Saturday, April 13, 2013

ನನ್ನ ದುಬೈ ಆಫೀಸಾಯಣ


                            
ಆ ವಾರ ನನ್ನದು ಕೊನೆಗಳಿಗೆಯ ಪ್ಯಾಕಿಂಗ್ ಶುರುವಾಗಿತ್ತು . ನನ್ನ ಪತಿ  ದುಬೈ ನಗರಿಗೆ ಕೆಲಸದ ನಿಮಿತ್ತ ವಲಸೆ ಹೋಗಿ ಆಗಲೇ ಆರು ತಿಂಗಳಾಗಿತ್ತು . ಇನ್ನು ನಾವುಗಳು ಆ ವಾರಾಂತ್ಯವೇ ಅಲ್ಲಿಗ್ಗೆ  ಹೊರಡುವುದು ಬುಕ್ ಆಗಿತ್ತು .
ಸ್ವಲ್ಪ  ಎಕ್ಸಟ್ರಾ ರೊಕ್ಕ ಕೊಟ್ಟರೂ ಪರವಾಗಿಲ್ಲ ನಿನ್ನ ಎಲ್ಲಾ  ಪಾತ್ರೆ /ಪಗಡ , ಕೆಲವು ಆಗತ್ಯ ವಸ್ತುಗಳ ಇಲ್ಲಿ  ಸಿಗಲಾದಂಥವು , ತಂದು ಬಿಡು ಅಂತ ನನ್ನ ಗೆಳತಿ ಪುಕ್ಕಟೆ ಸಲಹೆ ನೀಡಿದ್ದಳು. ಹೀಗಾಗಿ   ನನ್ನ ಲಗ್ಗೇಜ್  ನೋಡಿ  ನನಗೇ  ಘಾಬರಿ !, ಏರಪೋರ್ಟ್ ಇಲಾಖೆಗೆ  ನನ್ನಿಂದ  ಬೃಹತ್   ಆದಾಯ ಅಂತ ವಾರದ ಭವಿಷ್ಯ ಕೇಳಿದ ಹಾಗಿತ್ತು  !  ನನ್ನ ದೇವರಗಳನ್ನೂ  ( ಪುಷ್ಪಕ ) ವಿಮಾನದಲ್ಲಿ ಹತ್ತಿಸಲು ದೊಡ್ಡ ಗಂಟೊಂದನ್ನೆ ಮಾಡಿದ್ದೆ ,  (ಸದ್ಯ ದೇವರ ಮನೆ ಇಲ್ಲೇ  ಉಳಿಸಿದ್ದೆ  ! ) ,ಹಾಗೇನೆ ಮತ್ತೇನಾದ್ರು ತರಲೆ ಅಂತ ಇವರಿಗೆ ಫೋನಾಯಿಸಿದಾಗ  ಇವರಿಗೆ ನನ್ನ ಲಗ್ಗೇಜ್ ವಾಸನೆ ಬಡಿದು ಅಲ್ಲೇ ತಲೆ ಸುತ್ತಿ ಬೀಳುವುದೊಂದೇ ಬಾಕಿ  ! ! ನಾನು “ : ರೀ ಮನೇಲಿ   ಗಸ ಗಸೆ ತುಂಬಾ ಮಿಕ್ಕಿದೆ  , ಅಲ್ಲಿಗೇ  ತಂದು ಬಿಡ್ತೀನಿ , ಹೇಗೂ ನಿಮಗೆ ಗಸಗಸೆ ಪಾಯಸ ಅಂದ್ರೆ ಇಷ್ಟ   ಅಲ್ವಾ “ ಅಂದೆ . ಇವರು ತಕ್ಷಣ ಘಾಬರಿಯಿಂದ “ ಆಯ್ಯೋ ಮಾರಾಯ್ತಿ ಮೊದಲು ಅದನ್ನ ಹೊರಗೆ ಎತ್ತಿಡು !  ಈ ದೇಶದಲ್ಲಿ ಗಸಗಸೆ ಯನ್ನ ಡ್ರಗ್ಸ್  ಅಂತ ಪರಿಗಣಿಸ್ತಾರೆ ,  (ಗಾಂಜಾ, ಅಫೀಮ್ ಗಳಂತೆ !)  ಹಾಗಾಗಿ ಅದು ಬ್ಯಾನ್ ಪದಾರ್ಥ , ಇಲ್ಲಿ ತರುವ ಹಾಗಿಲ್ಲ .ಅದೇನಾದ್ರೂ ನಿನ್ನ ಬ್ಯಾಗಲ್ಲಿ ಕಂಡರೆ   ನಿನ್ನನೂ ಒಳಗೆ ಹಿಡಿದು ಹಾಕ್ಬಿಡ್ತಾರೆ ಅಷ್ಟೇ  !” ಅಂದ್ರು ,   ತಂಪಾದ ಗಸಗಸೆ ತೊಗೊಂಡ ಹೋಗೋ ಮುಂಚೇನೇ ಇವರು  ನನಗೆ ಬಿಸಿಬಿಸಿ ಯಾಗಿ ಶಾಕ್ ಕೊಟ್ಟಿದ್ರು !  
.
ಅಂತೂ ನನ್ನ ಬೃಹತ್ ಲಗ್ಗೇಜ್  ಹಾಗು  ನನ್ನ ಎರಡು ಪುಟ್ಟ ಲಗ್ಗೇಜ್ (ಮಕ್ಕಳು ) ನೊಂದಿಗೆ  ದುಬೈ ನಗರಿ ಮುಟ್ಟಿದೆ ..ಹೊಸ ಊರು ,ಹೊಸ ವಾತಾವರಣ ಇಷ್ಟವಾಯಿತು .   ಇಲ್ಲಿನ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು , , ಆಧುನಿಕ  ಶಾಪಿಂಗ್ ಮಾಲ್ ಗಳು , /ಮನಮೋಹಕ  ಗಗನ ಚುಂಬಿಗಳು ,ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು  ಹೀಗೆ ...ಎಲ್ಲವನ್ನು ಬೆರಗು ಗಂಣಿನಿಂದ  ನೋಡುತ್ತಾ   ಕ್ರಮೇಣ  ಹೊಸ ಪರಿಸರಕ್ಕೆ ಹೊಂದಿಕೊಂಡೆವು ..
ದುಬೈ ಒಂದು ಬೃಹತ್ ಪ್ರವಾಸಿ  ಕೇಂದ್ರ . ಜಗತ್ತಿನಾದ್ಯಂತ  ಪ್ರವಾಸಿಗರು ಈ ಮರಳುಗಾಡಿನ ಮಾಯಾ ನಗರಿಯನ್ನ ,ಹಾಗೂ    . ಅದರ ಜಾದೂವನ್ನ  ಅನುಭವಿಸಲು ಬರುತ್ತಾರೆ !  ಬಂದ ಹೊಸತರಲ್ಲಿ  ನಾವೂ ವಾರಾಂತ್ಯದಲ್ಲಿ  ಇಲ್ಲಿನ ಪ್ರಮುಖ ಪ್ರವಾಸಿ ಸ್ತಳಗ;ಳಿಗೆ ಭೇಟಿ ನೀಡುವ ಹವ್ಯಾಸ ವಿಟ್ಟು  ಕೊಂಡಿದ್ದೆವು  . ಹೀಗೆ ಸುತ್ತಾಡಲು ಹೋದಾಗಲೆಲ್ಲಾ     ನಮಗೆ, ಪ್ರಪಂಚದ  ನಾನಾ ಭಾಗದ  ಜನರು  , ನನಗೆ ಹೊಸ ರೀತಿಯಂತೆ ತೋರುವ ಅವರ ವೇಷ/ಭೂಷಣಗಳು , ಜೊತೆಗೆ  ವಿಭಿನ್ನ ಬಾಷೆಗಳನ್ನ    ಮಾತಾಡುತ್ತಾ ಮುಕ್ತವಾಗಿ  ಸುತ್ತಾಡುವುದು ಕಂಡುಬರುತ್ತಿತ್ತು . ಇಲ್ಲಿಯ ಸಾಂಪ್ರದಾಯಿಕ ಉಡುಗೆ ಬಗ್ಗೆ ಹೇಳುವುದಾದರೆ   ಇಲ್ಲಿನ ಅರಬ ಪುರುಷರು ಶ್ವೇತ ವರ್ಣದ  ಅತ್ಯಂತ ಶುಭ್ರವಾದ ಉದ್ದನೆಯ ನಿಲುವಂಗಿ ,ಧರಿಸುತ್ತಾರೆ . ( ಇದಕ್ಕೆ ಕಂದೂರಾ  ಅಥವಾ ದಿಶ್-ದಶಾ ಅಂತಲೂ ಕರೆಯುತ್ತಾರೆ ) , ಹಾಗೆಯೇ ಶಿರದ ಮೇಲೆ ಶ್ವೇತ ವರ್ಣದ ಚೌಕವಾದ ವಸ್ತ್ರವನ್ನ ತ್ರಿಕೋನಾಕಾರದಲ್ಲಿ  , ಕೆಲವು ದೇಶದವರು  ಕೆಂಪು ಪ್ರಿಂಟ್ನದು  , ಹೊದ್ದು ಅದಕ್ಕೆ  ಒಂದು ಕಪ್ಪು ಬಣ್ಣದ ಸ್ಯಾಟಿನ್ ಪೈಪಿನಂಥಹದು ಸುತ್ತಿರುತ್ತಾರೆ .  ( ನನಗಂತೂ ಇವರ ದಿರಸಿನ  ಶುಭ್ರತೆಯನ್ನು ನೋಡಿ ಅಬ್ಬ  ನಮ್ಮ ಯಾವುದಾದರೂ ಬಟ್ಟೆ  ದಿಟರ್ಜೆಂಟ್  ಜಾಹೀರಾತಿಗೆ  ಇವರೆಲ್ಲ ಹೇಳಿ   ಮಾಡಿಸಿದ ಹಾಗಿದ್ದ್ದಾರೆ  ಅನ್ನಿಸದೆ ಇರಲಿಲ್ಲ :)   .ಹಾಗೇನೆ  ನನ್ನ ಮಕ್ಕಳಿಗೂ  ಈ ಆರಬ್ ಉಡುಗೆ  “ ದಿಶ-ದಶಾ “ ಹಾಕಿ ಫೋಟೋ ತಗೆಸಿ ಅತ್ತೆ ಹಾಗು ಅಮ್ಮನಿಗೆ  ಕಳಿಸಿದಾಗ  ಒಹ್ ಯಾರೀ ಪುಟ್ಟ  ದುಬೈ  ಷೇಕ ಅಂತ ಅವರೆಲ್ಲಾ  ಖುಷಿ ಪಟ್ಟಿದ್ದರು  . ಸದ್ಯ  ಇಲ್ಲಿ ನಾವುಗಳು ಯಾವ ಅಭ್ಯಂತರವಿಲ್ಲದೆ   ನಮ್ಮ ಭಾರತದ ಉಡುಗೆ ತೂಡುಗೆಗಳನ್ನು ಧರಸಿಬಹುದಾಗಿದ್ದು  ನನಗೆ ಅತ್ಯಂತ ಸಂತಸ  ಕೊಟ್ಟ ವಿಚಾರ . ಹಾಗೇನೆ  ಈ  ದೇಶದಲ್ಲಿ ನಮ್ಮ ಭಾರತೀಯರ ಸಂಖ್ಯೆಯೇ ಗಣನೀಯವಾಗಿ ಕಂಡು ಬರುತ್ತದೆ .
 
ಕೆಲವು ತಿಂಗಳು ಹೊಸ ಊರು ಒಗ್ಗಿದ ನಂತರ ,  ನಾನೂ  ಇಲ್ಲಿ   ಉದ್ಯೋಗಕ್ಕಾಗಿ ಅರಸುತ್ತಾ , ಒಳ್ಳೆಯ ಸೂಕ್ತವಾದ ಕಂಪನಿ ಒಂದನ್ನ   ಹುಡುಕುವುದರಲ್ಲಿ ಯಶಸ್ವೀ ಆದೆ  ,  ಅಂತೂ ಒಳ್ಳೆಯ ಕಡೆ ಕೆಲಸ   ದೊರೆತು  , ಕಚೇರಿಯ  ವೇಳೆಯೂ ಅನುಕೂಲಕರವಾದ್ದರಿಂದ , ಅಲ್ಲಿಗೇ   ಸೇರಲು ನಿರ್ಧರಿಸಿದೆ .  
ಆಗ ನಾನು ಕೆಲಸಕ್ಕೆ    ಸೇರಿದ ಹೊಸತು . ಮೂಲತಹ ಇದು ಅರಬ್ ಕಂಪನಿ .  (ಬ್ರ್ಯಾಂಚ್ ಆಫೀಸು )  ಇನ್ನು ನನ್ನ ಕಚೇರಿಯ ಬಗ್ಗೆ ಹೇಳುವುದಾದರೆ , ಅಲ್ಲಿ   ಎಲ್ಲರೂ ಅರಬ ಮೂಲದವರು , ಕೆಲವರು ಬ್ರಿಟಿಶ್ಶ್ ರಿದ್ದರು .  ನಾನು ಹಾಗು ಮತ್ತೆ ಇನ್ನೊಬ್ಬರು  ಮಲಯಾಳಿ  ಇಬ್ಬರೇ ಭಾರತೀಯರು . ಕಚೇರಿಯಲ್ಲಿ  ಬಹುಪಾಲು ಸಹದ್ಯೋಗಿಗಳು  ಇಸ್ಲಾಂ ಧರ್ಮದವರು . ಅದರಲ್ಲಿ  ನಾನೊಬ್ಬಳೆ ಹಿಂದೂ . ಸಾಮನ್ಯವಾಗಿ  ಅರಬರು ಎಲ್ಲಾ ಭಾರತೀಯ ಮೂಲದವರನ್ನ  “  ಅಲ್  ಹಿಂದ್ “ ಅಂದು ಕರೆಯುತ್ತಾರೆ  !  ಮೊದಮೊದಲು ನಾನು ಅದನ್ನು ಕನ್ನಡೀಕರಿಸಿ ಕೊಂಚ  ಗಲಿಬಿಲಿ ಗೊಂಡಿದ್ದ್ದೂ ಉಂಟು  . ಅಂತೂ  ಹಾಗೂ ಹೀಗೂ ಹೊಸ ಕಚೇರಿ  ಅನಾಯಾಸವಾಗಿ  ಒಗ್ಗಿತು , ಅಲ್ಲಿ ಎಲ್ಲರೂ ಬಹಳ ಸ್ನೇಹಪರರಾಗಿದ್ದ ಕಾರಣ  ಕಚೇರಿಯ ವಾತಾವರಣ  ಕ್ರಮೇಣ  ಇಷ್ಟವಾಗತೊಡಗಿತು.
ನಮ್ಮ  ಪ್ರಾಜೆಕ್ಟ್  ಮ್ಯಾನೇಜರ್  ಮೂಲತಹ  ಲೆಬಿನಾನ್  ದೇಶದವರು  , ಬಹಳ  ಆತ್ಮೀಯವಾಗಿ ನನ್ನ ಜೊತೆ ಮಾತನಾಡುತ್ತಿದ್ದರು  . ಅವರು ಭಾರತಕ್ಕೆ ಬಹಳ ಸಲ ಪ್ರವಾಸಿಗರಂತೆ  ಬಂದು ಜೈಪುರ, ಹೈದರಾಬಾದ್ , ಬೆಂಗಳೂರಿಗೂ ಸಹ ಭೇಟಿ ನೀಡಿದ್ದರಂತೆ  ,   ಅವರ ಅಣ್ಣನ  ಮಗ  ಬೆಂಗಳೂರಿನ  ಒಂದು   ಇಂಜಿನೀರಿಂಗ್  ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವುದಾಗಿಯೂ  ತಿಳಿಸಿದ್ದರು .   ನಮ್ಮ  ಭಾರತದ  ಸಂಸ್ಕೃತಿ , ಪರಂಪರೆ ಯನ್ನ ಬಹಳ ಮೆಚ್ಚಿಕೊಳ್ತಾ ಇದ್ದರು. . ಹಿಂದಿ ಸಿನಿಮಾಗಳತ್ತ ಅವರ ಒಲವು ಕಂಡೂ ನನಗೂ ಆಶ್ಚರ್ಯ  !  ಶಾರುಖ  ಖಾನ್ , ಮಾಧುರಿ ದೀಕ್ಷಿತ್ , ಸಲ್ಮಾನ್  ಖಾನ್,  ಐಶ್ವರ್ಯ ರಾಯ್   ಸಿನಿಮಾಗಳನಂತೂ  ತಪ್ಪಿಸುತ್ತಲೇ  ಇರಲಿಲ್ಲಾ . !  ( ಇಲ್ಲಿನ ಸಿನಿಮಾ ಮಂದಿರಗಳಲ್ಲಿ   ಹಿಂದಿ ಸಿನಿಮಾಗಳಿಗೆ  ಅರೇಬಿಕ್  ಭಾಷೆಯ  “ ಸಬ್ ಟೈಟಲ್ಸ್ರ “ (sub titles ) , ತೋರಿಸುತ್ತಾರೆ   . )
ಅವರು  ನನ್ನನ್ನು   ಸಂಬೋಧಿಸುವಾಗ  ಹಲೋ ಅರ್ರಾ .........ತೀ ಅಂತ “  ರಾ  “  ಅಕ್ಷರವನ್ನ  ಎಷ್ಟು ದೀರ್ಘವಾಗಿ ಎಳೀತಾ ಇದ್ದು ಅಂದ್ರೆ ... ಅದೇ ಸಮಯದಲ್ಲಿ  ಒಂದು ಲಾಡು ಆರಾಮವಾಗಿ ಅವರ ಬಾಯಲ್ಲಿ ಹಾಕಬಹುದು ಅಷ್ಟು  !   ಲಾಡು ಹಾಕೊದಷ್ಟೇ  ಅಲ್ಲಾ ,ಅದೇ ವೇಳೆಗೆ  ಅದನ್ನ ಒಂದು ದೊಡ್ಡ ನೊಣ ಬಾಯೊಳಗೆ ನುಗ್ಗಿ   ಆರಾಮವಾಗಿ  ತಿಂದು ಹೊರಗೆ  ಬರಬಹುದು .:) 

  ಇನ್ನು ನಮ್ಮ ಬಿಡುವಿನ ವೇಳೆಯಲ್ಲಿ   ನಾವಿಬ್ಬರೂ   ಕಾಡ ಹರಟೆ  ಅಲ್ಲ ಮರಳುಗಾಡು  ಹರಟೆನೂ ಹೊಡೀತಿದ್ವಿ  !. ನಮ್ಮ ಹಿಂದೂ  ಸಂಸ್ಕೃತಿ /ಪರಂಪರೆ  ಗಳು , ನಮ್ಮ ರೂಢಿಗಳ ಬಗ್ಗೆ  ತಿಳಿದುಕೊಳ್ಳುವುದರಲ್ಲಿ ಅವರಿಗೆ ಹೆಚ್ಚಿನ ಆಸಕ್ತಿ . ನಾನು ಕೆಲವು  ಮಾಹಿತಿಗಳನ್ನು , ವಿಚಾರಗಳನ್ನು  ಯಾವಾಗಲಾದರೊಮ್ಮೆ ಅವರು  ಕೇಳಿದಾಗ  ವಿವರಿಸುತ್ತಿದ್ದರೆ  ಅದರ ಬಗ್ಗೆ  ಸ್ವಾರಸ್ಯಕರ ವಾದ ಮುಖ ಭಾವ ಹೊತ್ತು ಕೂತೂಹಲದಿಂದ ಆಲಿಸುತ್ತಿದ್ದರು .

ಹಾಗೇನೆ  ಅವರ ದೇಶದ  ಸಂಸ್ಕೃತಿ , ಆಚಾರ ವಿಚಾರಗಳನ್ನು  ,ಅವರ ದೇಶದ  ಆಂತರೀಕ ಸಮಸ್ಯಗಳನ್ನೆಲ್ಲಾ ನನ್ನೊಂದಿಗೆ    ಮುಕ್ತವಾಗಿ  ಹಂಚಿಕೊಳ್ಳುತ್ತಲೂ ಇದ್ದರು  . 
ಇಲ್ಲಿಯವರಿಗೆ  ವರ್ಷಕ್ಕೆ  ಎರಡು ದೊಡ್ಡ ಹಬ್ಬ , ಒಂದು ರಮಾದಾನ್ (ರಂಜಾನ್) ಈದ್ , ಅಂದರೆ  “ಈದ್ ಅಲ್ ಅದಾ “  ಮತ್ತು ಇನ್ನೊಂದು   “ಈದ್ ಅಲ್ ಫಿತರ್ “  ,ನಮಗೋ  ನೂರೆಂಟು ಈದ್ ಗಳು  ಆಯಿ  ಮೀನ್  ಹಬ್ಬಗಳು  :)  ಹಾಗಾಗಿ ನಾನು  ದೀಪಾವಳಿ .  ಗೌರಿ/ಗಣಪತಿ  , ಹೋಳಿ ( ಬಣ್ಣಗಳ ಹಬ್ಬ ) , ದಸರಾ ಹಬ್ಬಗಳಿಗೆ ,  ಯಾವಾಗಲಾದರೂ  ಒಮ್ಮೊಮ್ಮೆ  ಅನುಮತಿ ದೊರೆತರೆ  ಅರ್ಧ ದಿನ ಆಫೀಸಿಗೆ  ರಜೆ  ಹಾಕುತ್ತಲಿದ್ದೆ :)  ( ಈ ಹಬ್ಬಗಳ   ವಿಶೇಷತೆಗಳ   ಬಗ್ಗೆನೂ  ಅವರಿಗೆ ಹೇಳಿದಾಗ , ಒಹ್ ನಿಮ್ಮ ಹಬ್ಬಗಳೂ  ತುಂಬಾ  ಸ್ವಾರಸ್ಯಕರವಾಗಿದೆ   ಅಂತ ಮೂಗಿನ ಮೇಲೆ ಬೆರಳಿಟ್ಟು ಕೊಳ್ಳ್ತಾ ಇದ್ದರು   ! 
 ಹೀಗೆ  ಒಮ್ಮೆ ಗಣಪತಿ ಹಬ್ಬ ದ ಬಗ್ಗೆ  ಹೇಳುತ್ತಾ  ಹೇಗೆ ಗಣಪನ ಮೂರ್ತಿಯನ್ನು   ತಂದು ವಿಜ್ರಂಭಣೆಯಿಂದ  ಸ್ತಾಪಿಸಿ , ಪೂಜೆ  ಸಲ್ಲಿಸಿ  ನಂತರ  ನೀರಿನಲ್ಲಿ  ವಿಸರ್ಜನೆ  ಮಾಡ್ತಿವಿ  ಅಂತ ವಿವರಿಸಿದಾಗ    , ಅವರು  ಆಶ್ಚರ್ಯ ದಿಂದ  “  oh soo sad , ಹಾಗಾದ್ರೆ  ಪಾಪ  ಮೂರ್ತಿ ನ್ನು  ನೀರಿನಲ್ಲಿ ಹಾಕ್ಬಿಡ್ತೀರಾ ? ( ಸುಮ್ನೆ ತಂದು ವೇಸ್ಟ್   ಮಾಡ್ಬಿಟ್ರಲ್ಲಾ  ಅನ್ನ್ನೂ ಹಾಗೆ  ಹೇಳಿದಾಗ ನನಗೂ ನಗು :)   ಇನ್ನು ಇವುಗಳ ಬಗ್ಗೆ ನನಗಿರುವ  ತಿಳಿವಳಿಕೆ , ಜ್ಞಾನ ಬಂಡಾರ  ಅವರ ಮುಂದೆ ಪ್ರದರ್ಶಿಸಿ ನನ್ನ  ಬೆನ್ನನ್ನು  ಸ್ವತಹ  ನಾನೇ ತಟ್ಟಿ ಕೊಳ್ಳುವ ಅವಕಾಶ ನನಗೆ  :)
ಒಮ್ಮೊಮ್ಮೆ ನನಗೆ ಅದೇನು ನಿಮ್ಮ ದೇಶದಲ್ಲಿ ಪವಿತ್ರ ನದಿಯಂತೆ  ಗ್ಯಾನ್ಜಸ್ಗ್ಯಾ   (ಗಂಗಾ ನದಿ )  ಅದರಲ್ಲಿ ಮನುಷ್ಯರ ಆಸ್ತಿಗಳನ್ನು ಹಾಕಿಬಿಡ್ತೀರಂತೆ !! ಏಕೆ ಹಾಗೆ ? ನಿಮ್ಮ ಸಾಧುಗಳು  ಏಕೆ ಮೈಯಲ್ಲಾ  ಬೂದಿ  ಬಳಿದುಕೊಂಡು , ಇಷ್ಟುದ್ದಾ  ಕೂದಲು  ಬಿಟ್ಟ ಕೊಂಡಿರ್ತಾರಲ್ಲ್ಲಾ    ....ಅಂತೆಲ್ಲಾ  ನನ್ನ ತಲೇಲಿ  ಹುಳ ಬಿಡ್ತಾ ಇದ್ದ್ರು  ! ( ಅವರು ಯಾವದೋ  ಕುಂಭ ಮೇಳದ  ಸಾಕ್ಷ್ಯ ಚಿತ್ರಗಳನ್ನ ನೋಡಿರಬೇಕು ) ಅವರಿಗೆ  ಸಮರ್ಪಕವಾದ ಉತ್ತರ ಕೊಡ್ತಾ ಕೊಡ್ತಾ  ಅವರು ಬಿಟ್ಟ ಹುಳಾನಾ  ಅವರ  ತಲೆಗೆ ಬಿಡ್ತಾ  (ಕಚ್ಚಿಸ್ತಾ )   ಇದ್ದದ್ದು ಬೇರೆ ವಿಷಯ  ಬಿಡಿ !  ಪಾಪ ಒಳ್ಳೆಯ ವ್ಯಕ್ತಿ  , ಏನೋ ನಮ್ಮ ಕೆಲವು ಧಾರ್ಮಿಕ ಆಚರಣೆ/ಪದ್ಧತಿ  ಗಳನ್ನು ಕೇಳಿ ತಿಳಿಯುವ   ಕೂತುಹಲ ಅಷ್ಟೇ  .! :)
 ನಮ್ಮ  ಕಂಪನಿಯ ಮುಖ್ಯಸ್ತರು  ಲೋಕಲ್ಲು ,  ಅರ್ಥಾತ್   ಸಂಯುಕ್ತ ಅರಬ್ ಸಂಸ್ಥಾನದವರೇ  ! ಬಹಳ ಶ್ರೀಮಂತ  ಶೇಕ್ , ಆರಡಿ ಗಿಂತ ಎತ್ತರದ  ಅಜಾನಬಾಹು ವ್ಯಕ್ತಿ    . ಇನ್ನು ಅವರ  ಹೆಸರೂ ಕೂಡ ಅಷ್ಟೇ  ಉದ್ದ   , ಹೀಗಾಗಿ  ನಾನು  ಅವರ ಹೆಸರಲ್ಲಿ ಕೊನೆಯ ಒಂದು ಹೆಸರನ್ನು ಮಾತ್ರ ನೆನಪು ಇಟ್ಟಕೊಂಡಿದ್ದೆ !  ಅರಬ  ಧಿರಸುನ್ನು  ಧರಸಿ ಅವರು ಗಂಬೀರವಾಗಿ ಗತ್ತಿನಿಂದ ನಡೆದು  ಕಚೇರಿಯೊಳಗೆ  ಬರುತ್ತಿದ್ದರೆ   ( ಅವರಿಗಿಂತ ಮುಂಚೆಯೇ ಅವರ ಸೆಂಟಿನ ಪರಿಮಳ ದೂರದಿಂದಲೇ  ಅವರು ಬರುತ್ತಿದ್ದ ಮುನ್ಸೂಚನೆ ಕೊಡುತ್ತಿತ್ತು :)  , ಅವರ ಗಾಂಭೀರ್ಯ ತುಂಬಿದ ನಡೆ /ನುಡಿಗಳು ನಮ್ಮೆಲ್ಲರಲ್ಲೂ  ಅವರ ಬಗ್ಗೆ ಹೆಚ್ಚಿನ ಗೌರವ  ಭಾವನೆಗಳನ್ನು ಮೂಡಿಸುತ್ತಿತ್ತು . ಆದರೆ  ಅವರು ಹೀಗೆ ಗಂಬೀರವಾಗಿ  ನಡೆದುಕೊಂಡು ಕಚೇರಿಗೆ ಬರುತ್ತಿದ್ದದ್ದು  ಬರೀ  ವಾರಕ್ಕೆರಡು ಅಥವಾ ಮೂರು  ದಿನಗಳಷ್ಟೇ  !  ಏನಾದರೂ ಮೀಟಂಗ್ ಹಾಗು  ಇನ್ನಿತರ ಮಹತ್ತರ ಕೆಲಸಗಳು  ಇದ್ದಾಗಷ್ಟೇ !  . 
ನಮ್ಮ  ಆಫೀಸಿನಲ್ಲಿ   ಒಂದು  ಚಿಕ್ಕ ಚೊಕ್ಕದಾದ  ಅಡುಗೆ ಕೋಣೆ  ಇತ್ತು  . ನಮ್ಮ ಆಫೀಸ್ ಬಾಯಿ ( office boy)  ನೇಪಾಳ ದವನು , ಬೆಳ್ಳಗೆ , ಚೀನಿಯರನ್ನು ಹೋಲುತ್ತಿದ್ದ .  ವೇಳೆಗೆ ಸರಿಯಾಗಿ   ಟೀ . ಬ್ಲಾಕ್ ಟೀ , ಟರ್ಕಿಷ್ ಕಾಫೀ , ಇನ್ನು ನಮ್ಮ ಚೀನೀ ಮೇಡಂ ಗೆ  ಚೀನಾದ ಸ್ಪೆಷಲ್ ಟೀ  ಹೀಗೆ ಅನೇಕ ವಿಧವಾದ   ಪಾನೀಯಗಳನ್ನು (ಬರೀ ಸಾಫ್ಟ್ ಡ್ರಿಂಕ್ಸ್ , ಬೇರೆ ಏನನ್ನೂ  ಕಲ್ಪಿಸಕೊಳ್ಳಬೇಡಿ  :)    ಆ  ಅಡುಗೆ ಕೋಣೆಯಲ್ಲಿ ಬಿಸಿ ಬಿಸಿ ಯಾಗಿ ಮಾಡಿ ತಂದು ಕೊಡುತ್ತಿದ್ದ .
 ಒಳ್ಳೆಯ  ಹುಡುಗ,  ಶ್ರದ್ಧೆ , ಹಾಗು ಶಿಸ್ತಿನಿಂದ  ಆಫೀಸಿನ ಸಣ್ಣ ಪುಟ್ಟ ಕೆಲಸ ಮಾಡ್ಕೊಂಡಿರುತ್ತಿದ್ದ .ಅವನ್ನನ್ನು  ನಮ್ಮ ಸಹದ್ಯೋಗಿಗಳು ಕೆಲವರು  “ಕುರುಬ “  ಅಂತಲೂ ಇನ್ನು ಕೆಲವರು  “ ಕಿರಬಾ “  ಅಂತಲೂ ಕರೀತಿದ್ದ್ರು .ನನಗೇನೂ ಈ ಹೆಸರು ಸ್ವಲ್ಪ   ವಿಚಿತ್ರ ಅನಿಸಿತ್ತು  ನಾ  ಬಂದ ಹೊಸತರಲ್ಲಿ .  ಹಾಗಾಗಿ ಅವನನ್ನು “ ನಿನ್ನ ( ನಿಜವಾದ ) ಹೆಸರೆನಪ್ಪಾ ? “  ಅಂದೇ . ಅವನೂ ನಗುತ್ತಾ  “ ಮೇಡಂ ನನ್ನ ಹೆಸರು ಕೃಪಾ ಅಂತ  , ಇವರ ಬಾಯಲ್ಲಿ ನನ್ನ  ಹೆಸರು ಹೀಗಾಗಿದೆ ಅಷ್ಟೇ  ! ನಿಮಗೆ ಗೊತ್ತಾಯಿತು ನೋಡಿ “  ಅಂದಾಗ  ಸದ್ಯ  ನನ್ನ ಹೆಸರನ್ನು  ಅಷ್ಟು  ಪರಿಯಾಗಿ  ತಿರುಗಿಸಿಲ್ಲಾಪ್ಪ ಅಂತ ಸಮಾಧಾನ ಪಟ್ಕೊಂಡೆ  !
ಆಗಲೇ ತಕ್ಷಣ ನೆನಪಾಗಿದ್ದು  ನಮ್ಮ  ಆಫೀಸಿನ  PRO  ಆದ ಅಬ್ದುಲ್  ಬಾಸಿತ್ ನದು.  ಪ್ಯಾಲೆಸ್ಟೈನ್  (PALESTINE ) ದೇಶದವನು . ಸದಾ ಹಸನ್ಮುಖಿ , ಎಲ್ಲರನ್ನೂ ಆತ್ಮೀಯವಾಗಿ ಮಾತಾಡಿಸುತ್ತ , ಸದಾ ಜೋಶ ತುಂಬಿದ ವ್ಯಕ್ತಿ . ಕಚೇರಿಯಯೋಳಗಿದ್ದಾಗ   ಎಲ್ಲರೊಂದಿಗೆ ಏನಾದರೂ  ತಮಾಷೆಯಾಗಿ ಮಾತಾಡುತ್ತ   ನಗಿಸುತ್ತಿದ್ದ .
.  ನಮ್ಮ ಯೆಜಮನರು ಆತನಿಗೆ ಪರಿಚಯ , ಹಾಗಾಗಿ ನನ್ನನ್ನೂ  “ ಮೇಡಂ ರವಿ ಅಂತಲೋ ಇಲ್ಲಾ ಒಮ್ಮೊಮ್ಮೆ   ರವಿ ಮೇಡಂ “  ಅಂತ  ಕರೀತಾಇದ್ದ . (ಅವನಿಗೆ ಅನಿಸಿರಬೇಕು , ನಾನೇ ನಮ್ಮವರಿಗೆ ತಕ್ಕ ಮೇಡಂ ಅಂತ :)  ಇನ್ನೂ  ಸಣ್ಣ ವಯಸ್ಸು ,ಆದರೆ ಅವನಿಗೆ  ಆಗಲೇ ಮದುವೆಯಾಗಿ  , ಮೂರು ಚಿಕ್ಕ ಚಿಕ್ಕ   ಮುದ್ದಾದ  ಹೆಣ್ಣು ಮಕ್ಕಳಿಗೆ   ತಂದೆಯಾಗಿದ್ದ.  ,   ಒಮ್ಮೆ  ನಮ್ಮ  ಆಫೀಸ್ ಪಾರ್ಟಯಲ್ಲಿ  ಸಂಸಾರ ಸಮೇತ ಬಂದಾಗ  ,ನಾನು  ಅವನ ಮಕ್ಕಳನ್ನು ನೋಡಿ   “ ಅಬ್ದುಲ್ ಬಾಸಿತ್ ನಿನ್ನ ಮಕ್ಕಳು ಒಂದರ್ಕಿಂತಾ ಒಂದು ಎಷ್ಟು   ಮುದ್ದಾಗಿವೆ ,ಅಂತ ಕರೆದು ನನ್ನ ಹತ್ತಿರ ಕೂಡಿಸಿಕೊಂಡೆ “ ಆಗ   ಅವನು  “ “ “ಮೇಡಂ  ಸರಿ ಹಾಗಾದ್ರೆ  ಈ  ಮೂವರಲ್ಲಿ    ಒಬ್ಳನ್ನ ನಿಮ್ಮ ಸೊಸೆ  ಮಾಡ್ಕೊಂಡ ಭಾರತಕ್ಕೆ ಕರೆದುಕೊಂಡ್ ಹೋಗ್ಬಿಡಿ ,    ಅವಳನ್ನು ನೋಡುವ ನೆಪದಲ್ಲಿ ನಾನು ಭಾರತಕ್ಕೆ ಬಂದ್ಬಿಡ್ತೀನಿ      “ ಅಂತ ನಗುತ್ತಾ  ಕಿಚಾಯಿಸಿದಾಗ.   ನಾನು “ ಒಹ್ ಅಂತೂ ನನಗೆ ಗಂಡು ಮಕ್ಕಳು ಇರೋದ್ ಗೊತ್ತಾಗಿ ಒಳ್ಳೆ  ಐಡಿಯಾ ನೇ  ಕೊಡ್ತಾ ಇದ್ದೀರಾ  ಬಿಡಿ “ ಅಂತ ಉತ್ತರಿಸಿದರೂ ಆತ  ಹೇಳಿದಂತೆನಾದ್ರೂ  ಆದ್ರೆ ಹೇಗಿರತ್ತೆ  ಅಂತ ಕಲ್ಪಿಸಿಕೊಂಡು  ನಗು  ಬರದೆ ಇರಲಿಲ್ಲ :)
 
ನಮ್ಮ ಆಫೀಸಿನಲ್ಲಿ  ಮಹಿಳಾ ಸಹದ್ಯೋಗಿಗಳ   ಸಂಖ್ಯೆ ಕಡಿಮೆ . . ಅದರಲ್ಲಿ ಸಿರಿಯಾ ದೇಶದ ಒಬ್ಬ   ಸುಂದರ ಹೆಣ್ಮಗಳಿದ್ದಳು  ,ದಂತದ ಬೊಂಬೆಯ ಹಾಗೆ ತಿದ್ದಿ ತೀಡಿದ ಮೈ ಮಾಟ   . ಹೆಸರು “ಸಮಾ “ .   interior  design  ವಿಭಾಗದಲ್ಲಿ  i ಕೆಲಸ ಮಾಡ್ತಾ ಇದ್ದಳು . ನಾವಿಬ್ಬರೂ  ಆಗಾಗ ಕುಶಲೋಪಚರಿ  ವಿನಿಮಯ  ಮಾಡ್ಕೊಳ್ತಾ  ಇದ್ದ್ವಿ , ಅವಳು ನಾ ಕೆಲಸಕ್ಕೆ  ಸೇರಿದ  ಶುರುವಿನಲ್ಲಿ   ಒಮ್ಮೆ  ತನ್ನ   ಟಿಫನ್  ಬಾಕ್ಸಿನಲ್ಲಿದ್ದ  ನಾನ್ -ವೆಜ್  ಆಹಾರವನ್ನ  ನನ್ನೊಂದಿಗೆ  ಹಂಚಿಕೊಳ್ಳಲು   ಬಂದಾಗ ನಾನು ( ಅಲ್ಲಿ ನಾನೊಬ್ಬಳೇ !)  ಸಸ್ಯಹಾರಿ ಅಂತ ಗೊತ್ತಾಗಿ ,ಅಯ್ಯೋ  ಮೀನು ಕೂಡ ತಿನ್ನಲ್ವಾ  ಪಾಪ   !  ಆದರೆ   ಮೀನು ವೆಜ್  ಅಲ್ವಾ !  “ ಅಂತ ಬೇಜಾರು  ಮಾಡಿಕೊಂಡಾಗ  ನಾನು ನಕ್ಕು  “ ಸಮಾ”  ಮೀನು ವೆಜ್ ಇರಬಹುದು , ಆದರೆ  ನಾನು ಮೀನನ್ನು  ತಿಂದರೆ  (ನಮಗೆ ) ಅದು ನಾನ್ ವೇಜ್  ಅಂದಾಗ  ಅವಳಿಗೂ ನಗು !
ಒಮ್ಮೆ ಅವಳು  ಹೋಗುತ್ತಿದ್ದ  ಕ್ಲಬ್ಬೊಂದರ ,   ಸಾಂಸ್ಕೃತಿಕ  ಕಾರ್ಯಕ್ರಮದಲ್ಲಿ    ಅವಳು ಪಾಲ್ಗೊಂಡಿದ್ದಾಗ  , ಆ ಕಾರ್ಯಕ್ರಮಕ್ಕೆ   ಭಾರತೀಯ  ಉಡುಗೆಯನ್ನು  ದರಸುವ ಅವಶ್ಯಕತೆ ಒದಗಿ ಬಂದಿತ್ತು .. ಅವಳ ಭಾರತೀಯ ಗೆಳತಿ ನಾನೇ ಆಗಿದ್ದರಿಂದ ನನ್ನ ಬಳಿಗೆ ಬಂದು “ ಆರತಿ  , ದಯವಿಟ್ಟು ನೀವು  ಏನು ಅಂದುಕೊಳ್ಳ ದ್ದಿದ್ದರೆ    ನಿನ್ನ  ಯಾವುದಾದರೂ  ಗ್ರಂಡಾಗಿರುವ  ಸ್ಯಾರಿ ನನಗೆ ಒಂದು  ದಿನ ಮಟ್ಟಿಗೆ   ಬಾಡಿಗೆಗೆ ಕೊಡ್ತೀಯ ? “  ಅಂತ ಕೇಳಿದಾಗ  ನನಗೆ ನಗು . ನಾನು  “ಅಯ್ಯೋ ಧಾರಾಳವಾಗಿ ಕೊಡ್ತೀನಿ , ರೆಂಟು /ಬಾಡಿಗೆ  ಏನೂ ಬೇಡಮ್ಮ “  ಅಂದೆ . “  ಒಹ್ ತುಂಬಾ  ಧನ್ಯವಾದಗಳು  ! ಹಾಗಿದ್ರೆ ಸರಿ ನಾಳೇನೆ  ಕಾರ್ಯಕ್ರಮ , ನನಗೆ ನೀವೇ   ಸೀರೆ   ಉಡಿಸಿ ಬೇಕು ಪ್ಲೀಜ್   “ ಅಂತ ವಿನಂತಿಸಿ , ನನ್ನಿಂದ ಅಸ್ತು ಅಂತ ಅನಿಸಿಕೊಂಡ ಮೇಲೆ  ನಿರಾಳವಾಗಿ   “ಬಾಯ್  ಆರತಿ ತುಂಬಾ  ಧನ್ಯವಾದಗಳು “ ಅಂತ ಮುದ್ದಾಗಿ ವಿದಾಯ ಹೇಳಿ ಹೊರನಡೆದಳು  .
 ಸರಿ ನನ್ನ  ಒಂದು ಗ್ರಾಂಡ್  ಆಗುರುವ ಸೀರೆ  ಹಿಡಿದು   ಮಾರನೆಯ ದಿನ ಆಫೀಸಿಗೆ   ಬಂದಾಗ  ಆಗಲೇ ಅವಳು  ಚಂದದ   ಬಳೆ  ತೊಟ್ಟು , .ಮೇಕ್ಅಪ್  ಮಾಡಿಕೊಂಡು  ತಯಾರಾಗಿ  ಕಾಯ್ತಾ  ಇರುವುದು ನೋಡಿ ನಾನು ತಡ ಮಾಡದೆ  ಅವಳ  ಚೇಂಬರ್ ಗೆ ಕಾಲಿಟ್ಟೆ .  ಅಂದು ಅವಳ ಕೋಣೆ  ನಮ್ಮ ನಾಟಕದ  ಗ್ರೀನ್ ರೂಂ ಆಗಿ ಮಾರ್ಪಾಡಾಯಿತು  ,ಅವಳಿಗೆ  ನನ್ನದೇ ಒಂದು ರೆವಿಕೆ ಅಡ್ಜಸ್ಟ್ ಮಾಡಿ  ,  ನೀಟಾಗಿ ಸೇರಿ ಉಡಿಸಿ , ಬಿಂದಿ ಇಟ್ಟು ( ವಧುವಿನಂತೆ ) ಅವಳನ್ನು ಹೊರಗೆ ಕರೆ ತಂದಾಗ , ಇನ್ನಿತರ  ಅರಬ್  ಸಹದ್ಯೋಗಿಗಳು  ,   ಅವಳನ್ನೇ ನೋಡುತ್ತಾ  ಕಣ್ಣಲ್ಲೇ ನಕ್ಕು “ ವಾಹ್  , ಇದೇನು ಅರ್ರಾ....ಥಿ , ಸಮಾಳನ್ನು ಅಪ್ಪಟ ಭಾರತೀಯಳನ್ನಾಗಿ   ಮಾಡಿಬಿಟ್ಟಿದ್ದೀರಲ್ಲಾ  ಸೂಪರ್ “  ಅಂದಾಗ  ನನಗೆ ಏನೋ ಹುಮ್ಮಸ್ಸು . ಅವಳು  ಪದೆ ಪದೆ  “ ಬಹುತ್ ಶುಕ್ರಿಯ  ಆರತಿ  , ಅಂತ  ತಾ ಕಲಿತ ಒಂದೆರಡು ಹಿಂದಿ ಶಬ್ದಗಳನ್ನು  ನನ್ನ  ಮೇಲೆ ಪ್ರಯೋಗಿಸಿ ,  ಸೇರೆಯನ್ನು ಮೇಲೆ ಹಿಡುದು  ಕಷ್ಟಪಟ್ಟು   ಸಂಭಾಳಿಸಿಕೊಂಡು  ನಡೆದು ಹೋಗುವುದು ನೋಡಿ ನನಗೂ  ನಗು :) 
  (ಸದ್ಯ ಕಾರ್ಯಕ್ರಮ ಮುಗಿಯುವವರೆಗೂ  ಅವಳ ಸೇರೆ ಯಥಾ ಸ್ತಿತಿ ಯಲ್ಲಿದ್ದರೆ ಸಾಕಪ್ಪ ಅಂತ ಬೇಡಿಕೊಂಡೆ 
ಈ ಮದ್ಯೆ ಒಂದು ದಿನ ನಮ್ಮ  ಕಚೇರಿಯಲ್ಲಿ ಅಕ್ಕೋಟೆಂಟ್ ಆಗಿದ್ದ ಹುಸ್ಸೈನ್ ( ಕೇರಳದವರು ,   ) .  ನನಗೆ ಒಂದು ಸುದ್ದ್ದಿ ತಂದರು,ನಾನು ಮೊದಲೇ ಹೇಳಿದಂತೆ ನಾವಿಬ್ಬರೇ ಭಾರತೀಯ ಮೂಲದವರು ನಮ್ಮ  ಕಚೇರಿಯಲ್ಲಿ .  ಅಂದು  ಅವರು ಉತ್ಸಾಹದಿಂದ  “  ಆರದಿ  ನಿಮಗೆ  ಗೊತ್ತಾ  ? ನಮ್ಮ  ಆಫೀಸಿಗೆ ಒಬ್ಬ ಹೊಸ  ಅಪರೇಷನ್ ಮ್ಯಾನೇಜರ್  ( operation manager ) ಸೇರ್ಪಡೆ  ಆಗ್ತಾ ಇದ್ದಾರಂತೆ  ! ಹೆಸರು  “ಸಮೀರ್  ಆಚಕರ್    ಅಂತೆ !  
ನಾನಾಗ ತಕ್ಷಣ   “ ಸಮೀರ್ ಆಚಾರ್ “ ಇರಬಹುದು ಅನ್ಸತ್ತೆ  ಹುಸ್ಸೈನ್ , ಬಾರತೀಯ ಹೆಸರು ಇದ್ದ ಹಾಗಿದೆ “ ಅಂದೇ !   ಅವರು ಹೇಳಿದ ಹೆಸರಿನ ಸುತ್ತ ನನ್ನ ಊಹಿಸುವಿಕೆ  ಆ ಕ್ಷಣದಿಂದಲೇ  ಪ್ರಾರಂಭ ವಾಯಿತು . ಒಹ್ ಸಮೀರ್ ಆಚಾರ್  ಅಂದ್ರೆ ಕರ್ನಾಟಕದವರು ಇರಬಹುದಲ್ಲವೇ   !  ಅಂದುಕೊಳ್ಳುತ್ತಾ   ಮನಸ್ಸಿಗೆ ಒಂಥರಾ  ಖುಷಿ ಆಯಿತು , ಹಾಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತ ಮನೆತನಕ ಬಂದು , ಮನೆಯಲ್ಲೂ ನಮ್ಮವರಿಗೆ ಈ ಸುದ್ದಿ ಯನ್ನ ಬಿತ್ತರಿಸಿದಾಗ  ಅವರೂ  ಆಶ್ಚರ್ಯ ,ಖುಷಿ ಒಟ್ಟೆಗೆ ವ್ಯಕ್ತ ಪಡಿಸಿದ್ದರು  !  ಈ ಅರಬರೆ ತುಂಬಿದ  ಆಫೀಸಿನಲ್ಲಿ  ನಮ್ಮ ಕನ್ನಡವರಿದ್ದರೆ ಎಷ್ಟು ಚೆನ್ನ ಎನ್ನುವ  ಸಂತಸದ ಭಾವನೆಯನ್ನು  ನನ್ನೊಳಗೆ  ಅರಳಿ ಹೂವಾಗಿತ್ತು ,   ಅಂತೂ ನಮ್ಮ ಹೊಸ  ಮ್ಯಾನೇಜರ್  ಆಗಮಿಸುವ  ಘಳಿಗೆ  ಬಂದೆ ಬಿಟ್ಟಿತು ,ನನಗೋ  ಅವರನ್ನು ನೋಡುವ  ಕೊತೂಹಲ ಬೆಳೆದು ಹೆಮ್ಮರವಾಗಿ ನಿಂತ್ತಿತ್ತು !  ಅಂದು ಬೆಳಿಗ್ಗೆ  ಒಂಬತ್ತರ ಸುಮಾರಿಗೆ  ,ಸೂಟು /ಟೈ  ನಲ್ಲಿ  ಆಗಷ್ಟೇ ಬ್ಯುಸಿನೆಸ್ಸ್  ಮೀಟಿಂಗ್ ನಿಂದ  ಬಂದಂತೆ  , ಒಬ್ಬ  ಎತ್ತರದ  ಸುಂದರ ವ್ಯಕ್ತಿ  ಆಫೀಸಿನೊಳಗೆ   ಕಾಲಿಟ್ಟರು .  ನಮ್ಮ ಸಹದ್ಯೋಗಿಗಳು ಅವರನ್ನು ಸ್ವಾಗತಿಸಿ ಹೂ ಗುಚ್ಚಳನ್ನು ಕೊಟ್ಟ ನಂತರ , ನಮ್ಮ ಮ್ಯಾನೇಜರ್  ಅವರನ್ನ ಪರಚಯಿಸುತ್ತ  “ ಫ್ರೆಂಡ್ಸ್  ಇವರು ಸಾಮೇರ್  ಅಚಾಕರ್  “  ( saamer  achaakar  “)  ಅಂತ  ನಮ್ಮ ಹೊಸ ಅಪರೇಷನ್  ಮ್ಯಾನೇಜರ್ ,  ಲೆಬಿನಾನಿನ ದೇಶದವರು “  !!!!  ಅಂದರು   .  ನಾನು ಅವರಿಗೆ  “ ಹಲೋ ವೆಲ್ಕಂ ಸರ್  “ ಅಂತ ನಕ್ಕು ಹೇಳಿದರೂ ,  ನನ್ನ ಉತ್ಸಾಹ ಜರ್ರನೆ ಇಳಿದು , ಮನದಲ್ಲಿ  ನಿಧಾನವಾಗಿ ನಿರಾಶೆಯ ಕಾರ್ಮೋಡಗಳು ಹೆಪ್ಪುಗಟ್ಟಲಿಕ್ಕೆ ಶುರು ಮಾಡಿದ್ದವು  !  . ಇನ್ನು  ನಾ ಕಟ್ಟಿಕೊಂಡಿದ್ದ  ಊಹೆಯ  ಸೌಧ   ಗ್ರೌಂಡ್ ಜೇರೊ  ಆಗಿ ಮಲಗಿ ಬಿಟ್ಟಿತ್ತು  ಅಂತ ಬೇರೆ ಹೇಳಬೇಕೆ :)
ಆದರೆ ಆ ( ಪೆದ್ದ) ಭಾವನೆಗಳೆಲ್ಲಾ  ಆ ಕ್ಷಣಕ್ಕಷ್ಟೇ   ಜಾಮಯಿಸಿಕೊಂಡು ನಿಧಾನವಾಗಿ  ಕರಗಿ ನೀರಾಗಿ ಹರಿದು ಹೋಯಿತು ,ಅಷ್ಟೇ  ಅಲ್ಲದೆ ನನಗೆ ನನ್ನ  ಊಹಾಪೋಹಕ್ಕೆ  ನನ್ನ ಮೇಲೇ ನನಗೆ  ನಗು ಬರದೆ ಇರಲಿಲ್ಲ ! .  ಆದರೆ  ಆಸೆ ಪಡುವುದರಲ್ಲಿ ತಪ್ಪೇನು  ಇಲ್ಲ ಅಲ್ವೇನ್ರಿ :) ?  
ಇರಲಿ ,  ಈ ನಮ್ಮ ಹೊಸ  Operation manager  ಮಾತ್ರ ನಮ್ಮ ಕಚೇರಿಗೆ ಕಾಲಿಟ್ಟಾ ಗಿನಿಂದ  ಎಲ್ಲರ ಜೊತೆ ಸೌಹಾರ್ದ ತೆಯೇನ್ನೇ ಮೆರೆದಿದ್ದರು , ಎಂದೂ ಬಾಸ್ ಗಿರಿ ತೋರದೆ ತಮ್ಮ  ಕಾರ್ಯ ಕ್ಷಮತೆ ,ಸ್ನೇಹ  ಸ್ವಭಾವದಿಂದ   ನಮೆಲ್ಲರ ಮನಸನ್ನ ಬಹಳ  ಶೀಘ್ರದಲ್ಲೇ ಗೆದ್ದು ಬಿಟ್ಟಿರು  . 
ನನ್ನ ದಿನಚರಿಗಳು  ಏರು ಪೇರಿಲ್ಲದೆ ಸಾಗಿತ್ತು .  ಆಗ ಜುಲೈ ತಿಂಗಳು , ಆ  ವರ್ಷ ಕಾರಣಾತರಗಳಿಂದ   ನಾವು  ನಮ್ಮ ವಾರ್ಷಿಕ    ರಜೆಗೆ  ಭಾರತಕ್ಕೆ ಹೋಗಲಾಗಲಿಲ್ಲ . ಆಗ ಶ್ರಾವಣ ಮಾಸ  ಶುರುವಾಗಿತ್ತು , ಅಂದು  ನಾಗರ ಪಂಚಮಿ  ಹಬ್ಬ . ಈ ಹಬ್ಬಕ್ಕೆ ನನಗೆ   ತವರಿಗೆ ಹೋಗುವ ರೂಡಿ .ಹೀಗಾಗಿ  ಅಮ್ಮನ   ನೆನಪಾಗಿ ಯಾಕೋ ಮನಸ್ಸಿಗೆ ಬೇಸರವಾಯಿತು . ಬೆಂಗಳೂರಿನಲ್ಲಿ  ನಾವುಗಳು  ಎಷ್ಟು ಶೃದ್ಧಾ ಭಕ್ತಿಯಿಂದ  ಹಾಗು ಉತ್ಸಾಹದಿಂದ  ಈ ಎಲ್ಲ  ಪಾರಂಪರಿಕ ಹಬ್ಬಗಳನ್ನು ಆಚರಿಸ್ತಾ  ಇದ್ದದ್ದು ನೆನಪಿಸಿಕೊಂಡು  ತಾಯಿನಾಡಿನ ಸೆಳೆತ  ತೀವ್ರವಾಗಿ ಕಾಡಿತು.  ಆದರೆ ನಾನು ಇಲ್ಲಿ ಬಂದ ಮೇಲೂ ಇವುಗಳನ್ನೆಲ್ಲಾ  ಯಥಾಶಕ್ತಿಯಾಗಿ  ಆಚರಿಸಿಕೊಂಡು ಬಂದಿದ್ದೆ.  ಹಾಗೇನೆ  ಇದರಲ್ಲಿ ನನ್ನ ಸ್ವಯಂ ಪ್ರೇರಿತ  ಆಸಕ್ತಿ ,ಬೆಳದುಬಂದ   ಬಂದ ಸಂಸ್ಕೃತಿಯೂ   ಕಾರಣ ವಿರಬಹುದು . ಇನ್ನೊಂದೆಂದರೆ   ಇಲ್ಲಿ   ಎಲ್ಲಾ  ರೀತಿಯ   ಹಬ್ಬದ ಸಾಮಗ್ರಿಗಳು /  ಹೂವು .ಹಣ್ಣುಗಳು  ಯಥೇಚ್ಚವಾಗಿ ಸಿಕ್ಕು ಹಬ್ಬವನ್ನ ಆಚರಿಸಲು ಅನುಕೂಲವಾಗಿತ್ತು.  ಇನ್ನು  ನಮ್ಮ ಅಕ್ಕ ಪಕ್ಕ ಇದ್ದ  ಕನ್ನಡ  ಬಳಗದವರ ಜೊತೆ   ಸೇರಿ ಸಾಂಪ್ರದಾಯಕವಾಗಿ ಕೆಲವು  ಆಚರಣೆಗಳನ್ನ  ಅವರೊಂದಿಗೆ  ಸೇರಿ ಸಂಭ್ರಮಿಸುವ   ಸದವಕಾಶ ,ಸುಯೋಗ ಕೂಡ ನನಗೆ ಒದಗಿ ಬಂದಿತ್ತು . 
ಸರಿ ಅಂದು  ನಾಗರ  ಪಂಚಮಿಯಾದ್ದರಿಂದ  ನಾನೂ ಸಹ  ಭಕ್ತಿಯಿಂದ  ನಾಗಪ್ಪನಿಗೆ  ಹಾಲೆರೆದು  , ತಂಬಿಟ್ಟು  ಉಂಡೆಗಳನ್ನು  ಅರ್ಪಿಸಿ , ಪೂಜೇ ಮುಗಿಸಿ  ಆಫೀಸಿಗೆ ಹೊರಟೆ . ಆಗ  ನನ್ನ ಲೆಬನೀಸ್  ಮಿತ್ರರು  ( ಮೊದಲು ಇಲ್ಲಿ  ನಿಮಗೆ ಪರಿಚಯಿಸಿದ್ದ ಪ್ರಾಜೆಕ್ಟ್ ಮಾನೇಜರ್ , ನೆನಪಿದೆಯಲ್ವ !  ನನ್ನು ಕುರಿತು  “ ಒಹ್ ಅರ್ರಾ ....ತೀ ,ಏನು ಇವತ್ತು ಭಾರತೀಯ  ಉಡುಗೆಯಲ್ಲಿ ಬಂದು ಬಿಟ್ಟಿದ್ದೀರಾ  ! ತುಂಬಾ ಚನ್ನಾಗಿದೆ  ,! ಇದು ನಿಮಗೆ  ಯಾವ ಈದ್ ? ಅಂತ  ತಮಾಷೆ  ಮಾಡಿದಾಗ , ನನಗೂ    ಇವರಿಗೆ   ಸ್ವಲ್ಪ   ತಮಾಷೆ ಮಾಡಿನೋಡೋಣಾ  ಅಂತ ಅನಿಸಿತು .   ನಾನು “ ಸರ್  ಇವತ್ತು  snake god “ (ನಾಗಪ್ಪನ) ಹಬ್ಬ ! ಅಂದಾಗ ಅವರಿಗೆ ಒಂಥರಾ   ಶಾಕ್  !   ಆಗ ಅವರು  “ ಏನು ! ನಿಮಗೆ ಹಾವೂ ಕೊಡಾ ದೇವರೇ “  ? ಅಂತ  ಭಯ ಮಿಶ್ರಿತ  ಆಶ್ಚರ್ಯದ ಕಣ್ಣುಗಳನ್ನು  ದೊಡ್ಡದಾಗಿ   ಹಿಗ್ಗಿಸಿ  ಕೇಳಿದರು. !  ನಾನು  “  ಹೌ ದು ಸರ್  ನಮ್ಮ ಹಿಂದೂ ಸಂಪ್ರದಾಯದಲ್ಲಿ    ಕೆಲವು ಪ್ರಾಣಿಗಳು  ವಿಶೇಷವಾದವು , ಅವುಗಳು ನಮಗೆ  ದೇವರ  ಸ್ವರೂಪ  “ ಅಂದೆ .  ಅವರು  ಸುಮ್ನೆ ಇರದೇ , ಗೊತ್ತೇ ಇದ್ಯಲ್ಲ  ಅವರಿಗೆ ಇನ್ನಷ್ಟು   ತಿಳಿಯುವ  ಕೂತೂಹಲ  ಎಂದಿನಂತೆ  ! “ ಸರಿ   ಈ ಹಬ್ಬಾನಾ   ಹೇಗೆ ಆಚರಸ್ತೀರಾ   ?  “ ಅಂತ ಆಸಕ್ತಿಯಿಂದ ಕೇಳಿದ್ರು . ನಾನಾಗ  “  ಸರ್  ನಾವು   ಸ್ನೇಕ ಗಾಡ್ನನ್ನು ಭಕ್ತಿಯಿಂದ  ಪೂಜಿಸಿ , ಹಾಲೆರದು  , ಸ್ವೀಟ್ಟ್ಗಳನ್ನು  ಅರ್ಪಿಸ್ತೇವೆ ಅಂದೆ  !”  ಅವರು ಆಗ  ಜೀವಂತ ಹಾವನ್ನೇ  ಕಲ್ಪಿಸಿಕೊಂಡು  ,  ನನ್ನನ್ನು   ಕಾಡಿನಲ್ಲಿ  ಬೇಟೆಗಾರನ  ರೊಪದಲ್ಲಿ  ಚಿತ್ರಿಸಿಕೊಂಡರೇನೂ   ಅನ್ಸತ್ತೆ  !  ,ಅವರಿಗೇಕೂ   ನಾನು ಹೇಳುತ್ತಿರುವುದು  ಮನದಟ್ಟಾಗಲಿಲ್ಲ  .   ! ಅದರ ಬದಲು ಅವರ ಮನವೇ  ದಟ್ಟ  ಕಾಡಾಗಿ  ಅಲ್ಲಲ್ಲಿ  ಆಶ್ಚರ್ಯದ ಮುಳ್ಳುಗಳೇ  ಎದ್ದು ನಿಂತ ಹಾಗೆ ನನಗೆ ಕಂಡಿತು , ನಾನು ಒಳಗೊಳಗೇ ನಗು ತಡೆದು ಕೊಂಡು ಮುಂದುವರಿಸುತ್ತಾ  “ ಸರ್  ಪೂಜೆ ಎಲ್ಲಾ  ಮುಗಿಸಿ   ನ್ಯೈವೇದ್ಯಾ  ( ಈ ಶಬ್ದ ಅವರಿಗೆ ವೇದ್ಯ ವಾಗುವ  ವಿವರಿಸಿ   )    ವಾದ  ನಂತರ ನಾವೂ   ಸ್ವೀಕರಸ್ತೀವಿ .” ಅಂದೆ . ಅವರು  ಸೀಟಿನಿಂದ ಚಂಗನೆ ಮೇಲೆದ್ದು   “  you u mean  the snake ? “  ಅಂತ  ಘಾಬರಿಯಾಗಿ ಕೇಳಿದ್ರು :)  ( ಅವರಿಗೆ  ಚೀನಾ ದೇಶಾ ನೆನಪಾಗಿರಬೇಕು, ) ಆಗಾ ನನಗೆ  ನಗು ತಡೆಯಲು ಆಗಲೇ ಇಲ್ಲ  “  ಸರ್  ಅಲ್ಲ !  ದೇವರಿಗೆ ಅರ್ಪಿತವಾಗಿರುವ  ಸ್ವೀಟ್ಸ್   ತಿಂತೀವಿ  “ ಅಂದೇ     (ನನ್ನ ತಮಾಷೆ ಹೀಗೆ  ಕ್ಲಾಮಾಕ್ಸ್ ( climax )  ಹಂತಕ್ಕ  ತಲುಪಿದ್ದು  ಕಂಡು ನನಗೆ  ಆಶ್ಚರ್ಯ ಒಂದು ಕಡೆ ಯಾದರೆ   ಉಕ್ಕಿ ಬರುತ್ತಿರುವ ನಗು ಇನ್ನೊಂದು  ಕಡೆ     ! ಆಗ   ಅವರೂ ಜೋರಾಗಿ ನಗುತ್ತಾ   “ ಓಹೋ   ಅರ್ರಾ  ....ತಿ  ನನಗೆ ತಮಾಷೆ ಮಾಡ್ತಾ ಇದ್ದೀರಾ !   ಪರವಾಗಿಲ್ಲಾ  ನೀವು   !  ಆದರೆ  ನೀವು  ಎಲ್ಲಾ ದೇವರಗಳನ್ನು  ಮೂರ್ತಿಗಳ  ರೂಪದಲ್ಲಿ  ಪೂಜಿಸ್ತೀರಾ ಅಲ್ವಾ , ? ನನಗೆ ಗೊತ್ತು ಬಿಡಿ ,   ನೀವು ಮೊದಲೇ ನನಗೆ ಇದರ ಬಗ್ಗೆ ಹೇಳಿದ್ದೀರಾ ಅಲ್ವಾ ?  ನಾನೂ  ನಿಮಗೆ ಸ್ವಲ್ಪ  ತಮಾಷೆ   ಮಾಡಿ ನೋಡ್ತಾ ಇದ್ದೆ ಅಷ್ಟೇ “  :) ಅಂತ ಕಿಚಾಯಿಸಿದಾಗ   ಇಬ್ಬರೂ ಮನಸಾರೆ  ನಕ್ಕು ಬಿಟ್ಟೆವು  !
ಹೀಗೇ  ಮನದ ಖಜಾನೆಯಿಂದ ನೆನಪುಗಳನ್ನ  ಕೆದಕುತ್ತಾ  ಹೋದಾಗ ,  ಅವುಗಳ ಜೊತೆಯಲ್ಲೇ ಈ ಸ್ವಾರಸ್ಯ ಕರ ಅನುಭವಗಳೂ  ಮುತ್ತುಗಳಂತೆ ಒಂದೊಂದೇ ಹೊಳೆಯುತ್ತಾ  ನನ್ನ ಕೆಣಕಲು ,  ನನ್ನ ತುಟಿಯ ಮೇಲೆ  ಮಂದಹಾಸ, ಮೂಡಿ  ,ಮನಸ್ಸಿಗೆ  ಮಾತ್ರ ಕಚಗುಳಿ ಇಟ್ಟ ಅನುಭವ !

ಆರತಿ ಘಟಿಕಾರ್
ದುಬೈ

3 comments :