪರಂಪರೆ ಯನ್ನ ಬಹಳ ಮೆಚ್ಚಿಕೊಳ್ತಾ ಇದ್ದರು. . ಹಿಂದಿ ಸಿನಿಮಾಗಳತ್ತ ಅವರ ಒಲವು ಕಂಡೂ ನನಗೂ ಆಶ್ಚರ್ಯ  !  ಶಾರುಖ  ಖಾನ್ , ಕರೀನಾ ಕಪೂರ್  , ಸಲ್ಮಾನ್  ಖಾನ್,  ಐಶ್ವರ್ಯ ರಾಯ್   ಸಿನಿಮಾಗಳನಂತೂ  ತಪ್ಪಿಸುತ್ತಲೇ  ಇರಲಿಲ್ಲಾ . !  ( ಇಲ್ಲಿನ ಸಿನಿಮಾ ಮಂದಿರಗಳಲ್ಲಿ   ಹಿಂದಿ ಸಿನಿಮಾಗಳಿಗೆ  ಅರೇಬಿಕ್  ಭಾಷೆಯ  “ ಸಬ್ ಟೈಟಲ್ಸ್ರ “ (sub titles ) , ತೋರಿಸುತ್ತಾರೆ   . ) ಹಾಗಾಗಿ ಕೆಲವು ಅರಬರೂ ಕೂಡ ನಮ್ಮಗಳ ಹಾಗೆ ನಮ್ಮ ಬಾಲಿವುಡ್ ನಟ ನಟಿಯರ ಕಟ್ಟಾ ಫ್ಯಾನುಗಳು ಅಂತಲೆ  ಹೇಳಬಹುದು !

ಅವರು  ನನ್ನನ್ನು   ಸಂಬೋಧಿಸುವಾಗ  ಹಲೋ ಅರ್ರಾ .........ತೀ ಅಂತ “  ರಾ  “  ಅಕ್ಷರವನ್ನ  ಎಷ್ಟು ದೀರ್ಘವಾಗಿ ಎಳೀತಾ ಇದ್ದು ಅಂದ್ರೆ ... ಅದೇ ಸಮಯದಲ್ಲಿ  ಒಂದು ಲಾಡು ಆರಾಮವಾಗಿ ಅವರ ಬಾಯಲ್ಲಿ ಹಾಕಬಹುದು ಅಷ್ಟು  !   
  ಇನ್ನು ನಮ್ಮ ಬಿಡುವಿನ ವೇಳೆಯಲ್ಲಿ   ನಾವಿಬ್ಬರೂ   ಕಾಡ ಹರಟೆ  ಅಲ್ಲ ಮರಳುಗಾಡು ಹರಟೆನೂ ಹೊಡೀತಿದ್ವಿ  !. ನಮ್ಮ ಹಿಂದೂ  ಸಂಸ್ಕೃತಿ /ಪರಂಪರೆ  ಗಳು , ನಮ್ಮ ರೂಢಿಗಳ ಬಗ್ಗೆ  ತಿಳಿದುಕೊಳ್ಳುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ . ನಾನು ಕೆಲವು  ಮಾಹಿತಿಗಳನ್ನು , ವಿಚಾರಗಳನ್ನು  ಯಾವಾಗಲಾದರೊಮ್ಮೆ ಅವರು  ಕೇಳಿದಾಗ  ವಿವರಿಸುತ್ತಿದ್ದರೆ  ಅದರ ಬಗ್ಗೆ  ಸ್ವಾರಸ್ಯಕರ ವಾದ ಮುಖ ಭಾವ ಹೊತ್ತು ಕೂತೂಹಲದಿಂದ ಆಲಿಸುತ್ತಿದ್ದರು .

ಹಾಗೇನೆ  ಅವರ ದೇಶದ  ಸಂಸ್ಕೃತಿ , ಆಚಾರ ವಿಚಾರಗಳನ್ನು  ,ಅವರ ದೇಶದ  ಆಂತರೀಕ ಸಮಸ್ಯಗಳನ್ನೆಲ್ಲಾ ನನ್ನೊಂದಿಗೆ    ಮುಕ್ತವಾಗಿ  ಹಂಚಿಕೊಳ್ಳುತ್ತಲೂ ಇದ್ದರು  . 
ಇಲ್ಲಿಯವರಿಗೆ  ವರ್ಷಕ್ಕೆ  ಎರಡು ದೊಡ್ಡ ಹಬ್ಬ , ಒಂದು ರಮಾದಾನ್ (ರಂಜಾನ್) ಈದ್ , ಅಂದರೆ  “ಈದ್ ಅಲ್ ಅದಾ “  ಮತ್ತು ಇನ್ನೊಂದು   “ಈದ್ ಅಲ್ ಫಿತರ್ “  ,ನಮಗೋ  ನೂರೆಂಟು ಈದ್ ಗಳು  ಆಯಿ  ಮೀನ್  ಹಬ್ಬಗಳು  :)  ಹಾಗಾಗಿ ನಾನು  ದೀಪಾವಳಿ .  ಗೌರಿ/ಗಣಪತಿ  , ಹೋಳಿ ( ಬಣ್ಣಗಳ ಹಬ್ಬ ) , ದಸರಾ ಹಬ್ಬಗಳಿಗೆ ಯಾವಾಗಲಾದರೂ  ಒಮ್ಮೊಮ್ಮೆ  ಅನುಮತಿ ದೊರೆತರೆ  ಅರ್ಧ ದಿನ ಆಫೀಸಿಗೆ  ರಜೆ  ಹಾಕುತ್ತಲಿದ್ದೆ :)  ( ಈ ಹಬ್ಬಗಳ   ವಿಶೇಷತೆಗಳ   ಬಗ್ಗೆನೂ  ಅವರಿಗೆ ಹೇಳಿದಾಗ , ಒಹ್ ನಿಮ್ಮ ಹಬ್ಬಗಳೂ  ತುಂಬಾ  ಸ್ವಾರಸ್ಯಕರವಾಗಿದೆ   ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳ್ತಾ ಇದ್ದರು   ! 

 ಹೀಗೆ  ಒಮ್ಮೆ ಗಣಪತಿ ಹಬ್ಬ ದ ಬಗ್ಗೆ  ಹೇಳುತ್ತಾ  ಹೇಗೆ ಗಣಪನ ಮೂರ್ತಿಯನ್ನು   ತಂದು ವಿಜ್ರಂಭಣೆಯಿಂದ 
ಸ್ಥಾಪಿಸಿ , ಪೂಜೆ  ಸಲ್ಲಿಸಿ  ನಂತರ  ಒಂದು ದಿನಕ್ಕೆ ಅಥವಾ ಐದು ದಿನಗಳ ಬಳಿಕೆ ಕೆರೆ / ಸಮುದ್ರದಲ್ಲಿ    ವಿಸರ್ಜನೆ  ಮಾಡ್ತಿವಿ  ಅಂತ ವಿವರಿಸಿದಾಗ    , ಅವರು  ಆಶ್ಚರ್ಯ ದಿಂದ  “  oh soo sad , ಹಾಗಾದ್ರೆ  ಪಾಪ  ಮೂರ್ತಿ ನ್ನು  ನೀರಿನಲ್ಲಿ ಹಾಕ್ಬಿಡ್ತೀರಾ ? ( ಸುಮ್ನೆ ತಂದು ವೇಸ್ಟ್   ಮಾಡ್ಬಿಟ್ರಲ್ಲಾ  ಅನ್ನ್ನೂ ಹಾಗೆ  ಹೇಳಿದಾಗ ನನಗೂ ನಗು J    ಹಾಗಾಗಿ ಪಾರಂಪಾರಿಕ ಹಬ್ಬ ಹರಿದಿನಗಳ  ಬಗ್ಗೆ ನನಗಿರುವ  ತಿಳಿವಳಿಕೆ , ಜ್ಞಾನ ಬಂಡಾರ  ಅವರ ಮುಂದೆ  ಪ್ರದರ್ಶಿಸಿ ನನ್ನ  ಬೆನ್ನನ್ನು  ಸ್ವತಹ  ನಾನೇ ತಟ್ಟಿ ಕೊಳ್ಳುವ ಅವಕಾಶ ನನಗೆ  ಆಗಾಗ ದೊರಯುತ್ತಲಿತ್ತು .

ಒಮ್ಮೊಮ್ಮೆ ನನಗೆ ಅದೇನು ನಿಮ್ಮ ದೇಶದಲ್ಲಿ ಪವಿತ್ರ ನದಿಯಂತೆ  ಗ್ಯಾನ್ಜಸ್ಗ್ಯಾ   (ಗಂಗಾ ನದಿ )  ಅದರಲ್ಲಿ ಮನುಷ್ಯರ ಆಸ್ತಿಗಳನ್ನು ಹಾಕಿಬಿಡ್ತೀರಂತೆ !! ಏಕೆ ಹಾಗೆ ? ನಿಮ್ಮ ಸಾಧುಗಳು  ಏಕೆ ಮೈಯಲ್ಲಾ  ಬೂದಿ  ಬಳಿದುಕೊಂಡು , ಇಷ್ಟುದ್ದಾ  ಕೂದಲು  ಬಿಟ್ಟ ಕೊಂಡಿರ್ತಾರಲ್ಲ್ಲಾ    ....ಅಂತೆಲ್ಲಾ  ನನ್ನ ತಲೇಲಿ  ಹುಳ ಬಿಡ್ತಾ ಇದ್ದ್ರು  ! ( ಅವರು ಯಾವದೋ  ಕುಂಭ ಮೇಳದ  ಸಾಕ್ಷ್ಯ ಚಿತ್ರಗಳನ್ನ ನೋಡಿರಬೇಕು ) ಅವರಿಗೆ  ಸಮರ್ಪಕವಾದ ಉತ್ತರ ಕೊಡ್ತಾ ಕೊಡ್ತಾ  ಅವರು ಬಿಟ್ಟ ಹುಳಾನಾ  ಅವರ  ತಲೆಗೆ ಬಿಡ್ತಾ  (ಕಚ್ಚಿಸ್ತಾ )   ಇದ್ದದ್ದು ಬೇರೆ ವಿಷಯ  ಬಿಡಿ !  ಮೂಲತಃ ವ್ಯಕ್ತಿ  ಒಳ್ಳೆಯವರೇ  !   ಅವರಿಗೆ  ನಮ್ಮ ಕೆಲವು ಧಾರ್ಮಿಕ ಆಚರಣೆ/ಪದ್ಧತಿ  ಗಳನ್ನು ಕೇಳಿ ತಿಳಿಯುವ   ಕೂತುಹಲ ಅಷ್ಟೇ  .! :)


ನಮ್ಮ ಆಫೀಸಿನಲ್ಲಿ ಮಹಿಳಾ ಸಹದ್ಯೋಗಿಗಳ ಸಂಖ್ಯೆ ಕಡಿಮೆ . . ಅದ್ರಲ್ಲಿ ಒಬ್ಬಳು ಚೆಂದುಳ್ಳಿ ಚೆಲುವೆ ಸಿರಿಯಾ ದೇಶದವಳು , ನಿಜಕ್ಕೂ ದಂತದ ಬೊಂಬೆ ಹಾಗೆ ಇದ್ದಳು . “ ಸಮಾ “ ಅಂತ ಅವಳ ಹೆಸರು . interior design departmentinalli  ಅವಳ ಕೆಲಸ  . ನಾವಿಬ್ಬರೂ ಆಗಾಗ ಕುಶಲೋಪರಿ ವಿನಿಮಯ ಮಾಡ್ಕೊಳ್ತಾ ಇದ್ದ್ವಿ , ಅವಳು ನಾ ಕೆಲ್ಸಕ್ಕೆ ಸೇರಿದ ಶುರುವಿನಲ್ಲಿ ಒಮ್ಮೆ ತನ್ನ ಟಿಫನ್ ಬಾಕ್ಸಿನಲ್ಲಿದ್ದ ನಾನ್ -ವೆಜ್ ಆಹಾರವನ್ನ ನನ್ನೊಂದಿಗೆ ಹಂಚಿಕೊಳ್ಳಲು ಬಂದಾಗ ನಾನು ( ಅಲ್ಲಿ ನಾನೊಬ್ಬಳೇ !) ಸಸ್ಯಹಾರಿ ಅಂತ ಗೊತ್ತಾಗಿ ,ಅಯ್ಯೋ ಮೀನು ಕೂಡ ತಿನ್ನಲ್ವಾ ಪಾಪ ! ಅರ್ರೆ ಮೀನು ವೆಜ್ ಅಲ್ವಾ ! ಅಂತ ಬೇಜಾರ್ ಮಾಡಿಕೊಂಡಾಗ ನಾನು ನಕ್ಕು “ ಸಮಾ” ಮೀನು ನಿಮಗೆ ವೆಜ್ ಇರಬಹುದು , ಆದರೆ ನಮಗೆ ಅದು  ನಾನ್ ವೇಜ್ ಅಂದಾಗ ಅವಳಿಗೂ ನಗು !

ಒಮ್ಮೆ ಆಕೆ   ಹೋಗುತ್ತಿದ್ದ  ಕ್ಲಬ್ಬ್ ಒಂದರ   ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ    ಅವಳು ಪಾಲ್ಗೊಂಡಾಗ . ಆ ಕಾರ್ಯಕ್ರಮಕ್ಕೆ   ಭಾರತೀಯ  ಉಡುಗೆಯನ್ನು  ಧರಿಸುವ  ಅವಶ್ಯಕತೆ ಒದಗಿ ಬಂದಿತ್ತು .. ಅವಳ ಭಾರತೀಯ ಗೆಳತಿ ನಾನೇ ಆಗಿದ್ದರಿಂದ ನನ್ನ ಬಳಿಗೆ ಬಂದು ಆರತಿ  , ದಯವಿಟ್ಟು ನೀವು  ಏನು ಅಂದುಕೊಳ್ಳ ದ್ದಿದ್ದರೆ    ನಿಮ್ಮ   ಯಾವುದಾದರೂ  ಗ್ರಂಡಾಗಿರುವ  ಸ್ಯಾರಿ ನನಗೆ ಒಂದು  ದಿನ ಮಟ್ಟಿಗೆ   ಬಾಡಿಗೆಗೆ ಕೊಡ್ತೀರಾ  ? “  ಅಂತ ಕೇಳಿದಾಗ  ನನಗೆ ನಗು . ನಾನು  “ಅಯ್ಯೋ ಧಾರಾಳವಾಗಿ ಕೊಡ್ತೀನಿ , ರೆಂಟು /ಬಾಡಿಗೆ  ಏನೂ ಬೇಡಮ್ಮ “  ಅಂದೆ . “  ಒಹ್ ತುಂಬಾ  ಧನ್ಯವಾದಗಳು  ! ಹಾಗಿದ್ರೆ ಸರಿ ನಾಳೇನೆ  ಕಾರ್ಯಕ್ರಮ , ನನಗೆ ನೀವೇ   ಸೀರೆ   ಉಡಿಸಿ ಬೇಕು ಪ್ಲೀಜ್   “ ಅಂತ ವಿನಂತಿಸಿ , ನನ್ನಿಂದ ಅಸ್ತು ಅಂತ ಅನಿಸಿಕೊಂಡ ಮೇಲೆ  ನಿರಾಳವಾಗಿ   “ಬಾಯ್  ಆರತಿ ತುಂಬಾ  ಧನ್ಯವಾದಗಳು ಅಂತ ಮುದ್ದಾಗಿ ವಿದಾಯ ಹೇಳಿ ಹೊರನಡೆದಳು  .
 ಸರಿ ನನ್ನ  ಒಂದು ಗ್ರಾಂಡ್  ಆಗಿರುವ  ಸೀರೆ  ಹಿಡಿದು   ಮಾರನೆಯ ದಿನ ಆಫೀಸಿಗೆ   ಬಂದಾಗ  ಆಗಲೇ ಅವಳು  ಚಂದದ   ಬಳೆ  ತೊಟ್ಟು , .ಮೇಕ್ಅಪ್  ಮಾಡಿಕೊಂಡು  ತಯಾರಾಗಿ  ಕಾಯ್ತಾ  ಇರುವುದು ನೋಡಿ ನಾನು ತಡ ಮಾಡದೆ  ಅವಳ  ಚೇಂಬರ್ ಗೆ ಕಾಲಿಟ್ಟೆ .  ಅಂದು ಅವಳ ಕೋಣೆ  ನಮ್ಮ ನಾಟಕದ  ಗ್ರೀನ್ ರೂಂ ಆಗಿ ಮಾರ್ಪಾಡಾಯಿತು  ,ಅವಳಿಗೆ  ನನ್ನದೇ ಒಂದು ರೆವಿಕೆ ಅಡ್ಜಸ್ಟ್ ಮಾಡಿ  ನೀಟಾಗಿ ಸೇರಿ ಉಡಿಸಿ , ಬಿಂದಿ ಇಟ್ಟು ( ವಧುವಿನಂತೆ ) ಅವಳನ್ನು ಹೊರಗೆ ಕರೆ ತಂದಾಗ , ಇನ್ನಿತರ  ಅರಬ್  ಸಹದ್ಯೋಗಿಗಳು  ,   ಅವಳನ್ನೇ ನೋಡುತ್ತಾ  ಕಣ್ಣಲ್ಲೇ ನಕ್ಕು ವಾಹ್  , ಇದೇನು ಅರ್ರಾ....ಥಿ , ಸಮಾಳನ್ನು ಅಪ್ಪಟ ಭಾರತೀಯಳನ್ನಾಗಿ   ಮಾಡಿಬಿಟ್ಟಿದ್ದೀರಲ್ಲಾ  ಸೂಪರ್ “  ಅಂದಾಗ  ನನಗೆ ಏನೋ ಹುಮ್ಮಸ್ಸು . ಅವಳು  ಪದೆ ಪದೆ  “ ಬಹುತ್ ಶುಕ್ರಿಯ  ಆರತಿ  , ಅಂತ  ತಾ ಕಲಿತ ಒಂದೆರಡು ಹಿಂದಿ ಶಬ್ದಗಳನ್ನು  ನನ್ನ  ಮೇಲೆ ಪ್ರಯೋಗಿಸಿ ,  ಸೇರೆಯನ್ನು ಮೇಲೆ ಹಿಡುದು  ಕಷ್ಟಪಟ್ಟು   ಸಂಭಾಳಿಸಿಕೊಂಡು  ನಡೆದು ಹೋಗುವುದು ನೋಡಿ ನನಗೂ  ನಗು :) 
  (ಸದ್ಯ ಕಾರ್ಯಕ್ರಮ ಮುಗಿಯುವವರೆಗೂ  ಅವಳ ಸೇರೆ ಯಥಾ ಸ್ತಿತಿ ಯಲ್ಲಿದ್ದರೆ ಸಾಕಪ್ಪ ಅಂತ ಬೇಡಿಕೊಂಡೆ  ) 

ಈ ಮದ್ಯೆ ಒಂದು ದಿನ ನಮ್ಮ  ಕಚೇರಿಯಲ್ಲಿ ಅಕ್ಕೋಟೆಂಟ್ ಆಗಿದ್ದ ಹುಸ್ಸೈನ್ ( ಕೇರಳದವರು ,   ) .  ನನಗೆ ಒಂದು ಸುದ್ದ್ದಿ ತಂದರು,ನಾನು ಮೊದಲೇ ಹೇಳಿದಂತೆ ನಾವಿಬ್ಬರೇ ಭಾರತೀಯ ಮೂಲದವರು ನಮ್ಮ  ಕಚೇರಿಯಲ್ಲಿ .  ಅಂದು  ಅವರು ಉತ್ಸಾಹದಿಂದ  “  ಆರದಿ  ನಿಮಗೆ  ಗೊತ್ತಾ  ? ನಮ್ಮ  ಆಫೀಸಿಗೆ ಒಬ್ಬ ಹೊಸ  ಅಪರೇಷನ್ ಮ್ಯಾನೇಜರ್  ( operation manager ) ಸೇರ್ಪಡೆ  ಆಗ್ತಾ ಇದ್ದಾರಂತೆ  ! ಹೆಸರು  ಸಮೀರ್  ಆಚಕರ್    ಅಂತೆ !  
ನಾನಾಗ ತಕ್ಷಣ   “ ಸಮೀರ್ ಆಚಾರ್ ಇರಬಹುದು ಅನ್ಸತ್ತೆ  ಹುಸ್ಸೈನ್ , ಬಾರತೀಯ ಹೆಸರು ಇದ್ದ ಹಾಗಿದೆ ಅಂದೇ !   ಅವರು ಹೇಳಿದ ಹೆಸರಿನ ಸುತ್ತ ನನ್ನ ಊಹಿಸುವಿಕೆ  ಆ ಕ್ಷಣದಿಂದಲೇ  ಪ್ರಾರಂಭ ವಾಯಿತು . ಒಹ್ ಸಮೀರ್ ಆಚಾರ್  ಅಂದ್ರೆ ಕರ್ನಾಟಕದವರು ಇರಬಹುದಲ್ಲವೇ   !  ಅಂದುಕೊಳ್ಳುತ್ತಾ   ಮನಸ್ಸಿಗೆ ಒಂಥರಾ  ಖುಷಿ ಆಯಿತು , ಹಾಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ಮನೆತನಕ ಬಂದು , ಮನೆಯಲ್ಲೂ ನಮ್ಮವರಿಗೆ ಈ ಸುದ್ದಿ ಯನ್ನ ಬಿತ್ತರಿಸಿದಾಗ  ಅವರೂ  ಆಶ್ಚರ್ಯ ,ಖುಷಿ ಒಟ್ಟೆಗೆ ವ್ಯಕ್ತ ಪಡಿಸಿದ್ದರು  !  ಈ ಅರಬರೆ ತುಂಬಿದ  ಆಫೀಸಿನಲ್ಲಿ  ನಮ್ಮ ಕನ್ನಡವರಿದ್ದರೆ ಎಷ್ಟು ಚೆನ್ನ ಎನ್ನುವ  ಸಂತಸದ ಭಾವನೆಯನ್ನು  ನನ್ನೊಳಗೆ  ಅರಳಿ ಹೂವಾಗಿತ್ತು ,   ಅಂತೂ ನಮ್ಮ ಹೊಸ  ಮ್ಯಾನೇಜರ್  ಆಗಮಿಸುವ  ಘಳಿಗೆ  ಬಂದೆ ಬಿಟ್ಟಿತು ,ನನಗೋ  ಅವರನ್ನು ನೋಡುವ  ಕೊತೂಹಲ ಬೆಳೆದು ಹೆಮ್ಮರವಾಗಿ ನಿಂತ್ತಿತ್ತು !  ಅಂದು ಬೆಳಿಗ್ಗೆ  ಒಂಬತ್ತರ ಸುಮಾರಿಗೆ  ,ಸೂಟು /ಟೈ  ನಲ್ಲಿ  ಆಗಷ್ಟೇ ಬ್ಯುಸಿನೆಸ್ಸ್  ಮೀಟಿಂಗ್ ನಿಂದ  ಬಂದಂತೆ  , ಒಬ್ಬ  ಎತ್ತರದ  ಸುಂದರ ವ್ಯಕ್ತಿ  ಆಫೀಸಿನೊಳಗೆ   ಕಾಲಿಟ್ಟರು .  ನಮ್ಮ ಸಹದ್ಯೋಗಿಗಳು ಅವರನ್ನು ಸ್ವಾಗತಿಸಿ ಹೂ ಗುಚ್ಚಳನ್ನು ಕೊಟ್ಟ ನಂತರ , ನಮ್ಮ ಮ್ಯಾನೇಜರ್  ಅವರನ್ನ ಪರಚಯಿಸುತ್ತ  “ ಫ್ರೆಂಡ್ಸ್  ಇವರು ಸಾಮೇರ್  ಅಚಾಕರ್  “  ( saamer  achaakar  “)  ಅಂತ  ನಮ್ಮ ಹೊಸ ಅಪರೇಷನ್  ಮ್ಯಾನೇಜರ್ ,  ಲೆಬಿನಾನಿನ ದೇಶದವರು “  !!!!  ಅಂದರು   .  ನಾನು ಅವರಿಗೆ  ಹಲೋ ವೆಲ್ಕಂ ಸರ್  ಅಂತ ನಕ್ಕು ಹೇಳಿದರೂ ನನ್ನ ಉತ್ಸಾಹ ಜರ್ರನೆ ಇಳಿದು , ಮನದಲ್ಲಿ  ನಿಧಾನವಾಗಿ ನಿರಾಶೆಯ ಕಾರ್ಮೋಡಗಳು ಹೆಪ್ಪುಗಟ್ಟಲಿಕ್ಕೆ ಶುರು ಮಾಡಿದ್ದವು  !  . ಇನ್ನು  ನಾ ಕಟ್ಟಿಕೊಂಡಿದ್ದ  ಊಹೆಯ  ಸೌಧ   ಗ್ರೌಂಡ್ ಜೇರೊ  ಆಗಿ ಮಲಗಿ ಬಿಟ್ಟಿತ್ತು  ಅಂತ ಬೇರೆ ಹೇಳಬೇಕೆ :)
ಆದರೆ ಆ ( ಪೆದ್ದ) ಭಾವನೆಗಳೆಲ್ಲಾ  ಆ ಕ್ಷಣಕ್ಕಷ್ಟೇ   ಜಾಮಯಿಸಿಕೊಂಡು ನಿಧಾನವಾಗಿ  ಕರಗಿ ನೀರಾಗಿ ಹರಿದು ಹೋಯಿತು ,ಅಷ್ಟೇ  ಅಲ್ಲದೆ ನನಗೆ ನನ್ನ  ಊಹಾಪೋಹಕ್ಕೆ  ನನ್ನ ಮೇಲೇ ನನಗೆ  ನಗು ಬರದೆ ಇರಲಿಲ್ಲ ! .  ಆದರೆ  ಆಸೆ ಪಡುವುದರಲ್ಲಿ ತಪ್ಪೇನು  ಇಲ್ಲ ಅಲ್ವೇನ್ರಿ :) ?  
ಇರಲಿ ಈ ನಮ್ಮ ಹೊಸ  Operation manager  ಮಾತ್ರ ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ  ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ  ಕಾರ್ಯ ಕ್ಷಮತೆ ,ಸ್ನೇಹ  ಸ್ವಭಾವದಿಂದ   ನಮೆಲ್ಲರ ಮನಸನ್ನ ಬಹಳ  ಶೀಘ್ರದಲ್ಲೇ ಗೆದ್ದು ಬಿಟ್ಟಿರು  . 


ನನ್ನ ದಿನಚರಿಗಳು  ಏರು ಪೇರಿಲ್ಲದೆ ಸಾಗಿತ್ತು .  ಆಗ ಜುಲೈ ತಿಂಗಳು ,   ವರ್ಷ ಕಾರಣಾಂತರಗಳಿಂದ   ನಾವು  ನಮ್ಮ ವಾರ್ಷಿಕ    ರಜೆಗೆ  ಭಾರತಕ್ಕೆ ಹೋಗಲಾಗಲಿಲ್ಲ . ಆಗ ಶ್ರಾವಣ ಮಾಸ  ಶುರುವಾಗಿತ್ತು , ಅಂದು  ನಾಗರ ಪಂಚಮಿ  ಹಬ್ಬ . ಬೆಂಗಳೂರಿನಲ್ಲಿದ್ದಾಗ  ಈ ಹಬ್ಬಕ್ಕೆ ನನಗೆ   ತವರಿಗೆ ಹೋಗುವ ರೂಡಿ . ಹೀಗಾಗಿ  ಅಮ್ಮನ   ನೆನಪಾಗಿ ಯಾಕೋ ಮನಸ್ಸಿಗೆ ಬೇಸರವಾಯಿತು . ಬೆಂಗಳೂರಿನಲ್ಲಿ  ನಾವುಗಳು  ಎಷ್ಟು ಶೃದ್ಧಾ ಭಕ್ತಿಯಿಂದ  ಹಾಗು ಉತ್ಸಾಹದಿಂದ  ಈ ಎಲ್ಲ  ಪಾರಂಪರಿಕ ಹಬ್ಬಗಳನ್ನು ಆಚರಿಸ್ತಾ  ಇದ್ದದ್ದು ನೆನಪಿಸಿಕೊಂಡು  ತಾಯಿನಾಡಿನ ಸೆಳೆತ  ತೀವ್ರವಾಗಿ ಕಾಡಿತು.  ಆದರೆ ನಾನು ಇಲ್ಲಿ ಬಂದ ಮೇಲೂ ಇವುಗಳನ್ನೆಲ್ಲಾ  ಯಥಾಶಕ್ತಿಯಾಗಿ  ಆಚರಿಸಿಕೊಂಡು ಬಂದಿದ್ದೆ.  ಹಾಗೇನೆ  ಇದಕ್ಕೆ  ನನ್ನ ಸ್ವಯಂ ಪ್ರೇರಿತ  ಆಸಕ್ತಿ ,ಬೆಳದುಬಂದ   ಬಂದ ಸಂಸ್ಕೃತಿಯೂ   ಕಾರಣ ವೆನ್ನಬಹುದು  . ಇನ್ನೊಂದೆಂದರೆ   ಇಲ್ಲಿ   ಎಲ್ಲಾ  ರೀತಿಯ   ಹಬ್ಬದ ಸಾಮಗ್ರಿಗಳು /  ಹೂವು .ಹಣ್ಣುಗಳು  ಯಥೇಚ್ಚವಾಗಿ ಸಿಕ್ಕು ಹಬ್ಬವನ್ನ ಆಚರಿಸಲು ಅನುಕೂಲವಾಗಿತ್ತು.  ಇನ್ನು  ನಮ್ಮ ಅಕ್ಕ ಪಕ್ಕ ಇದ್ದ  ಕನ್ನಡ  ಬಳಗದವರ ಜೊತೆ   ಸೇರಿ ಸಾಂಪ್ರದಾಯಕವಾಗಿ ಕೆಲವು  ಆಚರಣೆಗಳನ್ನ  ಅವರೊಂದಿಗೆ  ಸೇರಿ ಸಂಭ್ರಮಿಸುವ   ಸದವಕಾಶ ,ಸುಯೋಗ ಕೂಡ ನನಗೆ ಒದಗಿ ಬಂದಿತ್ತು . 

ಸರಿ ಅಂದು  ನಾಗರ  ಪಂಚಮಿಯಾದ್ದರಿಂದ  ನಾನೂ ಸಹ  ಭಕ್ತಿಯಿಂದ  ನಾಗಪ್ಪನಿಗೆ  ಹಾಲೆರೆದು  , ತಂಬಿಟ್ಟು  ಉಂಡೆಗಳನ್ನು  ಅರ್ಪಿಸಿ , ಪೂಜೇ ಮುಗಿಸಿ  ಆಫೀಸಿಗೆ ಸೀರೆ  ಉಟ್ಟುಕೊಂಡು ಹೊರಟೆ . ಆಗ  ನನ್ನ ಲೆಬನೀಸ್  ಮಿತ್ರರು  ( ಅದೇ ನಮ್ಮ ಪ್ರಾಜೆಕ್ಟ್ ಮ್ಯಾನೇಜರು  !  ನನ್ನು ಕುರಿತು  “ ಒಹ್ ಅರ್ರಾ ....ತೀ ,ಏನು ಇವತ್ತು ಭಾರತೀಯ  ಉಡುಗೆಯಲ್ಲಿ ಬಂದು ಬಿಟ್ಟಿದ್ದೀರಾ  ! ತುಂಬಾ ಚನ್ನಾಗಿದೆ  ,! ಇದು ನಿಮಗೆ  ಯಾವ ಈದ್ ? ಅಂತ  ತಮಾಷೆ  ಮಾಡಿದಾಗ , ನನಗೂ    ಇವರಿಗೆ   ಸ್ವಲ್ಪ   ತಮಾಷೆ ಮಾಡಿನೋಡೋಣಾ  ಅಂತ ಅನಿಸಿತು .   ನಾನು ಸರ್  ಇವತ್ತು  snake god “ (ನಾಗಪ್ಪನ) ಹಬ್ಬ ! ಅಂದಾಗ ಅವರಿಗೆ ಒಂಥರಾ   ಶಾಕ್  !   ಆಗ ಅವರು  “ ಏನು ! ನಿಮಗೆ ಹಾವೂ ಕೊಡಾ ದೇವರೇ “  ? ಅಂತ  ಭಯ ಮಿಶ್ರಿತ  ಆಶ್ಚರ್ಯದ ಕಣ್ಣುಗಳನ್ನು  ದೊಡ್ಡದಾಗಿ   ಹಿಗ್ಗಿಸಿ  ಕೇಳಿದರು. !  ನಾನು  “  ಹೌ ದು ಸರ್  ನಮ್ಮ ಸಂಪ್ರದಾಯದಲ್ಲಿ    ಕೆಲವು ಪ್ರಾಣಿಗಳು  ವಿಶೇಷವಾದವು , ಅವುಗಳು ನಮಗೆ  ದೇವರ  ಸ್ವರೂಪ  “ ಅಂದೆ .  ಅವರು  ಸುಮ್ನೆ ಇರದೇ , ಗೊತ್ತೇ ಇದ್ಯಲ್ಲ  ಅವರಿಗೆ ಇನ್ನಷ್ಟು   ತಿಳಿಯುವ  ಕೂತೂಹಲ  ಎಂದಿನಂತೆ  ! “ ಸರಿ   ಈ ಹಬ್ಬಾನಾ   ಹೇಗೆ ಆಚರಸ್ತೀರಾ   ?  “ ಅಂತ ಆಸಕ್ತಿಯಿಂದ ಕೇಳಿದ್ರು . ನಾನಾಗ  “  ಸರ್  ನಾವು   ಸ್ನೇಕ ಗಾಡ್ನನನ್ನು  ಭಕ್ತಿಯಿಂದ  ಪೂಜಿಸಿ , ಹಾಲೆರದು  , ಸ್ವೀಟ್ಟ್ಗಳನ್ನು  ಅರ್ಪಿಸ್ತೇವೆ ಅಂದೆ  !”  ಅವರು ಆಗ  ಜೀವಂತ ಹಾವನ್ನೇ  ಕಲ್ಪಿಸಿಕೊಂಡು  ನನ್ನನ್ನು   ಕಾಡಿನಲ್ಲಿ  ಬೇಟೆಗಾರನ  ರೊಪದಲ್ಲಿ  ಚಿತ್ರಿಸಿಕೊಂಡರೇನೂ   ಅನ್ಸತ್ತೆ  !  ,ಅವರಿಗೇಕೂ   ನಾನು ಹೇಳುತ್ತಿರುವುದು  ಮನದಟ್ಟಾಗಲಿಲ್ಲ  .   ! ಅದರ ಬದಲು ಅವರ ಮನವೇ  ದಟ್ಟ  ಕಾಡಾಗಿ  ಅಲ್ಲಲ್ಲಿ  ಆಶ್ಚರ್ಯದ ಮುಳ್ಳುಗಳೇ  ಎದ್ದು ನಿಂತ ಹಾಗೆ ನನಗೆ ಕಂಡಿತು , ನಾನು ಒಳಗೊಳಗೇ ನಗು ತಡೆದು ಕೊಂಡು ಮುಂದುವರಿಸುತ್ತಾ  “ ಸರ್  ಪೂಜೆ ಎಲ್ಲಾ  ಮುಗಿಸಿ   ನ್ಯೈವೇದ್ಯಾ  ( ಈ ಶಬ್ದ ಅವರಿಗೆ ವೇದ್ಯ ವಾಗುವ  ಹಾಗೆ ವಿವರಿಸಿ   )    ವಾದ  ನಂತರ ನಾವೂ   ಸ್ವೀಕರಸ್ತೀವಿ .ಅಂದೆ . ಅವರು  ಸೀಟಿನಿಂದ ಚಂಗನೆ ಮೇಲೆದ್ದು   “  you u mean  the snake ? “  ಅಂತ  ಘಾಬರಿಯಾಗಿ ಕೇಳಿದ್ರು :)  ( ಅವರಿಗೆ  ಚೀನಾ ದೇಶಾ ನೆನಪಾಗಿರಬೇಕು, ) ಆಗಾ ನನಗೆ  ನಗು ತಡೆಯಲು ಆಗಲೇ ಇಲ್ಲ  “  ಸರ್  ಅಲ್ಲ !  ದೇವರಿಗೆ ಅರ್ಪಿತವಾಗಿರುವ  ಸ್ವೀಟ್ಸ್   ತಿಂತೀವಿ  “ ಅಂದೇ     (ನನ್ನ ತಮಾಷೆ ಹೀಗೆ  ಕ್ಲಾಮಾಕ್ಸ್ ( climax )  ಹಂತಕ್ಕ  ತಲುಪಿದ್ದು  ಕಂಡು ನನಗೆ  ಆಶ್ಚರ್ಯ ಒಂದು ಕಡೆ ಯಾದರೆ   ಉಕ್ಕಿ ಬರುತ್ತಿರುವ ನಗು ಇನ್ನೊಂದು  ಕಡೆ     ! ಆಗ   ಅವರೂ ಜೋರಾಗಿ ನಗುತ್ತಾ   “ ಓಹೋ   ಅರ್ರಾ  ....ತಿ  ನನಗೆ ತಮಾಷೆ ಮಾಡ್ತಾ ಇದ್ದೀರಾ !   ಪರವಾಗಿಲ್ಲಾ  ನೀವು   !  ಆದರೆ  ನೀವು  ಎಲ್ಲಾ ದೇವರಗಳನ್ನು  ಮೂರ್ತಿಗಳ  ರೂಪದಲ್ಲಿ  ಪೂಜಿಸ್ತೀರಾ ಅಲ್ವಾ , ? ನನಗೆ ಗೊತ್ತು ಬಿಡಿ ,   ನೀವು ಮೊದಲೇ ನನಗೆ ಇದರ ಬಗ್ಗೆ ಹೇಳಿದ್ದೀರಾ ಅಲ್ವಾ ನಾನೂ  ನಿಮಗೆ ಸ್ವಲ್ಪ  ತಮಾಷೆ   ಮಾಡಿ ನೋಡ್ತಾ ಇದ್ದೆ ಅಷ್ಟೇ “  :) ಅಂತ ಕಿಚಾಯಿಸಿದಾಗ   ಇಬ್ಬರೂ ಮನಸಾರೆ  ನಕ್ಕು ಬಿಟ್ಟೆವು  !

ಹೀಗೇ  ಮನದ ಖಜಾನೆಯಿಂದ ನೆನಪುಗಳನ್ನ  ಕೆದಕುತ್ತಾ  ಹೋದಾಗ ,  ಅವುಗಳ ಜೊತೆಯಲ್ಲೇ ಈ ಸ್ವಾರಸ್ಯ ಕರ ಅನುಭವಗಳೂ  ಮುತ್ತುಗಳಂತೆ ಒಂದೊಂದೇ ಹೊಳೆಯುತ್ತಾ  ನನ್ನ ಕೆಣಕಲು ನನ್ನ ತುಟಿಯ ಮೇಲೆ  ಮಂದಹಾಸ, ಮೂಡಿ  ,ಮನಸ್ಸಿಗೆ  ಮಾತ್ರ ಕಚಗುಳಿ ಇಟ್ಟ ಅನುಭವವಾಯಿತು  !

ಆರತಿ ಘಟಿಕಾರ್
ದುಬೈ

1 comment :

  1. ಅವರಿಗೆ ನಮ್ಮ ಕೆಲವು ಧಾರ್ಮಿಕ ಆಚರಣೆ/ಪದ್ಧತಿಗಳನ್ನು ಕೇಳಿ ತಿಳಿಯುವ ಕೂತುಹಲ ಅಷ್ಟೇ, ಆದರೆ ನಮಗೇ ಅವುಗಲ ಪೂರ್ಣ ಅರಿವೆಲ್ಲಿದೆಯಂತೀರ?

    ReplyDelete